ಮಲ್ಲಿಕಾವಲ್ಲಭ (ಅಭಿಸಾರಿಕೆಯ ಕತೆಗಳು-೫)

November 23, 2009 by ನೀಲಾಂಜಲ

ಅಭಿಸಾರಿಕೆ ಕಾಲ್ಬೆರಳಿನಿಂದ ಜೀಕುತ್ತ ಮಲ್ಲಿಗೆಯ ಬಳ್ಳಿಯಲ್ಲಿ ಜೋಕಾಲಿಯಾಡುತ್ತಿದ್ದಳು. ಜಾಜಿ ಮಲ್ಲಿಗೆಯು ಪಾರಿಜಾತದ ಕಂಪಿನಲ್ಲಿ ಮಿಳಿತಗೊಂಡು ಇಡೀ ವಾತವರಣ ಮತ್ತೇರಿದಂತಿತ್ತು. ನನ್ನ ನೋಡಿದವಳೇ ನಾಚಿಕೊಂಡು ಅಲ್ಲಿಂದೆದ್ದು ಓಡಿ ನೈದಿಲೆಯ ಕೊಳದಲ್ಲಿ ಧುಮುಕಿ ಅಲೆಗಳನ್ನೆಬ್ಬಿಸಿದಳು. ಅಲ್ಲಿಂದ ಎದ್ದು ಬಂದವಳ ಮೈಬಿಸಿಗೆ ನೀರೆಲ್ಲ ಆರಿತ್ತು. ಕಣ್ಗಳಲ್ಲಿ ವಿಚಿತ್ರ ಮಿಂಚಿತ್ತು.

ಪ್ರಭಾವತಿಯ ರಾಜ ಜಕ್ಕಣ್ಣನ ಮಗಳು ಮಲ್ಲಿಕೆ ಇನ್ನೂ ಕನ್ಯೆಯೇ. ಆಕೆಯ ಕನ್ಯಾಸೆರೆ ಕಳೆಯುವವರಿಗೆ ರಾಜ ಇಡೀ ರಾಜ್ಯ ಘೋಷಿಸಿದ್ದ. ಸುದ್ದಿ ತಿಳಿದವರಾರು ಅತ್ತ ಸುಳಿದಿರಲಿಲ್ಲ. ಅತೀ ಬುದ್ಧಿವಂತರಿಬ್ಬರು ಬಂದವರು ಮಾರನೇಯ ದಿನ ಹೆಣವಾಗಿ ಮರಳಿದ್ದರು. ರಾತ್ರಿ ಏನಾಯಿತೆಂದು ಯಾರಿಗೂ ತಿಳಿದಿರಲಿಲ್ಲ.

ಆಕೆಗಿದ್ದಷ್ಟು ಲಾವಣ್ಯ, ಸೌಂದರ್ಯ ಯಾರೂ ನೋಡಿರಲಿಕ್ಕಿಲ್ಲ, ಮುಂದೆಯೂ ಹುಟ್ಟಲಿಕ್ಕಿಲ್ಲ. ಹೀಗಿರಲು ದಂಡೆತ್ತಿ ಬಂದ ಮಾಯಾಪುರಿಯ ರಾಜ ಪ್ರಭೇಂದ್ರ ಪ್ರಭಾವತಿಯನ್ನು ಗೆದ್ದು ಮಲ್ಲಿಕೆಯನ್ನು ಕೊಲ್ಲಲಾಗದೇ ತನ್ನೊಂದಿಗೆ ಕರೆದೊಯ್ದ. ಆಕೆ ಆತನ ಪಾಲಿಗೆ ಭಾಗ್ಯ ದೇವತೆಯಾದಳು. ನೆರೆಹೊರೆಯ ರಾಜರನ್ನೆಲ್ಲ ಮಣಿಸುತ್ತ ಮಹಾರಾಜನಾದ. ಈಗ ಆತನ ಮಗ ಯುವರಾಜ ಕಾಂತರಾಜನಿಗೆ ಮಲ್ಲಿಕೆಯ ಮೇಲೆ ಪ್ರೇಮ. ಆದರೆ ಪ್ರಭೇಂದ್ರ ಬಿಡಬೇಕಲ್ಲ. ಆಕೆಯನ್ನು ಮುಗಿಸಲು ಕತ್ತಿ ಎತ್ತಿದ. ಆದರೆ ಅದೇ ಕತ್ತಿಯನ್ನು ಮಗ ಅಪ್ಪನ ಕುತ್ತಿಗೆಗೆ ಇಟ್ಟು ಮಗದೊಂದನ್ನು ತನ್ನ ಕುತ್ತಿಗೆಗೆ ಇಟ್ಟುಕೊಂಡು ಆಕೆಯನ್ನು ತನ್ನವಳಾಗಿಸಿಕೊಂಡ.

ಆ ರಾತ್ರಿ ಕಾಂತ ತನ್ನ ಕಾಂತೆಯ ಬಳಿ ತೆರಳಿದರೆ ಪ್ರಭೇಂದ್ರ ತನ್ನನ್ನು ಸ್ವರ್ಗಕ್ಕೆ ಏರಿಸಲು ಇನ್ನೊಂದು ಮಗನಿಲ್ಲದಿದ್ದುದ್ದಕ್ಕೆ ದುಃಖಿಸುತ್ತಾ ರಾಜ್ಯಕ್ಕೆ ವಾರಸುದಾರ ಬೇಕೆಂದು ಕಿರಿರಾಣಿಯ ಅಂತಃಪುರಕ್ಕೆ ತೆರಳಿದ.

ಇತ್ತ ತಾರಸಿಯ ಮೇಲೆ ಕಾಂತರಾಜ ಹುಣ್ಣಿಮೆಯ ಬೆಳಕನ್ನು ಉಟ್ಟು ದಿಗಂತವಾಗಿ ನಿಂತಿದ್ದ. ಮಲ್ಲಿಕೆ ಬಳ್ಳಿಯಾಗಿ ಆತನ ಮೈತುಂಬ ಹಬ್ಬುತ್ತಿದ್ದಳು. ಬೇರುಗಳು ಮೇಲ್ಪದರ ಸೀಳಿ ಅವನಾಳಕ್ಕೆ ಇಳಿಯುತ್ತಿದ್ದವು. ಇನ್ನೇನು ಹಿಡಿತ ಬಿಗಿಯಾಗಬೇಕು, ಜೀವ ಹೀರಬೇಕು ಅನ್ನುವಷ್ಟರಲ್ಲಿ ಏನಾಯಿತೋ ಕಾಣೆ ಬಂಧ ಕಳಚಿ ಸುರುಳಿ ಸುರುಳಿಯಾಗಿ ಕೆಳಗೆ ಉರುಳಿದಳು. ಚೆಲ್ಲಿದ ಶರೀರರದ ತುಂಬೆಲ್ಲ ಹೂವು ಬಿರಿಯತೊಡಗಿತು. ಅರಳಿದ ಹೂವುಗಳು ನಾಚಿ ಕೆಂಪಾಗತೊಡಗಿದವು. ಕಾಂತ ಮೆಲ್ಲಗೆ ಬಾಗಿ ಒಂದೊಂದೆ ಹೂವನ್ನು ಆರಿಸಿ ತನ್ನ ಮುಡಿಗೇರಿಸಿಕೊಳ್ಳತೊಡಗಿದ.

ಆ ರಾತ್ರಿ ಚಂದಿರ ನಿದ್ದೆ ಮಾಡಲಿಲ್ಲ. ರೋಹಿಣಿಯ ನೆನಪಲ್ಲಿ ಕುದ್ದುಹೋದ.

ಗೌತಮಿ(ಅಭಿಸಾರಿಕೆಯ ಕತೆಗಳು-೪)

November 20, 2009 by ನೀಲಾಂಜಲ

ಮಧ್ಯರಾತ್ರಿ ಮನೆಗೆ ಮರಳಿದ ಮೇಲೆ ಅಭಿಸಾರಿಕೆ ಎಲ್ಲೆಂದು ಹುಡುಕುತ್ತೇನೆ. ಎಲ್ಲೂ ಕಾಣಿಸುವುದಿಲ್ಲ. ಎಲ್ಲಿ ಹೋದಳಿವಳು ಎಂದು ಅಂಕಣದ ಮಧ್ಯ ಇಣುಕಿದರೆ ಅದೋ ಅಲ್ಲಿ ಚಂದ್ರನ ಕೆಳಗೆ ಕೌಪಿನ ತೊಟ್ಟು ಪದ್ಮಾಸನದಲ್ಲಿ ಕುಳಿತಿದ್ದಾಳೆ. ಎದುರಿಗೆ ಹೊಚ್ಚ ಹೊಸ ಕುಂಡದಲ್ಲಿ ನೆಟ್ಟ ಆಲದ ಮರದ ಸಸಿ ! ನನಗೆ ನಗು ತಡೆಯಲಾಗಲಿಲ್ಲ.

ಇದೇ ಸಂಜೆ ನಾವಿಬ್ಬರೂ ದೀಪಾಲಂಕೃತ ಊರನ್ನು ನೋಡಲೆಂದು ಆಕಾಶಯಾನ ಕೈಗೊಂಡಿದ್ದೆವು. ಮೇಲಿನಿಂದ ಇಡೀ ಊರಿಗೆ ಊರೇ ಹೊಳೆಯುತಿತ್ತು. ಹಣತೆಯ ದೀಪಗಳು ನಕ್ಷತ್ರದಂತೆ ಮಿಣುಗುತ್ತಿದ್ದವು. ಹೀಗೆ ಸೊಗಸಾದ ಮನೆ-ಮಠಗಳನ್ನು ನೋಡಿ ತಣಿಯುತ್ತ ಊರ ಹಿಂದಿನ ಬೀದಿಯಲ್ಲಿ ಇಳಿದೆವು.

ನಾವು ನಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದಾಗ ಹಿಂದಿನಿಂದ ಬಿದ್ದ ಧಪ್ ಎಂಬ ಶಬ್ದಕ್ಕೆ ಅತ್ತ ತಿರುಗಿದೆವು. ಕರಚ ದುಮುಗುಡುತ್ತ ಬಿದ್ದ ಬಾಗಿಲಿಗೆ ಇನ್ನೆರಡು ಸಲ ಒದ್ದು ನಮ್ಮ ಮುಂದಿನಿಂದ ಸರಿದುಹೋದ. ಕಟ್ಟೆಯ ಬದಿಯಲ್ಲಿ ನಾಗಿ ಗೋಳೊ ಎಂದು ಅಳುತ್ತಿದ್ದ ಕೆಂಚಿಯನ್ನು ಸಮಾಧಾನಿಸುತ್ತಿದ್ದಳು. ಒಳಗೆ ಕೆಂಚ ತನ್ನರ್ಧ ವಯಸ್ಸಿನ ಮಾವನ ಮಗಳು ರತಿಯೆದುರು ಮನ್ಮಥನಾಗ ಹೊರಟಿದ್ದ. ಸ್ವಲ್ಪ ಹೊತ್ತಿನ ಮುಂಚೆ ಗಂಜಿಗೆಂದು ಹಚ್ಚಿದ್ದ ಒಲೆಯಲ್ಲಿ ಈಗ ಕೆಂಡ ನಿಗಿನಿಗಿಸುತ್ತಿತು.

ನಾಗಿಯೂ ಏನಂತ ಸಮಾಧಾನ ಹೇಳಿಯಾಳು? ಅವಳ ಗಂಡ ಅಕ್ಕನ ಮಾತಿಗೆ ಕಟ್ಟು ಬಿದ್ದು ಈಕೆಯನ್ನು ಕಟ್ಟಿಕೊಂಡಿದ್ದ. ಇದ್ದೊಬ್ಬ ಮಗನಿಗೂ ತಲೆಮಂದ. ಸ್ವಲ್ಪ ವರುಷದ ಕೆಳಗೆ ಮದುವೆಗೆ ಮುನ್ನ ಇಟ್ಟುಕೊಂಡವಳನ್ನು ಇವಳಿಗೆ ಸವತಿಯಾಗಿ ಮನೆಗೆ ತಂದಿದ್ದ. ಇತ್ತೀಚಿಗೆ ಹೊಸದೊಂದು ಹುಡುಗಿಯ ಮನೆಯಲ್ಲಿ ರಾತ್ರಿ ಮನೆ ಮಾಡಿಕೊಂಡಿರುತ್ತಾನೆ.

ಎಲ್ಲಿಂದಲೊ ಓಡಿ ಬಂದ ಭಾಗಿ ಇವರಿಬ್ಬರಲ್ಲಿ ಏನೋ ಹೇಳಿದಳು. ಮೂರು ಜನ ಒಂದೇ ಉಸಿರಿಗೆ ಮತ್ತೆಲ್ಲೋ ಓಡಿದರು. ಈಗ ಬಂದಿದ್ದ ಭಾಗಿಯದು ಇನ್ನೊಂದು ಕತೆ. ಮದುವೆಯಾಗಿ ಕೈಗೊಂದು ಮಗು ನೀಡಿ ಭಾಗ ದೇಶಾಂತರ ಹೋಗಿದ್ದ. ಬದುಕಿದ್ದಾನೋ ಇಲ್ಲವೋ ಯಾರಿಗೂ ತಿಳಿದಿಲ್ಲ. ಈಕೆ ತವರಲ್ಲಿ ಕಸ-ಮುಸುರೆ ಮಾಡಿಕೊಂಡು ಮಗುವನ್ನು ಸಾಕಿಕೊಂಡು ಇದ್ದಾಳೆ.

ಅಷ್ಟರಲ್ಲಿ ರಾಮ ನಾಮ ಸತ್ಯ ಹೈ ಕೇಳಿ ಬಂತು. ಹಿಂತಿರುಗಿ ನೋಡಿದರೆ ಮುನಿಯನ ಹೆಣದ ಮೆರವಣಿಗೆ. ಅಲ್ಲೆ ದೂರದಲ್ಲಿ ಕೆಲಸಕ್ಕೆ ಬಾರದ ಗಂಡನನ್ನು ಕಳೆದುಕೊಂಡಿದ್ದಕ್ಕೆ ಮುನಿಯಮ್ಮ ಎದೆ ಬಡಿದುಕೊಳ್ಳುತ್ತ ರೋಧಿಸುತ್ತಿದ್ದಾಳೆ. ನಾಗಿ, ಕೆಂಚಿ, ಭಾಗಿ…. ಆಕೆಯ ಜೊತೆ ಕೂತು ತಾವು ಅಳುತ್ತಿದ್ದಾರೆ. ನಾನು ಪಾಪ ಅಂದುಕೊಳ್ಳುತ್ತಿರುವಾಗ ಈಕೆ ಕೇಳಿದಳು ’ಏನಾಯಿತು?’ ನಾನಂದೆ ’ಅವನು ಮೇಲೆ ಹೋಗಿದ್ದಾನೆ’. ’ಮೇಲೆ ಎಂದರೆ ಎಲ್ಲಿ?’ ’ಅಯ್ಯೋ, ಮೇಲೆ ಎಂದರೆ ಸತ್ತು ಹೋಗಿದ್ದಾನೆ’. ’ಓಹೊ ಸತ್ತು ಹೋಗುವುದಾ, …..’ ನಾನು ದುರುಗುಟ್ಟಿ ನೋಡಿದೆ. ಸುಮ್ಮನಾದಳು. ಸೀದಾ ಮನೆಗೆ ಬಂದಿಳಿದೆವು. ಬಾಗಿಲ ಒಳಗೆ ಹೆಜ್ಜೆಯಿಡುತ್ತಿದ್ದಂತೆ ಮತ್ತೆ ಕೇಳಿದಳು ’ಅವನೆಲ್ಲಿ ಹೋದ?’ ನನಗೆ ತಡೆಯಲಾಗಲಿಲ್ಲ. ಅವಳಿಗೊಂದು ಉದ್ದಂಡ ನಮಸ್ಕರಿಸಿ ನಾನು ಹೊರ ಹೊರಟೆ.

ರಾಗಿಣಿ (ಅಭಿಸಾರಿಕೆಯ ಕತೆಗಳು-೩)

September 8, 2009 by ನೀಲಾಂಜಲ

ಹತ್ತಿರದೆಲ್ಲೊ ಬಿದ್ದ ಮಿಂಚಿನ ಸದ್ದಿನೊಂದಿಗೆ ನನ್ನ ನಿದ್ದೆ ಹಾರಿಹೋಯಿತು. ಕಣ್ತೆರೆದಾಗ  ಎದುರಿಗೆ ಕಂಡ ಕಪ್ಪು ಆಕೃತಿ ಇನ್ನಷ್ಟು ಬೆಚ್ಚಿ ಬೀಳಿಸಿತು. ಹಣತೆಯ ಬೆಳಕು ಸ್ವಲ್ಪ ಪ್ರಖರವಾದಾಗ, ಅರೆ! ಇದೆನಿದು? ಅಭಿಸಾರಿಕೆ. ಅದೂ ಹೊತ್ತಲ್ಲದ ಹೊತ್ತಲ್ಲಿ. ಮಂಚದ ಆ ತುದಿಯಲ್ಲಿ ಕಂಭಕ್ಕೊರಗಿ ಮುದುರಿ ಕುಳಿತಿದ್ದಾಳೆ.  ನಿಧಾನವಾಗಿ ಹೆಗಲ ಮೇಲೆ ಕೈಯನ್ನಿಟ್ಟೆ. ತಿರುಗಿ ನೋಡಿದವಳೇ  ನನ್ನ ಎದೆಯಲ್ಲಿ ಮುಖವಿಟ್ಟು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಕಣ್ಣಿನಿಂದ ಒಂದೇ ಸಮನೆ ಅಶ್ರುಧಾರೆ. ಹೊರಗಿನ ಮಳೆಯೊಡನೆ ಸ್ಪರ್ಧಿಸುವಂತಿದೆ. ಓಹ್! ನಿಧಾನವಾಗಿ ಅಕೆಯನ್ನು ಬಳಸಿಕೊಂಡು ದಿಂಬಿಗೆ ಒರಗಿದೆ. ಮಳೆ ಇನ್ನೆನು ನಿಲ್ಲುತ್ತೆ ಅಂದುಕೊಳ್ಳುತ್ತಿರುವಾಗ ಈಕೆ ಅತ್ತು ಅತ್ತು ಕೆಂಪಾಗಿ ಸೋತಿದ್ದಳು. ಗಾಳಿಗೆ ಹಾರುತ್ತಿದ್ದ ಮುಂದಲೆಗಳನ್ನು ಹಾಗೆ ಹಿಂದೆ ತಳ್ಳಿ ಹರಡಿ ಹೋಗಿದ್ದ ಮೇಲು ವಸ್ತ್ರವನ್ನು ಸರಿಪಡಿಸಿದೆ. ಅಷ್ಟರಲ್ಲಿ ಜೋರಾಗಿ ಬೀಸಿದ ಗಾಳಿಗೆ ಎದುರಿಗಿನ ದೀಪ ನಂದಿಹೋಯಿತು.

ಕೆರೆಯ ಪಕ್ಕದ ಆ ಕಲ್ಲು ಬಂಡೆಯನ್ನು ಏರಿ ಕುಳಿತಿರುವ ಆಕೆ ಚಂದ್ರಿಕೆ. ಆ ಕಾಲದ ಪ್ರಖ್ಯಾತ ವೈಶ್ಯೆ. ಅರವತ್ತನಾಲ್ಕು ವಿದ್ಯೆಗಳಲ್ಲಿ ಅಗ್ರಪ್ರವೀಣೆ. ಆಕೆಯ ಒಂದು ದರ್ಶನಕ್ಕಾಗಿ ದೂರದ ಪ್ರಾಂತ್ಯಗಳಿಂದ ಬರುವ ಜನರಿದ್ದರು. ಆದರೆ ಆಕೆಯೋ ಅದೇ ಊರಿನ ಮೋಹನಾಂಗನಿಗೆ ಮನಸೋತಿದ್ದಳು. ವಸಂತ ಹಬ್ಬದಲ್ಲಿ ಊರ ಪ್ರಮುಖನೇ ಅಂಗದನನ್ನು ಪರಿಚಯಿಸಿದ್ದ. ಅದಕ್ಕೂ ಮುಂದಿನ ಮಿಲನೋತ್ಸವದಲ್ಲಿ ಅಂಗದನೇ ಈಕೆಯನ್ನು ಕಾಡಿ, ಬೇಡಿ ಒಲಿಸಿಕೊಂಡಿದ್ದ. ಅಷ್ಟು ಸುಲಭವಾಗಿ ಒಲಿಯದ ಈಕೆ ಇವನಲ್ಲಿ ಅನುರಕ್ತಳಾಗಿದ್ದು ಉಳಿದ ರಸಿಕೋತ್ತಮರ ಹುಬ್ಬೇರಿಸಿತ್ತು. ದಿನಕಳೆದಂತೆ ಏರುತ್ತಿರುವ ಇವರಿಬ್ಬರ ಪ್ರೇಮ ನೋಡಿ ಚಕೋರವೇ ತಲೆ ಬಾಗಿ ನಾಚಿತು. ಬೆಳದಿಂಗಳೇ ಬೆಳಗಾಯಿತು. ಸೂರ್ಯನೂ ಚಂದ್ರನಾದ. ಆ ಒಂದು ದುರಳ ದಿನ ಆಸ್ಥಾನದಿಂದ ಕರೆ ಬಂತು. ಮಗದೊಂದು ದೇಶದ ಪಂಡಿತನ ಎದುರು ಈಕೆಯ ವಿದ್ವತ್ತನ್ನು ಒರೆ ಹಚ್ಚುವ ಶುಭ ಘಳಿಗೆ. ಅಲ್ಲಿಂದ ಮರಳಿ ವಿಜಯೋತ್ಸವದಿಂದ ಬಂದವಳನ್ನು ಎದುರುಗೊಂಡವರಲ್ಲಿ ಅಂಗದನಿರಲಿಲ್ಲ. ಕರೆ ಕಳಿಸಿದ್ದಕ್ಕೆ ಪ್ರತ್ತ್ಯುತ್ತರವಾಗಿ ಮದುವೆಯ ಕರೆಯೋಲೆ ಬಂತು. ತನ್ನವನು ಎನ್ನುವ ಅಭಿಮಾನಕ್ಕೆ ಕಡಿವಾಣ ಬಿತ್ತು. ಅತ್ತೂ ಕರೆದು ಎಲ್ಲವೂ ಮುಗಿದು ಎಲ್ಲರೊಟ್ಟಿಗೆ ಈಕೆಯೂ ಆತನ ವಿವಾಹಕ್ಕೆ ತೆರಳಿದಳು. ಎಲ್ಲರಿಗಿಂತ ಜಾಸ್ತಿ ನರ್ತಿಸಿದಳು. ಕೊನೆಗೆ ಸುಸ್ತಾಗಿ ಮಂಟಪದ ಪಕ್ಕದಲ್ಲಿದ್ದ ಕೆರೆಬಂಡೆ ಏರಿ ಕುಳಿತಳು. ಬೆಳದಿಂಗಳ ಉತ್ಕಟ ಪ್ರೇಮರಾತ್ರಿಯೊಂದರಲ್ಲಿ ಆತ ತೊಡಿಸಿದ್ದ ಕೆಂಪು ಹವಳದ ಬಳೆ ಬಿಸಿಲಿಗೆ ಇನ್ನೂ ಕೆಂಪಾಗಿ ಹೊಳೆಯುತ್ತಿತ್ತು. ನಿಧಾನಕ್ಕೆ ಕಳಚಿ ಕೈಯಲ್ಲಿ ಹಿಡಿದಳು. ಅದನ್ನು ನೋಡುತ್ತ ತಡೆಯಲಾಗದೇ ಎದ್ದು ಕೆರೆಯ ಒಂದೊಂದೆ ಮೆಟ್ಟಳಿಳಿಯತೊಡಗಿದಳು.

ಆ ಕೆರೆಯ ಇನ್ನೊಂದು ಬದಿ ಬಟ್ಟೆ ಒಗೆಯುತ್ತಿದ್ದ ಅಗಸ ರಾವೂತನ ಮರಿ ಮಿಮ್ಮಗನ ಪ್ರಕಾರ ಚಂದ್ರಿಕೆ ನೀರಿನಿಂದ ಎದ್ದು ಬರುತ್ತಿದ್ದನ್ನು ಮುತ್ತಾತ ನೋಡಿದ್ದನಂತೆ, ಆ ಊರಿನಲ್ಲೇ ಆಗ ಪೂಜೆ ಮಾಡುತ್ತಿದ್ದ ಅರ್ಚಕ ಕೇಶವಾಚಾರ್ಯನ ಮಿಮ್ಮಗನ ಪ್ರಕಾರ ದೇವಿಕೆರೆ(ಈಗಿನ ಹೆಸರು) ಸ್ವಚ್ಛಗೊಳಿಸಿದಾಗ ಸಿಕ್ಕ ಅಸ್ಥಿ ಪಂಜರದ ಕೈಯಲ್ಲಿ ಕೆಂಪು ಹವಳದ ಬಳೆ ಹಾಗೆ ಇತ್ತಂತೆ, ಈಗ ಮೋಟಾರ್ ಇಟ್ಟುಕೊಂಡಿರುವ ಪಲನ ಮಿಮ್ಮಗನ ಪ್ರಕಾರ ಆಕೆ ಹಾಗೇ ಈಚೆ ದಡದಿಂದ ಎದ್ದು ಬಂದವಲೇ ಅವಳ ಮೈ ಮೇಲಿದ್ದ ಎಲ್ಲ ಆಭರಣಗಳನ್ನು ಪಲನಿಗೆ ವಹಿಸಿ ಹೆಳಹೆಸರಿಲ್ಲದ ಊರಿಗೆ ಹೊರಟು ಹೋದಳಂತೆ, ಆ ಕೆಂಪು ಬಳೆ ಇನ್ನೂ ಆತನ ತಾತನ ತಿಜೋರಿಯಲ್ಲಿದೆಯಂತೆ,

“ಗಣಪತಿ ಬಪ್ಪಾ ಮೊರಯಾ” ಅಂದರೇನು?

August 26, 2009 by ನೀಲಾಂಜಲ

ಗಣಪತಿ ಬಪ್ಪಾ ಮೊರಯಾ” ಇದರ ಅರ್ಥ ನಿಮಗೆ ಖಚಿತವಾಗಿ ಗೊತ್ತಿದ್ದರೆ ಹೇಳಿ ಪ್ಲೀಸ್

ನನಗೆ ಸಿಕ್ಕ ಕೆಲ ಅರ್ಥಗಳು;
-ಗಣಪತಿ ನನ್ನ ದೇವರು
-ತಂದೆ ಗಣಪತಿ
-ಗಣಪತಿಗೆ ಜಯವಾಗಲಿ
-ಗಣಪತಿ ನಿನಗೆ ಸ್ವಾಗತ
-ಮೊರಯಾ ಗೊಸಾವಿ ೧೪ನೇ ಶತಮಾನದ ಪ್ರಸಿದ್ಧ ಗಣಪತಿಯ ಭಕ್ತ. ಈತನ ನೆನಪಿಗಾಗಿ ಗಣಪತಿಯ ಜೊತೆಯಲ್ಲಿ ಮೊರಯಾ ಸೇರಿಸಲಾಗಿದೆ. ಈತ ಕರ್ನಾಟಕದ ಸಾಲಿಗ್ರಾಮದವನಂತೆ.

ನಾನು ಮತ್ತು ಔರಂಗಜೇಬ

August 21, 2009 by ನೀಲಾಂಜಲ

ಮನೆಯಲ್ಲಿ ಎಲ್ಲರೂ ನನ್ನ ಔರಂಗಜೇಬ* ಎಂದು ತೀರ್ಮಾನಿಸಿ ಆಗಿದೆ. ಅದೂ ಈಗೀಗ ಅಲ್ಲ, ತುಂಬಾ ಮೊದಲಿನಿಂದ.

ನನ್ನ ಅಮ್ಮ ಸೀತಾರವಾದಕಿ ಹಾಗೂ ಅಪ್ಪ ಮೃದಂಗ ಮತ್ತು ಮೋರ್ಚಿಂಗ್ ಕಲಿತವರು. ಆದರಿಂದ ಸಹಜವಾಗಿ ನನ್ನನ್ನೂ ಸಂಗೀತ ಕಲಿಯಲು ಚಿಕ್ಕ ವಯಸ್ಸಿನಿಂದಲೇ ತಯಾರು ಮಾಡಲಾಯಿತು. ಅಮ್ಮನ ಗುರುಗಳ ಬಳಿಯಿಂದಲೇ ಪಾಠ ಪ್ರಾರಂಭವಾಯಿತು. ಆದರೆ ’ಸ’ ಇಂದ ಆರಂಭವಾಗಿದ್ದು ಸಪ್ತಮ ’ಸ’ ಗೆ ಏರಲೇ ಇಲ್ಲ. ನನಗೆ ಕಿಂಚಿತ್ತೂ ಸ್ವರಜ್ಞಾನವಿಲ್ಲವೆಂದು ಅವರು ಮುಂದಿನ ಪಾಠ ನಿರಾಕರಿಸಿದರು. ಆದರೆ ಆಶಾವಾದಿಯಾದ ನನ್ನ ಅಮ್ಮ ಬಿಡಬೇಕಲ್ಲ. ಸ್ವಲ್ಪ ವರ್ಷದ ಬಳಿಕ ಇನ್ನೊಬ್ಬರಲ್ಲಿ ಪಾಠಕ್ಕೆ ಸೇರಿಸಿದರು. ನಾನು ವಿಧೇಯ ವಿದ್ಯಾರ್ಥಿಯಂತೆ ಅವರ ಬಳಿ ಹಲವು ವಾರಗಳ ಕಾಲ ಅಭ್ಯಸಿಸಿದೆ. ಒಮ್ಮೆ ಅಮ್ಮ ನನ್ನ ಜೊತೆ ಕ್ಲಾಸಿಗೆ ಬಂದಾಗ ನನ್ನ ತಾಲೀಮು ಕೇಳಿ ಅವತ್ತಿನಿಂದ ಯಾವತ್ತೂ ನಾನು ಸಂಗೀತ ಶಾಲೆಯತ್ತ ಸುಳಿಯಲಿಲ್ಲ.

ನಿಜವಾಗಿಯೂ ನನಗೆ ಸ ಮತ್ತು ಸಾ ದ ವ್ಯತ್ಯಾಸ ತಿಳಿಯುವುದಿಲ್ಲ. ಗ ವನ್ನು ಪ ದಂತೆ ಯಾಕೆ ಹಾಡಬಾರದು ಎಂದು ಗೊತ್ತಾಗುವುದಿಲ್ಲ. ಏರಿಸುವುದಂತೆ ಆಮೇಲೆ ಇಳಿಸುವುದಂತೆ. ಏನೋಪಾ, ನನ್ನ ಮಿದುಳಿಗೆ ತಲೆಬಿಸಿಯಾಗುತ್ತದೆ. ಯಾಕೆ ಹೀಗೇ ಹೇಳಬೇಕು ಅಂತ.

ಹೋಗಲಿ ನೃತ್ಯ ಕಲಿಸುವ ಅಂತ ಅದಕ್ಕೆ ಸೇರಿಸಿದರು. ಕುಚಿಪುಡಿಯೂ ಮುಗಿಯಿತು, ಭರತನಾಟ್ಯವೂ ಆಯಿತು. ಏನೂ ಪ್ರಯೋಜನವಾಗಲಿಲ್ಲ. ಅಮ್ಮ ಸಪ್ಪೆ ಮುಖದಿಂದ ನಾನು ನಗುಮುಖದಿಂದ ಮನೆಗೆ ತೆರಳಿದೆವು.

ಥಾ ಥೈ, ಥಕ ಥೈ….. ಒಂದು ಕಾಲು ಹೀಗೆ, ಇನ್ನೊಂದು ಕಾಲು ಹಾಗೆ. ಸೊಂಟ ಈ ಕಡೆ ಸ್ವಲ್ಪ ವಾರೆ, ತಲೆ ಆ ಕಡೆ ವಾರೆ. ಎರಡು ಹೆಜ್ಜೆ ಬಲಗಾಲಿಂದಕ್ಕೆ, ಒಂದು ಹೆಜ್ಜೆ ಎಡಗಾಲಿಂದು. ಒಂದು ಬೆರಳನ್ನು ಮಡಚಿ ಇನ್ನೊಂದಕ್ಕೆ ತಾಗಿಸಿದರೆ ಅದೊಂದು ಮುದ್ರೆ………. ಉಫ್! ನನಗೆ ಇವೆಲ್ಲಾ ಯಾಕೆ ಏನೆಂದು ಯಾವಾಗಲೂ ತಿಳಿಯಲೇ ಇಲ್ಲ. ದೊಡ್ಡವಳಾದ ಮೇಲೆನೆ ಈ ತಾಳ, ಲಯ, ಅಭಿನಯ ಅಂತೆಲ್ಲಾ ಗೊತ್ತಾಗಿದ್ದು. ಆಗ ಒಂದೇ ಹುಬ್ಬನ್ನು ಕುಣಿಸುವುದಿರಲಿ, ತಲೆಯನ್ನು ಚೆನ್ನಪಟ್ಟಣದ ಸ್ಪ್ರಿಂಗ್ ಗೊಂಬೆಯಂತೆ ಕುಣಿಸುವುದೂ ನನ್ನ ಕೈಯಲ್ಲಿ ಆಗಲಿಲ್ಲ.

ನಾನು ಸಂಗೀತ ಸಭೆಗಳಿಗೆ ಹೋದಾಗಲೆಲ್ಲ ಅಕ್ಕ-ಪಕ್ಕದವರು ವಾಹ್, ವ್ಹಾ ಅಂದರೆ ಬೆಚ್ಚಿ ಬೀಳುತ್ತೇನೆ. ನನಗೆ ಅರ್ಥವಾಗದ್ದು ಇವರಿಗೆಲ್ಲ ಏಷ್ಟು ಸುಲಭವಾಗಿ ಅರ್ಥವಾಗುತ್ತೆ ಎಂದು ಪೆಚ್ಚು ನಗು ಸೂಸುತ್ತೇನೆ. ಟಿವಿಯಲ್ಲಿ ರಾತ್ರಿ ಊಟವಾದ ಮೇಲೆ ಅದೆಂಥೊ ಸಂಗೀತ, ನಾಟ್ಯ ಕಾರ್ಯಕ್ರಮಗಳು ಬರುತ್ತವೆ. ಅದನ್ನು ಅಪ್ಪ-ಅಮ್ಮ ಇಬ್ಬರೂ ಕೂತು ವೀಕ್ಷಿಸುತ್ತಿರುತ್ತಾರೆ. ಹೊಗಳುತ್ತ, ತೆಗಳುತ್ತ. ನಾನು ಅವರತ್ತಿರ ಏಷ್ಟೊ ಸಲ ಈ ಸಂಗೀತಕ್ಕೆ ವಾಹ್ ಹೇಗೆ ಹೇಳುವುದು ಎಂದು ತಿಳಿಯಲು ಪ್ರಯತ್ನಿಸಿದ್ದಿದೆ. ಆದರೆ ಅಮ್ಮ ಹೇಳುವ ಮಾತ್ರೆಗಳ ಲೆಕ್ಕಾಚಾರ ನನ್ನ ತಲೆಗೆ ಇಂದಿನವರೆಗೂ ಹೋಗಲಿಲ್ಲ.

ಈ ಮಾತ್ರೆ ಅಂದಕೂಡಲೇ ನೆನಪಾಗುವುದು ಹಳಗನ್ನಡ. ಸ್ಕೂಲಿನಿಂದ ಪ್ರಾರಂಭವಾದ ಮಾತ್ರೆಗಳ ಲೆಕ್ಕಾಚಾರ ಡಿಗ್ರಿಯವರೆಗೂ ನನ್ನ ಕಾಡಿಬಿಟ್ಟಿತು. ಡಿಗ್ರಿಯ ಕೊನೆಯ ವರ್ಷದಲ್ಲಿ ಐಚ್ಛಿಕ ಕನ್ನಡದಲ್ಲಿ ಹಳಗನ್ನಡದ ಒಂದು ಪೇಪರ್ರು ಇತ್ತು. ಅದಕ್ಕೆ ಕವಿರಾಜಮಾರ್ಗ ಕಲಿಯಬೇಕಿತ್ತು. ಮಾತ್ರೆಗಳನ್ನು ಲೆಕ್ಕ ಹಾಕಿ ಅವು ಯಾವ ಛಂಧಕ್ಕೆ ಸೇರಿದವು ಎಂದು ಹೇಳಬೇಕಿತ್ತು. ಜೊತೆಗೆ ಹಳಗನ್ನಡದ ವ್ಯಾಕರಣ ಸೂಕ್ತಿಗಳನ್ನು ಬೇರೆ ಬಾಯಿಪಾಠ ಮಾಡಿ ನಮೂದಿಸಬೇಕಿತ್ತು. ಅಗ ಯಾಕೆ ಹೊಸಗನ್ನಡ ಬದಲಾಗಿ ಹೋಗಿದೆ ಎಂದು ಕೊರಗುತ್ತಿದ್ದೆ. ಏಕಂದ್ರೆ ನನಗೆ ಹಳಗನ್ನಡ ಬಿಡಿಸಿ ಓದಲು ಬರುವುದಿಲ್ಲ, ಅರ್ಥವೂ ಆಗುವುದಿಲ್ಲ.

ಹೊಸಗನ್ನಡದ ಇನ್ನೊಂದು ಪೇಪರಿನಲ್ಲಿ ಎಲ್ಲ ಕವಿಗಳ ಬಗ್ಗೆ ಇತ್ತು. ನೆನಪಿದ್ದಂತೆ ಬೆಂದ್ರೆಯವರ ಸಖಿಗೀತವೂ ಇತ್ತು. ಅಬ್ಬಾ! ಅದೂ ನನಗೆ ಯಾವತ್ತೂ ಜೀರ್ಣವಾಗಲಿಲ್ಲ. ಓದುವಾಗ ಕಷ್ಟವಾಗುತ್ತಿದ್ದ ಸಾಲುಗಳನ್ನು ಲೆಕ್ಚರ್ ಹೇಗೆ ಹೊಸ ಅರ್ಥ ಅದಕ್ಕೆ ಹೊಂದಿಸುತ್ತಾರೆ ಅನ್ನುವುದೇ ಅಚ್ಚರಿಯಾಗಿತ್ತು. ಬೇಂದ್ರೆ ಕ್ಲಾಸಿನಲ್ಲಿ ಇಷ್ಟವಾಗುತ್ತಿದ್ದದೆಂದರೆ ನಮ್ಮ ಲೆಕ್ಚರ್ ಅದನ್ನು ಅವರ ಜೀವನ ಕತೆಯೊಂದಿಗೆ ತಾಳೆಹಾಕುತಿದ್ದದ್ದು.

ಅಂತಾಕ್ಷರಿ ಸಾಧಾರಣವಾಗಿ ಎಲ್ಲರಿಗೂ ಇಷ್ಟದ ಆಟ. ನಾನು ಮಾತ್ರ ಇದರಿಂದ ದೂರ ಸರಿಯುತ್ತೇನೆ. ಹಾಡು ಗೊತ್ತಿಲ್ಲ ಅನ್ನುವುದಕ್ಕಿಂತ ಹಾಡಬೇಕಲ್ಲ ಅನ್ನುವುದಕ್ಕೆ. ಇನ್ನೂ ನೆನಪಿದೆ ನನಗೆ. ನವೋದಯದಲ್ಲಿ ಸಂಗೀತವೂ ಪಠ್ಯದ ವಿಷಯವಾಗಿತ್ತು. ಅದರಲ್ಲಿ ಅರ್ಧ ಅಂಕಗಳಿಗೆ ಪ್ರಾಕ್ಟಿಕಲ್ ಬೇರೆ ಇರುತ್ತಿತ್ತು. ಆ ಒಂದು ಸಲ ಪ್ರಾಕ್ಟಿಕಲ್ ಪರೀಕ್ಷೆಗೆ ಕ್ಲಾಸಿನ ಎಲ್ಲರೆದುರು ನಿಂತು ಹಾಡಬೇಕಾಗಿತ್ತು. ನಾನು ಎದ್ದು ನಿಂತ ಕೂಡಲೇ ಸುಮ್ಮನಿದ್ದ ಕ್ಲಾಸ್ ನಾನು ಹಾಡಲು ಶುರುವಿಟ್ಟುಕೊಂಡ ಕೂಡಲೇ ಗೋವಿಂದವಾಯಿತು. ನಮ್ಮ ಮ್ಯೂಸಿಕ್ ಟೀಚರ್ರಿಗೆ ಎಲ್ಲಿಲ್ಲದ ಕೋಪ ಬಂತು. ಅವರು ಸೈಲೆನ್ಸ್ ಅಂದರೆ ಕೇಳುವರಾರು. ನಾನು ರಾಗ(!) ಪ್ರಾರಂಭಿಸುವುದಕ್ಕೂ ಒಬ್ಬರಾದ ಮೇಲೆ ಒಬ್ಬರು ಹ್ಹಿ ಹ್ಹಿ ಎಂದು ನಗುವುದಕ್ಕೂ ಸರಿ ಹೋಯಿತು. ಸರ್ರು ಇನ್ನೊಮ್ಮೆ ಯಾರಾರು ನಕ್ಕರೆ ಕ್ಲಾಸಿನಿಂದ ಹೊರ ಹಾಕುತ್ತೇನೆ ಎಂದು ಬೆದರಿಸಿದರು. ಒಬ್ಬರಾದ ಮೇಲೆ ಒಬ್ಬರು ಹೊರಗೆ ಹೋಗಲಾರಂಭಿಸಿದರು. ಕೊನೆಗೆ ಸೋತು ನಾನು “ಸಿರಿಯಸ್” ಇಲ್ಲದ್ದಕ್ಕೆ ನನ್ನೇ ಹೊರಹಾಕಿದರು. ನಾನೇನು ಮಾಡುವುದು? ನನಗೆ ಹಾಡನ್ನು ಎಲ್ಲಿ ಏರಿಸಿ ಎಲ್ಲಿ ಇಳಿಸಬೇಕೆಂದು ತಿಳಿಯುವುದಿಲ್ಲ. ಎಲ್ಲ ಹಾಡುಗಳು ಒಂದೇ ಲಯ, ತಾಳದಲ್ಲಿರುತ್ತವೆ. ಹಾಗಂತ ಇದರ ಬಗ್ಗೆ ನನಗೆ ನಾಚಿಕೆಯಂತೂ ಖಂಡಿತ ಇಲ್ಲ.

ಬ್ಲಾಗುಗಳಲ್ಲಿ ಉಳಿದವರು ಘಜಲ್ ಕೋಟ್ ಮಾಡಿ ಏನೇನೊ ಬರೆಯುವಾಗ ನಾನೂ ನನಗೂ ಆ ರಸಾನುಭವ ಆಗಲಿ ಎಂದು ಅಪೇಕ್ಷಿಸಿ ಸಿಡಿ ಹಾಕಿಕೊಳ್ಳುತ್ತೇನೆ. ಅದರ ಜೊತೆ ಈ ಸಲ ಪೂರ್ತಿಯಾಗಿ ಘಜಲ್ ಕೇಳುತ್ತೇನೆ ಎಂದು ಪ್ರಮಾಣ ಮಾಡಿಕೊಳ್ಳುತ್ತೇನೆ. ಒಂದತ್ತು ನಿಮಿಷ. ಗುಲ್ಜಾರ್ರು, ಜಗಜೀತು ಎಲ್ಲರೂ ಮಿಕ್ಸ್ ಆಗಿ ಭೂತಾಕಾರವಾಗಿ ಹೆದರಿ ಸಿಡಿ ಇಜೆಕ್ಟ್ ಮಾಡುತ್ತೇನೆ.

ಹಾಗಂತ ಅಪರೂಪಕ್ಕೆ ಕೇಳುತ್ತೇನೆ. ಅದೂ ಒಂಧರ್ಧ ಗಂಟೆ ಫುಲ್ ವಾಲ್ಯೂಮ್ ಜೊತೆ. ಸೊಂಟದ ವಿಸ್ಯ ಮಸ್ತ ಆಗಿ ಕೇಳಿದ ಹಾಗೆ ಒಂದೊಂದೆ ಬಚ್ಚಿಟ್ಟ ಮಾತು ನೂ ಕೇಳುತ್ತೇನೆ. ಒಂದು ಸ್ಪೀಕರಿನಿಂದ ಇನ್ನೊಂದು ಸ್ಪೀಕರಿಗೆ ಹೋಗುವುದು, ಒಂದು ಸಲ ಲೆಫ್ಟ್, ಇನ್ನೊಂದು ಸಲ ರೈಟ್, ಇದೆಲ್ಲ ಚೆನ್ನಗಾಗುತ್ತೆ. ಆದರೆ ರಾಕ್,ಸ್ಟಾರ್ರು, ಸಿಲ್ವರ್ರು ಇದೆಲ್ಲ ಆಗುವುದಿಲ್ಲ. ತಲೆ ನೋಯುತ್ತೆ.

ಸಂತೆಯಲ್ಲಿನ ಗದ್ದಲಕ್ಕೂ ಬೇಜಾರಾಗದ ನನಗೆ ಈ ಮೈಕು, ಸಿಡಿ, ಟಿವಿ ಕೇಳಿದ್ರೆ ಸ್ವಲ್ಪ ಹೊತ್ತಿಗೆ ಓಡಿ ಹೋಗೊಣ ಅನ್ನಿಸುತ್ತೆ. ಯಾಕೆ ಅಂತ ನನ್ನಾಣೆಗೂ ತಿಳಿದಿಲ್ಲ.

——————————

(*ಹೆಚ್ಚಿನ ಮೊಗಲ್ ರಾಜರುಗಳು ಕಲಾಪ್ರಿಯರಾಗಿದ್ದರೂ, ಈ ಔರಂಗಜೇಬನಿಗೆ ಮಾತ್ರ ಸಂಗೀತ-ನೃತ್ಯದ ಗಂಧ ಗಾಳಿಯೂ ಗೊತ್ತಿರಲಿಲ್ಲವಂತೆ. ಆತನ ಆಸ್ಥಾನದಲ್ಲಿ ಇವೆರಡನ್ನು ನಿಷೇಧಿಸಲಾಗಿತ್ತಂತೆ)

ಕೋನ

August 13, 2009 by ನೀಲಾಂಜಲ

“ಆಕೆ ಸರಿಯಿಲ್ಲ”

ಮದುವೆಗೆ ಮುನ್ನ ಕಾಮಿಸಿದ್ದರೆ
ಮದುವೆಯ ನಂತರ ಕಾಮಿಸದಿದ್ದರೆ

ಮದುವೆಗೆ ಮುನ್ನದ ಬಸಿರು
ಮದುವೆಯ ನಂತರ ಆಗದ ಬಸಿರು

’ಮದುವೆ’,  ಹ್ಹ…. ಹ್ಹಾ……..
ಏಷ್ಟು ಬೇಗ ಬದಲಿಸುತ್ತದೆ ಎಲ್ಲವನ್ನ !!!

ಕಾಪಿ ಕ್ಯಾಟು

July 19, 2009 by ನೀಲಾಂಜಲ

ಸಖಿಗೆ,

ಯಾರಿಂದಾಗಿ ನನ್ನಲ್ಲಿ ಸುಖದ ಅಲೆಗಳೆಳುತ್ತವೆಯೊ
ಜೊತೆಯಾಗಿ ನಡೆವಾಗ ಅವು ವರ್ಧಿಸುತ್ತವೆಯೊ
ಸುಖನಿದ್ದೆಯಲ್ಲೂ ಉಸಿರ ಲಯಗಳು ಸಮಬದ್ಧತೆಗೊಳ್ಳುತ್ತದೆಯೊ
ಅಂತಹ ಪ್ರೇಮಿಗಳ ದೇಹ ಗಂಧವು ಪರಸ್ಪರ ಮಿಲಿತಗೊಂಡಿದ್ದು
ಅಂತವರ ಸಮಭಾವಗಳು ಮಾತಿಲ್ಲದೆ ಒಂದಾಗುವವು
ಮಾತಿನವು ಹೊರಬಂದು ಲಹರಿಗಳಾಗಿ ತೇಲಿಹೋಗುವವು

ಹೀಗೇಂದ ಮಾತ್ರಕೆ ನಮ್ಮೀ ತೋಟದ ಗುಲಾಬಿಗಳನ್ನು
ಯಾವ ಕುರ್ಗಾಳಿಯೂ ಉದುರಿಸದು
ಯಾವ ಬಿರಿ ಬಿಸಿಲು ಬಾಡಿಸದು
ಈ ಗುಲಾಬಿಗಳು ಯಾವತ್ತಿಗೂ ನಮ್ಮವೇ, ನಮ್ಮದೇ ಆಗಿದೆ

ಹಾಗಾಗಿ ಈ ಅರ್ಪಣೆ ಉಳಿದವರಿಗೆ, ಓದಲೆಂದು
ನಿಜವೆಂದರೆ, ಇದು
ಅಂತರಂಗಿಕವಾಗಿ ಸ್ವತಃ ನಾನೇ ನಿನ್ನಲ್ಲಿ ಬಹಿರಂಗವಾಗಿ ಭಿನ್ನವಿಸಿದ್ದು

——————————————————

ಹ್ಞೂಂ, ಕಳೆದ ಶನಿವಾರವೇ ಇದನ್ನು ಬರೆದದ್ದು. ಅದೂ ನಡುರಾತ್ರಿ ಕಳೆದಾದ ಮೇಲೆ. ನಿಜವಾಗಿಯೂ ಕಾಪಿ ಮಾಡೋದು ಇಷ್ಟು ಖುಷಿ ಕೊಡುತ್ತೆ ಅಂತ ಗೊತ್ತೇ ಇರ್ಲಿಲ್ಲ. ಬೇರೆ ಬ್ಲಾಗುಗಳಲ್ಲಿ ಬರೊ ಅನುವಾದಗಳನ್ನು ನಾನು ಓದಿದ್ದೇ ಇಲ್ಲ. ಜೊತೆಗೆ ಸಹ ಬ್ಲಾಗುಗಳಲ್ಲಿ ಇರೊ ಕವನ/ಕವಿತೆ/ಪದ್ಯಗಳನ್ನು ಓದದಿದ್ದದ್ದೇ ಹೆಚ್ಚಿದೆ. ಅಂತದರಲ್ಲಿ ಈ ಕೆಂಡಸಂಪಿಗೆಯ ಘಮಲು ಹೇಗೆ ಹಚ್ಚಿಕೊಂಡೆನೊ ಗೊತ್ತಿಲ್ಲ.

ಆವತ್ತು ಅಲ್ಲಿ ಇ(ಎ)ಲಿಯಟ್ಟನ ಪದ್ಯವೊಂದನ್ನು ಓದುಗರಿಂದ ಕನ್ನಡಕ್ಕೆ ಕಾಪಿ ಮಾಡಿಸುವ ಐಡಿಯಾ ನೋಡಿ ಸುಮ್ಮನೆ ಇನ್ನೊಂದು ಲಿಂಕ್ ಕ್ಲಿಕ್ಕಿಸಿದ್ದೆ. ಆದ್ರೆ ಮತ್ತೊಂದು ದಿನ ಅದಕ್ಕೆ ಬಂದ ಅನುವಾದಗಳತ್ತ ಕಣ್ಣಾಯಿಸಿದಾಗ ಯಾಕೋ ಏನೋ ನಂಗೂ ಮಾಡಬೇಕು ಅಂತ ಅನ್ನಿಸಿಬಿಟ್ಟಿತು. ಅಲ್ಲಿ ಬಂದ ಅನುವಾದಗಳು ನಂಗೆ ಹಿಡಿಸಲಿಲ್ಲ ಅನ್ನೊದಕ್ಕಿಂತ  ಆ ಪದ್ಯ ನನ್ನ ಜೊತೆ ಸ್ವಲ್ಪ ಬೇರೆ ರೀತಿಯಲ್ಲಿ ಮಾತಾಡುತ್ತಿದೆ ಅನ್ನಿಸ್ತು. ಹಾಗಾಗಿ ಕೂತು ಇಂಗ್ಲೀಷ್ ಪದ್ಯವನ್ನು ಪೇಪರಿಗಿಳಿಸಿದೆ.

ನನ್ನ ಪದಕೋಶ ಸಾಕಷ್ಟು ಕಡಿಮೆ ಇರುವುದರಿಂದ ವರ್ಡನಲ್ಲೂ ಪದ್ಯವನ್ನು ಕಾಪಿ ಮಾಡಿದೆ. ವರ್ಡು ಅರ್ಥವಾಗದ ಶಬ್ದಕ್ಕೆ ಸಾಕಷ್ಟು ಸಮಾನಾರ್ಥ ಪದಗಳನ್ನು ತೋರಿಸುತ್ತಲ್ಲ! ಹೀಗೆ ಮಾಡಿಕೊಂಡು ಹಲವು ಬಾರಿ ಓದುತ್ತ ಇದ್ದ ಹಾಗೆ ಆ ಪದ್ಯದ ಗುಂಗು ನಿಧಾನವಾಗಿ ತಲೆಗೆ ಏರತೊಡಗಿತು. ಸಂಗಾತಿ ಜೊತೆಗಿನ ಅನುಬಂಧದಲ್ಲಿ ಎಲ್ಲವನ್ನೂ ಹೇಳಲಿಕ್ಕೆ ತೊಡಗಿ, ಜಾಸ್ತಿ ಹೇಳದೆ ಮತ್ತೆ ಎಲ್ಲದನ್ನೂ ಹೇಳಿದ್ದೇನೆ ಎಂದಂತೆ. ದಿನ ನಿತ್ಯದ ಸಂಗತಿಯೊಂದಿಗೆ ಶುರುವಾಗಿ ತೀರಾ ಖಾಸಗಿಯಾಗಿ, ಅದನ್ನು ಹಾಗೇ ಅಲ್ಲೇ ನಿಲ್ಲಿಸಿ, ಮತ್ತದನ್ನು ಜನರಲೈಸ್ ಮಾಡಿದಂತೆ. ನಿಧಾನವಾಗಿ ಪ್ರಾರಂಭವಾಗಿ ಗಮ್ಯದತ್ತ ಬಗ್ಗಿ, ಎದ್ದು, ಸರಕ್ಕನೇ ಗತಿ ತೀವ್ರವಾಗಿ ಅಷ್ಟೇ ಸಡನ್ ಆಗಿ ಕೆಳಗಿಳಿಸಿ ಅಲ್ಲಿಯೇ ಐಕ್ಯವಾದಂತೆ. ಹೀಗೆ ಏನೇನೊ ಅನ್ನಿಸತೊಡಗಿ ಪದಗಳು ಕೂಡಿ ಶಬ್ದಗಳಾಗಿ, ವಾಕ್ಯಗಳಾಗಿ ನಾನೂ ಬರೆಯಲು ತೊಡಗಿದೆ. ಏನು ಅನ್ನಿಸುತ್ತೆ ಅದಕ್ಕೆ ಶಬ್ದಕೊಡುವುದು ಮತ್ತು ಶಬ್ದಕ್ಕೆ ಅನುಭಾವವನ್ನು ಬಂಧಿಸುವುದು. ಹೀಗೆ ಒಳಗೂ-ಹೊರಗು ಒಂದಾಗಿ ನಿಜಕ್ಕೂ ಆನಂದವಾಗತೊಡಗಿತು.

ಈ ಕನ್ನಡಕ್ಕೆ ಕಾಪಿ ಮಾಡುವುದು ಇಂಥ ಸೊಗಸಾದ ಅನುಭವ ಕೊಡುತ್ತೆ ಎಂದು ಗೊತ್ತೇ ಇರಲಿಲ್ಲ. ಪ್ರತಿ ಸಾಲನ್ನು ತಿದ್ದಿ, ಹೀಗಲ್ಲ ಹೀಗೆ ಬರಲಿ ಎಂದು ಮೂಲ ಕಾವ್ಯ ನನ್ನಲ್ಲಿ ಹುಟ್ಟಿಸಿದ ಭಾವಗಳನ್ನು ಭಟ್ಟಿಗಿಳಿಸೊದು, ತುಂಬಾ ಚೆನ್ನಾಗನಿಸಿತು. ಅನುವಾದ ಮಾಡಿ ಮುಗಿದಾದ ಮೇಲೂ ಏಷ್ಟೊ ಬಾರಿ ದೊಡ್ಡದಾಗಿ ನನ್ನ ತರ್ಜುಮೆಯನ್ನು ಓದಿಕೊಂಡಿದ್ದೇನೆ. ಪ್ರತಿ ಸಲ ಓದಿದಾಗಲೂ ಮುಖದಲ್ಲಿ ಕಿರುನಗೆಯೊಂದು ಮೂಡುತ್ತೆ. ಹ್ಹ ಹ್ಹಾ, ನಾನೂ ಕಾಪಿ ಮಾಡಿದೆ.

ಕೊನೆಯಲ್ಲಿ ನನ್ನ ಅನುವಾದ ಚೆನ್ನಾಗಿದೆಯೋ ಇಲ್ವೊ ಅನ್ನೊದು ನಂಗೆ ಬೇಕಿಲ್ಲ. ಅನುವಾದಕ್ಕಿರೊ ರೂಲ್ಸುಗಳನ್ನು ಫಾಲೊ ಮಾಡುತ್ತೋ ಇಲ್ವೊ ಅದೂ ಗೊತ್ತಿಲ್ಲ. ಪ್ರಖ್ಯಾತ ಕವಿಯಿತ್ರಿಯರಿಗೆ ಇರಬಹುದಾದ ಉತ್ತಮವಾದದನ್ನೇ ಯಾವಾಗಲೂ ಕೊಡುತ್ತೇನೆ ಎಂಬ ಅಲಿಖಿತ ಜವಾಬ್ದಾರಿಯೂ ನನಗಿಲ್ಲ. ಸಾಹಿತ್ಯಿಕ ವಲಯಕ್ಕೂ ಸೇರಿದವಳಲ್ಲ. ನಾನು ಸಾದಾ ಸೀದಾ ಬ್ಲಾಗಿ. ಈ ಅನುವಾದವೂ ನನ್ನ ಲೆಕ್ಕದಲ್ಲಿ ಬ್ಲಾಗಿಂಗ್ ತರಹ. ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಳ್ಳೊದು. ಕಾಪಿ ಮಾಡುತ್ತಿರುವಾಗ ಆಗಿದ್ದ ಸಂತೋಷವನ್ನು ನಿಮ್ಮಲ್ಲಿ ಹೇಳಿಕೊಳ್ಳೊದು. ಅಷ್ಟೇ.

————————-

A DEDICATION TO MY WIFE

To whom I owe the leaping delight
That quickens my senses in our walking time
And the rhythm that governs the repose of our sleeping time,
the breathing in unison.
Of lovers whose bodies smell of each other
Who think the same thoughts without need of speech,
And babble the same speech without need of meaning…

No peevish winter wind shall chill
No sullen tropic sun shall wither
The roses in the rose-garden which is ours and ours only

But this dedication is for others to read:
These are private words addressed to you in public

-T S Eliot

Earth Hour

March 21, 2009 by ನೀಲಾಂಜಲ

Come, let us join and make difference. To join click here

3259590137_3560ac298e
“Earth Hour is an annual international event created by the WWF (World Wide Fund for Nature/World Wildlife Fund), held on the last Saturday of March, that asks households and businesses to turn off their non-essential lights and electrical appliances for one hour to raise awareness towards the need to take action on climate change. It was pioneered by WWF Australia and the Sydney Morning Herald in 2007,[1] and achieved worldwide participation in 2008.

Earth Hour will next take place on Saturday, March 28, 2009 at 8:30 pm, local time

-en.wikipedia.org (click on it to know more about earth hour)

ರಕ್ತಗತ

March 13, 2009 by ನೀಲಾಂಜಲ

ಈಗಷ್ಟೇ ಪೇಪರಿನಲ್ಲಿ ಮುಂಬಯಿ ಉದ್ಯಮದ ಪ್ರಭಾವಶಾಲಿ, ಶ್ರೀಮಂತ ಕಛ್ಚಿ ವಾಗಡ್ ಸಮಾಜದವರು ಅಂತರಜಾತಿ ವಿವಾಹಕ್ಕೆ ನಿರ್ಭಂದನೆ ಹೇರಿದ್ದರ ಕುರಿತು ಓದುತ್ತಿದ್ದೆ. ತಮ್ಮ ಸಮಾಜದ ರೀತಿ-ನೀತಿ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಕಾರಣ ಮುಂದಿಟ್ಟು ಜಾತಿ ಬಿಟ್ಟು ಮದುವೆಯಾಗುವವರನ್ನು ತಮ್ಮ ಸಮಾಜದಿಂದ ಹೊರಹಾಕುವುದಾಗಿ ನಿಯಮ ರೂಪಿಸಿದ್ದಾರೆ. ಅದಕ್ಕೆ ಅವರ ಸಮಾಜದ ಯುವಕರಿಂದಲೇ ವಿರೋಧಗಳು ವ್ಯಕ್ತವಾಗಿವೆ. ಇದನ್ನೆಲ್ಲ ಓದುತ್ತಿದ್ದಂತೆ ನನ್ನ ತಲೆಯಲ್ಲಿ ಅನೇಕ ವಿಚಾರಗಳು ಹಾದು ಹೋದವು.

ಇವರು ಕೊಟ್ಟ ಕಾರಣ ತಕ್ಕ ಮಟ್ಟಿಗೆ ಸರಿಯೆಂದು ನನಗೆ ಕಾಣಿಸಿತು. ನನ್ನ ಸ್ವಂತದ ಉದಾಹರಣೆ ಕೊಡುವುದಾದರೆ ನಾನು ಹವ್ಯಕ ಮತ್ತು ಮನೆಯವರು ಕೋಟಾ ಬ್ರಾಹ್ಮಣರು. ನಾವಿಬ್ಬರೂ ಬ್ರಾಹ್ಮಣರಾದರೂ ನಮ್ಮಿಬ್ಬರ ಕುಟುಂಬಗಳ ರೀತಿ-ನೀತಿ, ಸಂಸ್ಕೃತಿ, ಆಚರಣೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ನಮ್ಮಿಬ್ಬರ ವೇದಗಳು ಹಾಗೂ ಪ್ರದೇಶ (ಜಿಲ್ಲೆ) ಬದಲಾಗಿದ್ದೂ ಕಾರಣವಿರಬಹುದು. ಉದಾಹರಣೆಗೆ ನಮ್ಮ ಮದುವೆಯ ಮೊದಲಾರ್ಧ ಸಾಗರದ ಹವ್ಯಕರಂತೆ (ಸಾಗರ ಮತ್ತು ಶಿರಸಿ ಹವ್ಯಕರ ಆಚರಣೆಗಳಲ್ಲೂ ಸಾಕಷ್ಟು ಅಂತರವಿದೆ), ಉಳಿದಾರ್ಧ ಕೋಟಾದವರಂತೆ. ಸಾಗರದ(ದಶ ಸೀಮೆ) ಕಡೆಗಳಲ್ಲಿ ಕಾಲುಂಗುರವನ್ನು ವರನ ಕಡೆಯವರು ಕೊಡಬೇಕು, ಕೋಟಾದವರಲ್ಲಿ ವಧುವಿನ ಕಡೆಯವರು. ಹೀಗಾಗಿ ನನಗೆ ಕಾಲುಂಗುರ ಯಾರೂ ತೊಡಿಸಲಿಲ್ಲ. ಶಿರಸಿಯಿಂದ ಮಂಗಳೂರಿಗೆ ವಧು ಪ್ರವೇಶಕ್ಕೆ ಹೋಗುವಾಗ ಮುಂದಿನ ಕಾರ್ಯದಲ್ಲಿ ಆಡಿಕೊಳ್ಳುವರ ಬಾಯಿಗೆ ಆಹಾರವಾಗಬಾರದೆಂದು ನಾನು ಇವರ ಗಮನಕ್ಕೆ ತಂದೆ. ತದನಂತರ ಇಬ್ಬರೂ ಸಿಕ್ರೇಟಾಗಿ ಪಕ್ಕದ ಬೆಳ್ಳಿಯಂಗಡಿಯಲ್ಲಿ ಕಾಲುಂಗುರ ಕೊಂಡೆವು. ಇನ್ನೂ ಎರಡು ಕಡೆಯ ಹಿರಿಯರಿಗೆ ಹೀಗಾಗಿತ್ತೆಂದು ವಿಷಯ ತಿಳಿಸಿಲ್ಲ:)

ನನಗೆ ನೆನಪಿದ್ದಂತೆ ನಾನು ಇಷ್ಟಪಟ್ಟಿದ್ದು ಕೋಟಾದವರು ಎಂದು ಗೊತ್ತಾದಾಗ ಅಮ್ಮನ ಮುಖ ಗಂಭೀರವಾಗಿತ್ತು. ಗುರುಗಳು ಒಪ್ಪುವರೋ ಇಲ್ಲವೋ ಎಂಬ ದುಗುಡ. ಎಂಟು ವರ್ಷದ ಕೆಳಗೆ ನಮ್ಮ ಮನೆಯಲ್ಲಿನ ಅಂತಿಮ ನಿರ್ಧಾರಗಳು  ಈಗಿನಷ್ಟು ಸಂಸ್ಥಾನದ ಮೇಲೆ ನಿರ್ಭರವಾಗಿರಲಿಲ್ಲ. ನಾವು ಬಹು ಮುಂಚಿನಿಂದಲೇ ಶಿರಸಿಯಲ್ಲಿ ಸೆಟಲ್ ಆಗಿದ್ದರಿಂದ ಅಮ್ಮನ ತವರಿನ ಮಠವಾಗಿದ್ದ ಸ್ವರ್ಣವಳ್ಳಿಗೆ ನಡೆದುಕೊಳ್ಳುತ್ತಿದ್ದೆವು. ಅದೂ ವರ್ಷಕ್ಕೆರಡು ಭೇಟಿಯೊಂದಿಗೆ ಮುಗಿಯುತ್ತಿತ್ತು. ಆಗ ಸಾಗರದ ಮಠದ ಬಗ್ಗೆ  ಅಲ್ಲಿನ ಬಹುತೇಕ ಜನಕ್ಕೇ ಪ್ರೀತಿಯಿರಲಿಲ್ಲ. ನಾನಾಗ ಹವ್ಯಕರ ಮಠವೆಂದರೆ ಸ್ವರ್ಣವಳ್ಳಿ ಎಂದೇ ಭಾವಿಸಿದ್ದೆ. ತದನಂತರದ ವರ್ಷಗಳಲ್ಲಿ ರಾಘವೇಶ್ವರ ಸ್ವಾಮಿಗಳು ಅಧಿಕಾರ ವಹಿಸಿದ ನಂತರ ಆ ಮಠದ ಖದಿರೇ ಬದಲಾಯಿತು. ಹೊಸ ಸ್ವಾಮಿಗಳು ಜನರೊಡನೆ ಬೆರೆತು ಬಹುಬೇಗ ಎಲ್ಲರ ಪ್ರೀತಿ-ವಿಶ್ವಾಸ ಗಳಿಸಿದರು. ನನ್ನ ಅಪ್ಪ-ಅಮ್ಮ ಸಹ ನಿಯಮಿತವಾಗಿ ರಾಮಚಂದ್ರಾಪುರ ಮಠಕ್ಕೆ ಹೋಗಲಾರಂಭಿಸಿದರು. ಹೀಗಾಗಿ ಕುಟುಂಬದ ಪ್ರಮುಖ ನಿರ್ಧಾರಗಳನ್ನು ಸ್ವಾಮಿಗಳ ಬಳಿ ಹೇಳಿಕೊಂಡು ಆಶೀರ್ವಾದಪೂರ್ವಕವಾಗಿ ಮಂತ್ರಾಕ್ಷತೆ ಪಡೆಯುವುದು ವಾಡಿಕೆಯಾಗಿ ಹೋಯಿತು. ಈಗ ಇದೇ ಸಮಸ್ಯೆಯಾಗಿತ್ತು.

ನಾವು ಕೇಳಿದ್ದ ಪ್ರಕಾರ ಸಗೋತ್ರ ವಿವಾಹಕ್ಕೆ ಸಂಸ್ಥಾನದ ಅನುಮತಿಯಿರಲಿಲ್ಲ ( ಪೀಠ, ಸಂಸ್ಥಾನ, ಸ್ವಾಮಿಗಳು, ಮಠ ಇವುಗಳ ಮಧ್ಯ ಬೇಧಗಳಿದೆ). ಸಗೋತ್ರ ಮದುವೆಗಳಿಗೆ ಗುರುಗಳ ಆಶೀರ್ವಾದ ಕೇಳಿಬಂದರೆ ಅವರು ಅಸಮ್ಮತಿ ಸೂಚಿಸುವುದಿಲ್ಲ. ಆದರೆ ಮಂತ್ರಾಕ್ಷತೆ ನೀಡುವುದಿಲ್ಲ. ಮಂತ್ರಾಕ್ಷತೆ ದೊರಕದ ಹೊರತು ಕಾರ್ಯ ಮುಂದುವರಿಸುವಂತಿಲ್ಲ. ಇಕ್ಕಟ್ಟಿನ ಸ್ಥಿತಿ. ನಮ್ಮದು ಸಗೋತ್ರವಲ್ಲದಿದ್ದರೂ, ಹವ್ಯಕರಾದ ನಾವು ಕೋಟಾದವರಿಗೆ ಹೆಣ್ಣು ನೀಡುವುದಕ್ಕೆ ಹೀಗೆ ಏನಾದರೂ ಆದರೆ ಎಂದು ಅಮ್ಮನ ಚಿಂತೆಯಾಗಿತ್ತು. ಕೊನೆಗೆ ಸ್ವಾಮಿಗಳಿಗೆ ತ್ರಿಮತಸ್ಥ ಬ್ರಾಹ್ಮಣರ ನಡುವಿನ ಕೊಟ್ಟು-ಕೊಳ್ಳುವಿಕೆಗೆ ಸಮ್ಮತಿಯಿದೆ ಎಂದು ತಿಳಿದುಬಂದು ಅಮ್ಮ ನಿರಾಳವಾದರು.

ಮದುವೆ ಆದ ಮೇಲೆ ಅತ್ತೆಯಿಂದ ಗೊತ್ತಾದ ವಿಷಯವೆಂದರೆ ನನ್ನ ಗಂಡನ ಮನೆಯಲ್ಲೂ ಈ ವಿಷಯದ ಬಗ್ಗೆ ಚರ್ಚೆ ನಡೆದಿದ್ದವಂತೆ. ಕೋಟಾದವರು ಯಾವುದೇ ಮಠಕ್ಕೆ ಬಂಧಿತರಾಗದಿದ್ದರಿಂದ ಹಿರಿಯ ಪಂಡಿತರ ಬಳಿ ಈ ವಿಷಯ ಪ್ರಸ್ತಾಪಿಸಿದ್ದರಂತೆ. ಅವರು ಅನುಮತಿ ನೀಡಿದ ಬಳಿಕವೇ ಮಾತು ಮುಂದುವರೆದಿದ್ದು. ನಮ್ಮದು ಲವ್ ಮ್ಯಾರೇಜ್ ಆದರೂ ವಿವಾಹ ಅನ್ನೊದು ವಧು-ವರರನ್ನು ಮೀರಿ ಎರಡು ಕುಟುಂಬಗಳ ನಡುವಿನ ಸಂಬಂಧವಾಗಿಬಿಡುತ್ತದೆ.

ಇದೆಲ್ಲಾ ಯಾಕೆ ಹೇಳುತ್ತಿದ್ದೇನೆ ಅಂದರೆ ಭಾರತೀಯ ಸಮಾಜ ಪದ್ಧತಿ ತುಂಬಾ ಸಂಕೀರ್ಣವಾದದ್ದು ಎಂದು ನನಗೆ ಅನ್ನಿಸುವುದರಿಂದ. ಯಾವುದನ್ನೂ ತಪ್ಪು-ಸರಿ ಎಂದು ವರ್ಗೀಕರಿಸಿ ತುಲನೆ ಮಾಡಲು ಸಾಧ್ಯವಿಲ್ಲ. ಈ ಸಂಪ್ರದಾಯ ನಮ್ಮ ರಕ್ತದಲ್ಲಿ ನಮಗರಿವಿಲ್ಲದೆ ಬೆರೆತುಕೊಂಡು ಬಿಟ್ಟಿದೆ. ಅದನ್ನು ಶೋಧಿಸಿ  ಬೇರೆ ಮಾಡುವುದು ಡಯಾಲಿಸಸ್ ಮಾಡಿದಷ್ಟೇ ಯಾತನಾಮಯ. ಪೆನ್ನಲ್ಲಿ, ಮೈಕಿನಲ್ಲಿ ಅಂತರಜಾತಿ ವಿವಾಹಗಳ ಬಗ್ಗೆ ಕುಟ್ಟಬಹುದು, ಕೂಗಾಡಬಹುದು. ಆದರೆ ಈ ತರಹದ ವಿವಾಹಗಳನ್ನು ನಿಭಾಯಿಸುತ್ತಿರುವರಿಗೆ ಇದರ ಕಷ್ಟಗಳು ಗೊತ್ತು.

ಹಾಗಂತ ನಾನು ಈ ವಿವಾಹಗಳ ವಿರೋಧಿಯೇನಲ್ಲ. ಅದು ಅವರವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬಿಟ್ಟ ವಿಚಾರ. ಮತ್ತು ಸಾಯುವ ತನಕ ಸಂಬಂಧಗಳನ್ನು ನಿಭಾಯಿಸಿಕೊಂಡು ಹೋಗುವ ಎದೆಗಾರಿಕೆಗೆ ಬಿಟ್ಟದ್ದು. ನಮ್ಮದು ಅಂತರಜಾತಿ ವಿವಾಹ ಅಲ್ಲದಿದ್ದರೂ ಅಂತರ ಒಳಜಾತಿ ವಿವಾಹ. ಎರಡು ಕುಟುಂಬಗಳ ಸಹಕಾರ, ಬೆಂಬಲವಿದ್ದರೂ ಬದಲಾಗುವ ರೀತಿ-ನೀತಿ, ಸಂಪ್ರದಾಯ, ಆಚರಣೆಗಳಿಗೆ ನಾನಿನ್ನೂ ಒಗ್ಗಿಕೊಂಡಿಲ್ಲ. ಇನ್ನು ಕುಟುಂಬದ ವಿರೋಧ ಕಟ್ಟಿಕೊಂಡವರ ಕತೆಯೇನು? ಹಾಗೇನೆ ಬೇರೆ ದೇವರ, ಬೇರೆ ತತ್ವಗಳನ್ನೇ ಉಸಿರಾಡುವ ಪರಕೀಯ ಕುಟುಂಬಕ್ಕೆ ಹೋಗಿ ಅನುಭವಿಸುವ ಹೆಣ್ಣಿನ ಹೇಳಿಕೊಳ್ಳಲಾಗದಂತಹ ಸಂಕಟಗಳಿಗೆ ನನ್ನ ಸಹಾನುಭೂತಿಯಿದೆ.

ನಿಮ್ಮೊಂದಿಗೆ

March 4, 2009 by ನೀಲಾಂಜಲ

ಹೌದು, ನಾನು ಬ್ಲಾಗ್ ಪ್ರಾರಂಭಿಸಿ ಮೊನ್ನೆಗೆ ಒಂದು ವರ್ಷ ತುಂಬಿತು. ಹಾಗಂತ ನಂಗೆ ಏನೂ ಖುಷಿ ಆಗ್ತಾ ಇಲ್ಲ. ಬದಲಿಗೆ ಬೇಜಾರಾಗ್ತಾ ಇದೆ. ಒಂದು ವರ್ಷ! ಅಬ್ಬಾ, ನಾನು ಮನೇಲಿ ಕೂತು ಒಂದು ವರ್ಷ ಆಗೊಯ್ತಾ? ಏನೂ ಮಾಡಲಿಲ್ಲ.

ಆವತ್ತು ಸಹ ಕಂಪ್ಯೂಟರ್ ಮುಂದೆ ಬೇಜಾರಾಗಿ ಕೂತಿದ್ದೆ. ನಂಗೆ ಆಫೀಸಿಗೆ ಹೋಗಿ ಹೋಗಿ ಬೊರ್ ಬಂದಿತ್ತು. ಇವತ್ತು ಮನೇಲಿ ಇದ್ದು ಇದ್ದು ಬೇಜಾರು ಬಂದಿದೆ. ಆಗಲೂ ನಂಗೆ ಲೈಫಲ್ಲಿ ಚೇಂಜ್ ಬೇಕಿತ್ತು. ಈಗ್ಲೂ ಚೇಂಜ್ ಬೇಕು. ಮತ್ತೆ ಕೆಲಸಕ್ಕೆ ಹೋಗಬೇಕು. ಆದರೆ ನಾನು ಕೆಲಸಕ್ಕೆ ಹೋದ್ರೆ, ವಾಪಸ್ಸು ಮನೆಗೆ ಬಂದಾಗ ಯಾರೂ ಟೀ ಮಾಡಿ ಕೊಡಲ್ಲ, ಊಟ ರೆಡಿ ಮಾಡಿ ಟೇಬಲಲ್ಲಿ ಸಿಂಗರಿಸಿ ಇಡಲ್ಲ. ಮತ್ತೆ ನಾನೇ ಮಾಡ್ಕೋಬೇಕು. ನಿಜ, ನಾನು ’ಗಂಡ’ ನಲ್ಲವಲ್ಲ!
————
ನೀಲಾಂಜಲ ನನ್ನ ಹೊಸ ಐಡೆಂಟಿಟಿ. ಇದು ನಂಗೆ ಬೇಕಾಗಿತ್ತು. ಆಗ ನಂಗೆ ಮಾತಾಡ್ತಾ ಇರಬೇಕಾದರೆ ಶಬ್ದಗಳೇ ಮರೆತು ಹೋಗ್ತಾ ಇತ್ತು. ನಂಗೆ ಏನು ಅನ್ನಿಸ್ತಿದೆ ಅನ್ನೊದನ್ನು ಕ್ರೂಡೀಕರಿಸಿ ಹೇಳೊಕೆ ಕಷ್ಟ ಆಗ್ತಾ ಇತ್ತು. ಇಲ್ಲಿ ಬರೀತಾ ಬರೀತಾ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಅಭಿಪ್ರಾಯ ಮಂಡನೆ ನಿಧಾನವಾಗಿ ಕರಗತವಾಗ್ತಿದೆ.
————-
ಮೊದಲು ಬರಿಯೋಕೆ ಪೆನ್ನು ಎತ್ತಿದ್ರೆ ಯಾತನೆಯಾಗ್ತಾ ಇತ್ತು. ನಾನು ಮೊದಲು ಬರೀತಾ ಇದ್ದ ಪತ್ರಗಳು ನೆನಪಿಗೆ ಬಂದು ಬಿಡ್ತಿತ್ತು. ಒಂದೂ ಅಕ್ಷರ ಮೂಡ್ತಿರಲಿಲ್ಲ. ಈಗ ಹಳೆಯ ನೆನಪುಗಳು ಖಾಲಿಯಾಗಿದೆ. ಆರಾಂ ಆಗಿ ಪೆನ್ನು ಓಡುತ್ತೆ. ಒಂದು ಮಾತನ್ನು ಹೇಗೆ ಹೇಳಿದರೆ ಜಾಸ್ತಿ ಇಫೆಕ್ಟ್ ಆಗಬಹುದು ಎಂದೆಲ್ಲಾ ಮನಸ್ಸು ತರ್ಕಿಸುತ್ತದೆ. ತಡೆದು ಹಿಡಿದಿದ್ದ ಮಾತೆಲ್ಲ ಸರಾಗವಾಗಿ ಹರಿಯುತ್ತಿದೆ.
————-
ನಾನು ಮೊದಲು ೧,೦೦೦ ಕ್ಲಿಕಗಳಾದಾಗ ಸೆಲೆಬ್ರೇಟ್ ಮಾಡಬೇಕು ಅಂದು ಕೊಂಡಿದ್ದೆ. ಅದು ಯಾವಾಗ ಆಯ್ತೋ, ಆಮೇಲೆ ೫,೦೦೦ ಅಂದು ಕೊಂಡೆ. ಅದು ಸಹ ಗಮನಕ್ಕೆ ಬರಲಿಲ್ಲ. ಕೊನೆಗೆ ಹೋಗ್ಲಿ ೧೦,೦೦೦ ಅಂದುಕೊಂಡೆ. ಬ್ಲಾಗಿಗೆ ಒಂದು ವರ್ಷ ತುಂಬಿದ ದಿನದಂದು ಆಗಲಿ ಅಂದು ಕೊಂಡ್ರೆ ಒಂದು ವಾರ ಮೊದಲೇ ಆಗಿ ಹೋಯ್ತು. :(

ಹಾಗೇನೆ ಬ್ಲಾಗ್ ಆರಂಭಿಸಿದ ಪ್ರಾರಂಭದಲ್ಲಿ ನನ್ನ ಬ್ಲಾಗೂ ಕೆಂಡಸಂಪಿಗೇಲಿ ಬರಲಿ ಅಂತಾ ಆಶಿಸ್ತಾ ಇದ್ದೆ. ಬರ್ತಾನೆ ಇರಲಿಲ್ಲ. ಕೊನೆಗೊಂದು ದಿನ ಅಲ್ಲಿ ಬಂದು ಬಿಡ್ತು. ಆಹಾ, ಏಷ್ಟು ಖುಷಿ ಆಯ್ತು ಗೊತ್ತಾ, ಆಮೇಲೆ ಅವಧಿ ಮೇಲೆ ಸಿಟ್ಟು ತಿರುಗಿತು. ನನ್ನ ಬ್ಲಾಗು ಇವರ ಕಣ್ಣಿಗೆ ಬೀಳೊದೇ ಇಲ್ವಲ್ಲಾ ಅಂತ. ಕಡೆಗೊಂದು ದಿನ ಅಲ್ಲೂ ಬಂತು:)

ಆಗೆಲ್ಲ ನಾನು ನನ್ನ ಬ್ಲಾಗ್ ಹೆಸರು ವರ್ಡ್ ಪ್ರೆಸ್ಸಿನ ಟಾಪ್ ಲಿಸ್ಟನಲ್ಲಿ ಬಂದರೆ ವಿಪರೀತ ಖುಷಿ ಪಡ್ತಾ ಇದ್ದೆ. ಅದರ ಸ್ಕ್ರೀನ್ ಶಾಟ್ ತೆಗೆದು ಸೆವ್ ಮಾಡಿ ಇಟ್ಟು ಕೊಳ್ತಾ ಇದ್ದೆ. ದಿನ ಕಳೆದಂತೆ ಎಲ್ಲವೂ ರೂಢಿ ಆಗ್ತಾ ಬಂತು. ಕನ್ನಡ ಪ್ರಭಾದಲ್ಲಿ ಬಂದಾಗ ಒಂಚೂರು ಖುಷಿನೇ ಆಗಲಿಲ್ಲ. ಓಹೊ ಅನ್ನಿಸ್ತು. ಕ್ಲಿಕಿಂಗ್ ಜಾಸ್ತಿ ಆಗಿದ್ದಕ್ಕೆ ಖುಷಿ ಆಯ್ತು.

ಪ್ರಾರಂಭದಲ್ಲಿ ದಿನಕ್ಕೆ ಹನ್ನೆರಡು ಸಲ ನನ್ನ ಬ್ಲಾಗೇ ನಾನು ತೆಗೆದು ನೋಡ್ತಿದ್ದೆ. ನನ್ನ ಕ್ಲಿಕ್ ನಿಂದಾದರೂ ಟಾಪ್ ಲಿಸ್ಟನಲ್ಲಿ ಬರಲಿ ಅಂತ;) ಈಗ ಲೊಗಿನ್ ಆಗೇ ಬ್ಲಾಗ್ ನೋಡುವುದು. ಟಾಪ್ ಲಿಸ್ಟನಲ್ಲಿ ಆಗಾಗ ಬಂದಾಗ ನಿಜಕ್ಕೂ ಜನ ಓದುತ್ತಿದ್ದಾರೆ ಅಂತ ಸಮಾಧಾನವಾಗುತ್ತೆ.
——————
ನನಗೆ ನನ್ನ ಯೋಚನೆಗಳನ್ನು ಹಂಚಿಕೊಳ್ಳಲು ಒಂದು ಜೊತೆ ಬೇಕಿತ್ತು. ಕಾಲೇಜಿನ ದಿನಗಳಲ್ಲಿ ಪ್ರಜ್ಞಾ ಇದ್ದಳು, ಕೆಲ ಒಳ್ಳೆಯ ಉಪನ್ಯಾಸಕರಿದ್ದರು. ಇನ್ನೂ ಕೆಲವು ವಾದಗಳಿಗೆ ಮನೆಗೆ/ಪ್ರೆಸ್ಸಿಗೆ ಬರುತ್ತಿದ್ದ ಅನೇಕ ಪರಿಚಯದವರಿದ್ದರು. ಎಲ್ಲಕ್ಕೂ ಜಾಸ್ತಿ ಅಮ್ಮನಿದ್ದಳಲ್ಲ. ಬೆಂಗಳೂರಿಗೆ ಬಂದಾಗಿನಿಂದ ಆಪ್ತ ವಲಯ ಕಡಿಮೆಯಾಗತೊಡಗಿತು ಅಥವಾ ನಾನು “ಪ್ರೊಫೆಷನಲ್” ಆಗಲು ಹೊರಟಿದ್ದೆ. ಮಾತು-ಕತೆ ಕೇವಲ ಕೆಲಸಕ್ಕೆ ಸೀಮಿತವಾಯಿತು. ಹಾಗೇಯೇ ಪರಿಚಯವಾದ ನನ್ನ ಹುಡುಗನಿಗೂ ಈ ಚರ್ಚೆಗಳಲ್ಲಿ ಅಂತಹ ಆಸಕ್ತಿಗಳಿಲ್ಲ. ಅವನಿಗೆ ತನ್ನ ಕೆಲಸ ಮತ್ತು ಅವನ ಗುರಿ ಬಿಟ್ರೆ ಬೇರೆ ವಿಷಯಗಳೆಡೆ ಗಮನವಿಲ್ಲ. ಆದ್ದರಿಂದ ಮಾತೆಲ್ಲ ಹೊಸ ಟೆಕ್ನಿಕ್, ಎನಿಮೇಷನ್ ಮೂವಿ, ವೆಬ್ ಸೈಟ್, … ಇವುಗಳ ಸುತ್ತ ಮಾತ್ರ ಸುತ್ತುತಿತ್ತು. ಹೊಸದು ಓದಿದರೂ ಹೇಳಿಕೊಳ್ಳಕೆ ಜನ ಬೇಕಲ್ವಾ? ತಲೆಯಲ್ಲಿ ಮೂಡುತ್ತಿರುವ ವಿಚಾರಗಳನ್ನು ಚರ್ಚಿಸಲು ಒಂದು ಜೊತೆ ಬೇಕಲ್ವಾ? ನನ್ನ ಸುತ್ತ ಮುತ್ತಲಿನ ಜನರಿಗೆಲ್ಲ ಅವರವರದ್ದೇ ಚಿಂತೆ ಜಾಸ್ತಿ. ಹಾಗಾಗಿ ಮನಸ್ಸು ಮಾತಾಡುವುದನ್ನೇ ನಿಲ್ಲಿಸ್ತಾ ಬಂತು.
—————–
ಮೊದಲು ನಾನು ಫ್ಲಿಕ್ಕರ್ ನಲ್ಲೇ ಜಾಸ್ತಿ ಕಾಲ ಕಳೆತಿದ್ದೆ. ಅಲ್ಲಿನ ಅರ್ಚನಾಳ ಫೋಟೋಗಳು ನಂಗೆ ತುಂಬಾ ಇಷ್ಟ. ಅವಳ ಬ್ಲಾಗಿನಿಂದಲೇ ನನಗೆ ಮೊತ್ತ ಮೊದಲ ಬಾರಿಗೆ ಬ್ಲಾಗ್ ಲೋಕದ ಸಾಮರ್ಥ್ಯ ಅರ್ಥವಾಗಿದ್ದು. ಅದಕ್ಕೂ ಮೊದಲು ರೆಡಿಫ್ ನ ಲಾಗಿನ್ ಪೇಜಿನಲ್ಲಿದ್ದ ಅನೇಕ ಬ್ಲಾಗ್ ಗಳನ್ನು ಕಣ್ಣಾಯಿಸಿದ್ದೆ. ಅರ್ಚನಾಳಿಂದ ಎಷ್ಟೆಲ್ಲಾ ಒಳ್ಳೆಯ ಕ್ರಿಯೇಟಿವ್ ಬ್ಲಾಗ್ ಗಳ ಪರಿಚಯ ನನಗಾಯ್ತು. ಆಮೇಲೆ ನೆನಪಿದ್ದಂತೆ ಪರಿಚಯವಾಗಿದ್ದು ಅವಧಿ. ಅದರಲ್ಲೂ ಅದರಲ್ಲಿ ಬರುತ್ತಿದ್ದ ಭಾಮಿನಿ ಷಟ್ಪದಿ. ದಿನಾ ಅವಧಿ ತೆಗೆದು ಇವತ್ತು ಚೇತನಾಳ ಹೊಸ ಬರಹ ಬಂದಿದೆಯಾ ಅಂತ ನೋಡುತ್ತಿದ್ದೆ. ಬ್ಲಾಗ್ ಲೋಕ ಪರಿಚಯವಾದ ಮೇಲೆನೇ ಅವರು ದಿನಾ ಬರೆಯುವುದಿಲ್ಲ ಅಂತ ಗೊತ್ತಾಗಿದ್ದು. ಹಾಗೆನೆ ಅಬ್ದುಲ್ ರಷೀದರ ಮೈಸೂರು ಪೋಸ್ಟ್. ಈ ಎರಡು ದಿನಾ ಆಫೀಸಿಗೆ ಬಂದ ಕೂಡಲೇ ಫಸ್ಟ್ ಓಪನ್ ಮಾಡೊದಾಗಿತ್ತು. ಕೆಂಡಸಂಪಿಗೆ ಬರೊ ಹೊತ್ತಿಗೆ ಬ್ಲಾಗ್ ಬಗ್ಗೆ ನನ್ನ ಇಂಟರೆಸ್ಟ್ ಕಡಿಮೆಯಾಗಿತ್ತು.
————-
ನಮ್ಮನೆಗೆ ನೆಟ್ ತಗೊಂಡಾದ ಹೊತ್ತಿಗೆ ಸರಿಯಾಗಿ ಹೊಸ ಕ್ಯಾಮೆರಾವು ಬಂದಿತ್ತು. ಹೀಗೆ ಮತ್ತೆ ನೆಟ್ನಲ್ಲಿ ಅಪ್ ಲೋಡ್ ಮಾಡೊ ಹುಚ್ಚು ಹತ್ತಿತು. ಕೊನೆಗೊಂದು ದಿನ ನಂದು ಒಂದು ಬ್ಲಾಗ್ ಅಂತ ಬೇಕು ಅಂತಾ ನೀಲಾಂಜಲ ತೆಗೆದೆ. ಹೆಸರು ಇಡಕೆ ಏಷ್ಟು ಕಷ್ಟ ಆಗಿತ್ತು ಗೊತ್ತಾ? ನಾನು ಏನು ಹಾಕಿದರೂ ಮೊದಲೇ ಇದೆ ಅಂತ ಬರ್ತಾ ಇತ್ತು. ಆಗ ನನಗೆ ನೀಲಾಂಜನ ಅಂತ ಫೇಮಸ್ ಬ್ಲಾಗಿದೆ ಅಂತ  ಗೊತ್ತಿದ್ರೆ ಈ ಹೆಸರೇ ಇಡ್ತಾ ಇರಲಿಲ್ಲ. ಈ ಹೆಸರಿಂದ ಎಲ್ಲರಿಗೂ ಏಷ್ಟೆಲ್ಲಾ ಕನ್ ಫ್ಯೂಸ್ ಆಯ್ತು. ಈಗ್ಲೂ ಮಾಡ್ಕೊಳ್ಳೊರಿದ್ದಾರೆ. ಲ ಮತ್ತು ನ ಗೆ ವ್ಯತ್ಯಾಸ ಇಷ್ಟು ಕಡಿಮೆ ಇದೆ ಅಂತ ಗೊತ್ತಾಗಿದ್ದೆ ಈಗ ನಂಗೆ :D
————
ಇಲ್ಲಿ ಅಂದರೆ ಮುಂಬಯಿಗೆ ಬಂದ ಮೇಲೆ ನಾನು ಸೀರಿಯಸ್ ಆಗಿ ಬ್ಲಾಗಿಸೊಕೆ ಪ್ರಾರಂಭಿಸಿದ್ದು. ಇಡೀ ದಿನ ಮನೆಲಿ ಒಬ್ಬಳೇ ಇರೊದ್ರಿಂದ ಮಾತಾಡೊಕೆ ಯಾರಾದ್ರೂ ಬೇಕಾಯಿತಲ್ವ. ನಾನು ಟಿವಿ ನೋಡೊಲ್ಲ. ನೋಡೊಕೆ ಕೂತ್ರೆ ಅದರ ಮುಂದಿನಿಂದ ಏಳೊದಿಲ್ಲ. ದಿನಕ್ಕೆ ೩-೪ ಸಿನೆಮಾ ಆರಾಮಾಗಿ ನೋಡಬಲ್ಲೆ. ಸೀರಿಯಲ್ ಯಾವುದು ಬರುತ್ತೆ ಅಂತ ಮಾತ್ರ ಗೊತ್ತಿರೊಲ್ಲ.  ಬ.ಡೇಗೆ ನನ್ನ ಹುಡುಗನಿಂದ ಆನ್ ಲಿಮಿಟೆಡ್ ನೆಟ್ ಪ್ರಸೆಂಟ್ ಸಿಕ್ಕಿದ ಮೇಲಾಗಿನಿಂದ ನನ್ನ ಪ್ರತಿ ದಿನ ನೆಟ್ಟಿನಲ್ಲೇ ಮುಳುಗಿ ಹೋಗಿರುತ್ತೆ. ತರಾವಾರಿ ಜನರು, ವಿವಿಧ ವಿಚಾರಗಳು, ಹೊಸ ಡಿಸೈನ್ ಗಳು, ಐಡಿಯಾಗಳು……… ಹೀಗೆ ರಾತ್ರಿಯಾಗಿಬಿಡುತ್ತೆ.
———–
ಈ ಒಂದು ವರ್ಷದಲ್ಲಿ ಅನೇಕ ಹೊಸ ಜನರ ಪರಿಚಯ ನನಗಾಗಿದೆ. ನನಗೆ ನೆಟ್ ನಿಂದ ಯಾವುದೇ ಇನ್ ಕಂ ಬರದೇ ಇದ್ದರೂ ಅದೂ ನನ್ನ ಒಂಟಿತನವನ್ನು ಹೊಗಲಾಡಿಸಿದೆ. ನನ್ನ ಭಾವನೆಗಳನ್ನು ಕೇಳಿಕೊಳ್ಳಲು ಒಬ್ಬ ಅಸದೃಶ್ಯ ಓದುಗ ನನಗೆ ದೊರಕಿದ್ದಾನೆ. ಕೆಲವೊಬ್ಬರು ನಿಶಬ್ಧವಾಗಿ ನನ್ನ ಮಾತು ಕೇಳಿಸಿಕೊಂಡರೆ ಇನ್ನುಳಿದವರು ಸಶಬ್ಧವಾಗಿ. ಎಲ್ಲರ ಒಳಗೆ ಈ ಬರಹಗಳು ಮೂಡಿಸಿದ ಸ್ವಲ್ಪ ಸ್ವಲ್ಪ ಸಂವೇದನೆಗಳು ಸೇರಿ ನನ್ನ ಕಲ್ಪನೆಯ ಸಹೃದಯನ ನಿರ್ಮಾಣವಾಗಿದೆ. ಹೀಗೆ ನನಗೊಂದು ಆತ್ಮೀಯನನ್ನು ನೀವೆಲ್ಲ ಸೇರಿ ಒದಗಿಸಿಕೊಟ್ಟಿದ್ದಕ್ಕೆ ನಿಮಗೆಲ್ಲರಿಗೂ ಅನಂತ ಧನ್ಯವಾದಗಳು*.

ಪ್ರೀತಿಯಿಂದ,
ನೀಲಾಂಜಲ
ಫೆಬ್ರವರಿ ೨೮, ೨೦೦೯

*ಜೊತೆಗೆ ಈ ಬ್ಲಾಗಿನ ಪ್ರಾಯೋಜತ್ವ(ಇಂಟರ್ನೆಟ್ ಬಿಲ್) ಹೊದ್ದುಕೊಂಡಿರುವ ನನ್ನ ಹುಡುಗನಿಗೂ ಧನ್ಯವಾದಗಳು ;)