ಬುದ್ಧ ನಕ್ಕಾಗ

November 26, 2011

ಹೊಸ ಮನೆಕೆಲಸದವರು ಸೇರಾದ ಮೇಲೆ ಕೇಳುವ ಮಾಮೂಲು ಪ್ರಶ್ನೆ ಬುದ್ಧನ್ನ ಏಕೆ ಇಟ್ಕೊಂಡಿದ್ದಿರಾ!? ನಿಮ್ಮ ದೇವರಾ? ಹ್ಹ ಹ್ಹ. ಇದೊಳ್ಳೆ ಕತೆ ಆಯ್ತಲ್ವಾ, ನಂಗೆ ಬುದ್ಧ ಇಷ್ಟ. ಅದಕ್ಕೆ ಇಟ್ಕೊಂಡಿದ್ದೇನೆ. ಆದರೆ ಅದು ಅವರಿಗೆ ಅರ್ಥ ಆಗೋಲ್ವೆ.

ವಿಷಯ ಏನು ಅಂದ್ರೆ ಮೊದಲಿದ್ದ ಸುನೀತಾಳಿಗೆ ಬುದ್ಧ ಅವರ ದೇವರು. ಅವರು ಅಂಬೇಡ್ಕರ್ ’ಜಾತಿ’ಯವರಂತೆ. ಅಂದರೆ ನೌಬುದ್ಧಕ್ಕೆ ಸೇರಿದವರು. ಅದಕ್ಕೆ ಮನೇಲಿ ಅಂಬೇಡ್ಕರ್ ಮತ್ತು ಬುದ್ಧನ್ನ ಇಟ್ಕೊಂಡು ಪೂಜಿಸ್ತಾರಂತೆ. ಅದಕ್ಕೆ ನಾನೂ ಆಕೆಯ ಜಾತಿಯವಳಾ ಅಂತ ಗುಮಾನಿ. ಈಗೀರುವ ಮಂಗಲಾಗೆ ಬುದ್ಧನ್ನ ಕಂಡರೇ ಆಗೊಲ್ಲವಂತೆ. ಏಕೆಂದರೆ ಅವಳ ಜಾತಿಯವರು ಬೆಳಿಗ್ಗೆ ಎದ್ದು ಇವರ (ನೌಬುದ್ಧ) ಮುಖ ನೋಡಿದರೆ ಅಪಶಕುನವಂತೆ. ರಾತ್ರಿಯವರೆಗೂ ಅಗೋ ಕೆಲಸವು ಆಗೊಲ್ಲವಂತೆ. ಅದಕ್ಕೆ ತಾನು ಎಲ್ಲಿ ಆ ಜಾತಿಯವರ ಮನೆಯಲ್ಲಿ ಕೆಲಸ ಮಾಡ್ತಾಇದ್ದಿನೊ ಅಂತ ಗುಮಾನಿ!

ಈ ಇಬ್ಬರೂ ನಾನೊಬ್ಬ ಬ್ರಾಹ್ಮಣ ಅಂದ್ರೆ ನಂಬೊದೇ ಇಲ್ವೆ. ದೇವರಗೂಡೇ ಇಲ್ಲ, ಹೋಗಲಿ ದೇವರ ಚಿತ್ರನೂ ಇಲ್ಲ, ದಿನಾ ದೇವರ ಹಿಂದೆ ಸುತ್ತೊದು ಇಲ್ಲ, ….ನೀನು ಕುಂಕುಮನೂ ಇಟ್ಕೊಳಲ್ಲ,… ಪಂಡಿತ್ ಲೋಗ್ ಐಸೆ ನಹಿ ಹೋತೆ! ಏನಪ್ಪಾ ಮಾಡೊದು? :)

ಯಾಕೋ ನಮ್ಮನೆ ಬುದ್ಧನ್ನ ನೋಡಿದಾಗ ಆ ಹೋಮ್ ಡೆಕೊರ್ ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟಿರೊ ಹಳದಿ, ಕಪ್ಪು, ಬೆಳ್ಳಿ,… ಬಣ್ಣಗಳ ಚೆಂದಚೆಂದದ ಬುದ್ಧನ ಮೂರ್ತಿಗಳು ಜೋರಾಗಿ ನಗುತ್ತಿವೆಯೇನೊ ಅನ್ನಿಸ್ತಿದೆ.

ಸಂಜೆ ಏಳು

April 27, 2011

ನಿರ್ಧರಿಸಿದ ಕೆಲಸ ಮುಗಿಸಿ, ನಾಳಿನ ಕೆಲಸದ ರೂಪುರೇಷೆ ರಚಿಸಿ,
ತೃಪ್ತಿಯಿಂದ ಲಾಗೌಟ್ ಆಗುವ ಹೊತ್ತು
ಕ್ಲಯಂಟ್ ಅಪ್‌ಲೌಡ್ ಇದ್ದಲ್ಲಿ ತಡರಾತ್ರಿಯ ಗಾಡಿಗೆ
ಫೆಸಿಲಿಟಿ ವಿಭಾಗಕ್ಕೆ ಮೇಲ್ ಅರ್ಜಿಸುವ ಹೊತ್ತು
ಇಲ್ಲದಿದ್ದಲ್ಲಿ ಮೂರು ನಿಮಿಷದ ಒಳಗೆ ನಿರ್ಧರಿತ ಸಮಯಕ್ಕೆ ತಪ್ಪದೇ ಚಾಲೂ ಆಗುವ
ಬಸ್ಸಿನ ಒಳಗೆ ಗಡಿಬಿಡಿಯಿಂದ ನುಗ್ಗಿ ಸೀಟಿನಲ್ಲಿ ನಿರಾಳವಾಗುವ ಹೊತ್ತು
ಮುಗಿಲ ಬಂಗಾರ ಕರಗಿ ನೀರಾಗಿ
ರೋಡು, ಫ್ಲೈಓವರು, ಮಾಲು, ಬಜಾರುಗಳ ಮೇಲೆ ಹರಡಿಕೊಳ್ಳುವ ಹೊತ್ತು
ಕೆಂಪು-ಹಸಿರು-ಹಳದಿ ಲೈಟುಗಳ ಮಧ್ಯೆ
ಹಾರ್ನು ಪೊಂಪೊಗಳ, ಗಾಡಿ ಚಕ್ರಗಳ ಸದ್ದಿನ ಹೊತ್ತು
ಮರಳಿ ಮನೆಗೆ ವಿಶ್ರಮಿಸಿ ಹಗುರಾಗಿ
ನಾಳೆ ಹೊಸ ಹುಮ್ಮಸ್ಸಿನಿಂದ ಬರುವ ಆಯಾಮದ ಹೊತ್ತು

ಏಕಾಂತ ಸಂಜೆಗಳಲ್ಲಿ,
ಬಾಲ್ಕನಿಯಿಂದ ಬೀಸುವ ತಣ್ಣಗಿನ ಗಾಳಿ
ಅನುಭವಿಸುತ್ತ ಕಳೆಯುವ ಹೊತ್ತು
ಬೆಳ್ಳಿ ಬೆಳಕು ಕಂದಿ ನಿಯಾನ್ ಬೆಳಕು
ಹೊತ್ತಿಕೊಳ್ಳುವ ಹೊತ್ತು
ಇರುವ ಚಿಕ್ಕ ಚಿಕ್ಕ ಏಲೆಗಳ ನಡುವಿನಿಂದ ಇಣುಕುವ ದೊಡ್ಡ ದೊಡ್ಡ ಏಲೆಗಳ ಪಾರ್ಕು
ತುಂಬಿ ತುಳುಕಾಡುವ ಹೊತ್ತು
ಚಂದ್ರನಿಲ್ಲದ ಬಾನಿಗಾಗಿ ಪಾರ್ಕಿನ ಸಾಲು ಸಾಲು ಬಿಳಿ ಗೋಲ ಬಲ್ಬುಗಳು
ಹೊತ್ತಿ ಚೆಲ್ಲುವ ಹೊತ್ತು
ಹಾಗೇನೆ ಇನ್ನೊಂದು ದಿನ ಮುಗಿಯಿತಲ್ಲ ಎಂದು ಹಪಹಪಿಸುತ್ತ
ಮತ್ತೆ ಬರೆಯದ ಪೆನ್ನೆತ್ತಿಕೊಂಡ ಹೊತ್ತು

ಹೂಸು

December 19, 2010

ಸುಶೀಲಾ ರಮಣಾಕಾಂತ ಅಯ್ಯರ್ ಹೆಸರು ಪರಿಚಿತರ, ನೆಂಟಸ್ಥರ ಸಮೂಹದಲ್ಲಿ ಬಹಳ ಪ್ರಸಿದ್ಧಿಯನ್ನು ಪಡೆದಿತ್ತು. ಆಕೆಯ ಹೆಸರು ನೆನಸದೇ ಹರಟೆಕಟ್ಟೆಗಳಲ್ಲಿ, ಕಾರ್ಯದ ಮನೆಗಳಲ್ಲಿ ಮಾತುಗಳೇ ಮುಂದುವರೆಯುತ್ತಿರಲಿಲ್ಲ. ಕಾರಣವಿಷ್ಟೇ. ಆಕೆಯನ್ನು ಸತತವಾಗಿ ಕಾಡುತಿದ್ದ ವಾಯುಭಾಧೆ. ಏನೇ ಮದ್ದು ಮಾಡಿದರೂ ನಾಟಿರಲಿಲ್ಲ. ಮೊನ್ನೆ ಹೇಳಿದ ಆಚಾರ್ಯರ ಚೂರ್ಣವನ್ನು ದಿನವೂ ನೆಕ್ಕಿ, ನುಂಗಿ ನೀರು ಕುಡಿದರೂ ವಾಯು ಕರಗಲಿಲ್ಲ. ಬೇಕಲ್ಲದ ಹೊತ್ತಲ್ಲಿ ಸ್ವತಂತ್ರವಾಗಿ ಸದ್ದಿಲ್ಲದೆ ಹೊರಬಂದು ತನ್ನ ಶಕ್ತಿ ಸಾಮರ್ಥ್ಯವನ್ನು ಮೆರೆಯುತಿತ್ತು. ಆಕೆಗೆ ಗೊತ್ತಿದ್ದೂ ಗೊತ್ತಿಲ್ಲದವಳಂತೆ ನಟಿಸಿ ಬೇಸರ ಮೂಡಿ ಈಗ ತನ್ನದೇನೂ ತಪ್ಪಿಲ್ಲವೆಂಬ ಮನಭಾವ ಮೂಡಿ ನಿರುಮ್ಮಳವಾಗಿರುತ್ತಿದ್ದಳು. ಈಕೆ ಕೂರುತಿದ್ದ ಆಫೀಸಿನ ಜಾಗದ ಆಸುಪಾಸಿನಲ್ಲಿ ಆಫೀಸ್ ಬಾಯ್ ಜಾಸ್ತಿ ರೂಮ್ ಫ್ರೆಶನರ್ ಸ್ಪ್ರೇ ಮಾಡಿದರೂ ಅದು ತನಗಲ್ಲವೆಂಬಂತೆ ಇರುತ್ತಿದ್ದಳು.

ಹಾಗಂತ ಇದು ಈಕೆಗೆ ಈಗೀಗ ಪ್ರಾರಂಭವಾಗಿದ್ದಲ್ಲ. ಬಾಲ್ಯದಿಂದಲೂ ಇದೇ. ಡಿಡಿಯಲ್ಲಿ ಚೆಂದದ ಸಿನೆಮಾ ಬರುವಾಗ, ಮಹಾಭಾರತದಲ್ಲಿ ಭೀಮ ಗಧೆ ಎತ್ತುವಾಗ ಈಕೆಯ ಗಂಧ ಗಾಳಿಯಲ್ಲಿ ಬೆರೆತು ನಾತವಾಗಿ ಎಲ್ಲರ ಮೂಗ ಅರಳಿಸುತಿತ್ತು. ಕೊನೆ ಕೊನೆಗೆ ಯಾರು ಹೂಸು ಬಿಟ್ಟರೂ ಎಲ್ಲರೂ ಈಕೆಯ ಕಡೆಗೆ ಬೆಟ್ಟು ಮಾಡುತ್ತಿದ್ದರಿಂದ ಜಾಣರೂ, ಕಳ್ಳರೂ ಆದವರು ಮೆತ್ತಗೆ ಹುಳ್ಳನಗೆ ಬೀರುತಿದ್ದರು. ಕಾಲೇಜಿನ ಫೈನಲ್ ಎಕ್ಸಾಮಿನಲ್ಲಿ ಈಕೆಯ ಹಿಂದೆ ಕೂತಿದ್ದ ಗಟ್ಟಿಗಿತ್ತಿ ಪಾರೂ ಒತ್ತಿ ಹಿಡಿದಿದ್ದ ಕರ್ಚೀಫಿನಲ್ಲೇ ಗಳಗಳನೇ ಕಾರಿಕೊಂಡಿದ್ದಳು. ಮದುವೆಯಾದ ಮೇಲೆ ಊದುಬತ್ತಿ ಹಚ್ಚಿಟ್ಟಿದ್ದರೂ ಮಿಲನದ ಹೊತ್ತಲ್ಲೇ ಕಷ್ಟಪಟ್ಟರೂ ತಡೆಯಲಾಗದೇ ಸುಗಂಧ ಹರಿಸಿ, ಗಂಡನೆಂಬವನು ಕೂಗಾಡಿ ಪಕ್ಕದಲ್ಲಿ ಆಪತ್ಕಾಲಕ್ಕೆಂದು ಇಟ್ಟುಕೊಂಡಿದ್ದ ಅರ್ಧ ಡಬ್ಬಿ ವಿಕ್ಸ್ ಮೂಗಿಗೆ ಬಳಿದು ತಿರುವಿ ಮಲಗಿಕೊಂಡಿದ್ದ.

ಇಂತಿಪ್ಪ ಇವಳು ಆ ರಾತ್ರಿ ಯಥಾಪ್ರಕಾರ ಲಾಗ್ ಔಟ್ ಆಗಿ ಐಟಿ ಪಾರ್ಕಿನ ಇಳಿದಾರಿಯಲ್ಲಿ ಒಬ್ಬಳೇ ಬರುತ್ತಿದ್ದಳು. ಆವತ್ತು ಅಲ್ಲಿನ ಜಾಸ್ತಿ ಕಂಪನಿಗಳಿಗೆ ವಿಕೆಂಡ್ ಇದ್ದುದರಿಂದ ಜನಸಂಚಾರ ಖಾಲಿಯಿದ್ದು, ಐಟಿ ಪಾರ್ಕಿನ ಎರಡೂ ಕಡೆಯಲ್ಲಿದ್ದ ನ್ಯಾಶನಲ್ ಪಾರ್ಕಿನಿಂದ ಗಾಳಿ ರೊಯ್ಯನೇ ಬೀಸುತಿತ್ತು. ಇನ್ನೇನು ಮುಖ್ಯ ಕಮಾನು ಬಂದು ಅದನ್ನು ದಾಟಿ ಆಟೋ ಸ್ಟಾಂಡಿಗೆ ಹೋಗಬೇಕು ಅಂದುಕೊಳ್ಳುವುದಕ್ಕಿಂತ ಮೊದಲೇ ದುತ್ ಎಂದು ನೆಗೆದು ನಿಂತಿತ್ತು ಅದು. ಈಕೆಗೆ ಆ ಚಳಿಗೂ ಮೈ ಬೆವರಿ, ಗಂಟಲೊಣಗಿ ಡೆಸ್ಕಿನಲ್ಲಿ ಹೊಸ ವಾಟರ್ ಬಾಟಲ್ ಮರೆತದ್ದು ನೆನಪಾಗಿ… ಗಡಗಡನೇ ನಡುಗಲಾರಂಭಿಸಿದಳು.

ಹಲವು ದಿನಗಳಿಂದ ಈ ದಿಂಡೋಶಿಯ ಪಾರ್ಕಿನ ಹೊರವಲಯಗಳಲ್ಲಿನ ಬೀದಿನಾಯಿಗಳನ್ನು ತಿಂದು ಸೊಂಪಾಗಿ, ಅಲ್ಲಿನ ಬೀದಿಗಳ ಸ್ವಘೋಷಿತ ಸಂಜೆ ಕರ್ಫ್ಯೂಗೆ ಕಾರಣಕರ್ತನಾಗಿದ್ದ ಅದು ತನ್ನೆದುರು ದೈನೇಶಿ ಸ್ಥಿತಿಯಲ್ಲಿ ನಿಂತಿದ್ದ ಬಡುಕಲು ಶರೀರವನ್ನು ಗುರಾಯಿಸುತ್ತಿದ್ದಾಗ, ಆಗಿನಿಂದ ಉಸಿರು ಬಿಗಿಹಿಡಿದು ನಿಂತಿದ್ದ ಸುಶೀಲೆ ಒಮ್ಮೇಲೆ ಜೋರಾಗಿ ಉಸಿರು ಬಿಟ್ಟಳು. ಜೊತೆಗೆ ಸಣ್ಣದಾಗಿ ನಾದವೂ ಹೊರಹೊಮ್ಮಿ, ಕೆಲಹೊತ್ತಿನ ನಂತರ ಆ ಸುಗಂಧ ಇನ್ನೇನು ಎರಗುವಂತಿದ್ದ ಆ ಚಿರತೆಯ ನಾಸಿಕವನ್ನು ಹೊಕ್ಕಿತು. ಅದು ಒಮ್ಮೇಲೆ ಹೊರಚಾಚಿದ್ದ ಕೊರೆಹೊಲ್ಲಿನ ಜೊತೆ ನಾಲಿಗೆಯನ್ನು ಹೊರಹಾಕಿ ಆಕೆಯ ಮುಖದ ಎದುರಿಗೆ ಪ್ರದರ್ಶಿಸಿ ತಲೆ ಹೊರಳಿಸಿ ಓಡಿಹೋಯಿತು. ಈಕೆ ಬದುಕಿದೆಯಾ ಬಡಜೀವವೇ ಎಂದು ಒಂದೇ ಉಸಿರಿಗೆ ಕಮಾನಿನ ಹೊರ ಓಡಿದಳು.

ಆ ದಿನದ ನಂತ ಕೆಲದಿನಗಳವರೆಗೆ ದಿಂಡೋಶಿಯ ಅಳಿದುಳಿದ ನಾಯಿಗಳು ರಾತ್ರಿಯಿಂದ ಬೆಳಗಿನವರೆಗೆ ಸುಖವಾಗಿ ಕೂಗಿಕೊಂಡಿದ್ದವು. ಸ್ವಲ್ಪದಿನ ಕಳೆದ ಮೇಲೆ ಪೇಪರಿನ ಒಳಪೇಜಿನಲ್ಲಿ ಸುದ್ದಿಯೊಂದು ಪ್ರಕಟವಾಗಿತ್ತು. ಅರಣ್ಯ ಇಲಾಖೆಗೆ ಪಾರ್ಕಿನ ಬಳಿ ಚಿರತೆಯ ಹೆಣವೊಂದು ಸಿಕ್ಕಿದೆಯೆಂದು, ಅದರ ಸಾವಿಗೆ ಕಾರಣವಿನ್ನೂ ದೃಡವಾಗಿಲ್ಲವೆಂದು.

ಸೆಪ್ಟೆಂಬರ್ ೨೫, ೨೦೧೦

(ಕೆಂಡಸಂಪಿಗೆಗೆ ಕಳಿಸಿದ್ದೆ. ಅದರಲ್ಲಿ ಬರಲಿಲ್ಲ :( ಅದಕ್ಕೆ ನಂದೇ ಜಾಗದಲ್ಲಿ/ಬ್ಲಾಗಿನಲ್ಲಿ ಹಾಕಿಕೊಳ್ತಾ ಇದ್ದೇನೆ :)

ನನ್ನೆಸ್ರು

November 14, 2010

ನೀಲಾಂಜಲ;
ನನಗೆ ಇದೇ ಹೆಸರು ಪರ್ಮನೆಂಟಾಗಿ ಇಟ್ಕೊಬೇಕು ಅನ್ನಿಸ್ತಿದೆ. ನನ್ನದೇ ಹೆಸರು, ನಾನೇ ಇಟ್ಕೊಂಡಿದ್ದು. ಈ ಹೆಸರಿಗೆ ಯಾರ ಹಂಗೂ ಇಲ್ಲ, ಊರು ಇಲ್ಲ, ಜಾತಿನೂ ಇಲ್ಲ. ಬರೀ ಹೆಸ್ರು :)

ಸಿ. ಎಂ. ಸೌಪರ್ಣಿಕಾ- ಚಿನಿತೋಟ (ಊರಿನ) ಮಹಾಬಲೇಶ್ವರ(ನ ಸುಪುತ್ರಿ) ಸೌಪರ್ಣಿಕಾ;
ಸಣ್ಣವಳಿದ್ದಾಗ ಅಪ್ಪನತ್ತಿರ ಕೇಳಿದ್ದೆ. ನಾವ್ಯಾಕೆ ದೊಡ್ಡಪ್ಪನವರ ತರಹ “ರಾವ್” ಸೇರಿಸಿಲ್ಲವೆಂದು. ಆಗ ಅಪ್ಪ ವಿವರಿಸಿದ್ದರು. ನಾನು ದೊಡ್ಡಾದಾಗ ಹೆಸರಿನ ಜೊತೆ ಜಾತಿ ಸೇರಿಸಿದಾಗ ಆಗಬಹುದಾದ ಕಿರಿಕಿರಿ, ಹಿಂಸೆ ಹೇಳಿದರು. ಅವರಿಗೆ ಅವರ ಕಾಲದಲ್ಲಿ ಡಿಗ್ರಿ ಮುಗಿಸಿದ ಮೇಲೆ ಸರಕಾರಿ ಕೆಲಸ (ವೈಟ್ ಕಾಲರ್ ಜಾಬ್!) ಸಿಗೊದು ತಪ್ಪಿ ಹೋದ ಅನುಭವಗಳ ಮೇಲೆ. ಬಿಡಿ. ’ಬ್ರಾಹ್ಮಣ’ ಎಂದು ಹೇಳಿಕೊಳ್ಳುವುದು ತೊಂದರೆ ಉಂಟು ಮಾಡುತ್ತೆ ಅನ್ನೊದನ್ನು ಹೇಳಿದರೂ ಏಷ್ಟೊ ಜನ  ನಂಬಲ್ಲ. ಹಾಗಾಗಿ ಹೆಸರಿನ ಹಿಂದೆ ಸಿ ಮತ್ತು ಎಂ ಸೇರಿಸಿದ್ದರು. ಆಗೆಲ್ಲ ಶಾಲೆ-ಕಾಲೇಜುಗಳಲ್ಲಿ ಓಹೋ ಚೀಫ್ ಮಿನಿಸ್ಟರ್ ಎಂದು ಕಿಚಾಯಿಸಿದವರು ಇದ್ದಾರೆ.

ಸೌಪರ್ಣಿಕಾ ಹೊಳ್ಳ;
ಮೊನ್ನೆ ಮೊನ್ನೆ ಹೆಸರನ್ನು ಹೊಳ್ಳಕ್ಕೆ ಬದಲಾಯಿಸಿಕೊಂಡೆ. ಅದೂ ಮದುವೆಯಾಗಿ ಎರಡು ವರ್ಷದ ನಂತರ. ಆ ನ್ಯೂಮರಾಲಾಜಿಯವ ನನ್ನ ಓರಿಜಿನಲ್ ಹೆಸ್ರು ತುಂಬಾ ಕೆಟ್ಟದಿದೆಯೆಂದೆಲ್ಲಾ ಹೇಳಿ ಹೆದರಿಸಿಬಿಟ್ಟಿದ್ದಕ್ಕೆ. ಆದ್ರೆ ಬದಲಾಯಿಸಿದ ಮೇಲೆ ಆದದ್ದು ಜಾಸ್ತಿ ಕಿರಿಕಿರಿಯೆ. ಸೊಶಿಯಲ್ ನೆಟ್ವರ್ಕಿನಲ್ಲಿ ಓಹೋ ಮಂಗಳೂರಿನವರಾ, ಯಾವ ಊರು? ಕೋಟಾದವರಾ? ನಿಮ್ಮೂರು ನಂಗೆ ಗೊತ್ತುರಿ ಅಂತೆಲ್ಲಾ ಕೇಳಿ ಕೇಳಿ , ಅದಕ್ಕೆಲ್ಲಾ ಇಲ್ಲಾ ನಾನು ಶಿರಸಿಯವಳು ಅಂತ ಹೇಳಿ ಹೇಳಿ, ಅವರ ಹೌದಾ ಅನ್ನೊ ರಾಗ ಕೇಳಿ ಕೇಳಿ ಸಾಕಾಯ್ತು.

ಈಗ ಮತ್ತ್ಯಾಕೊ ಸಾಧ್ಯವಿದ್ರೆ ’ನೀಲಾಂಜಲ’ ಅನ್ನೊದನ್ನ ನನ್ನ ಆಫಿಶಿಯಲ್ ಹೆಸ್ರು ಮಾಡ್ಕೊಳ್ಳೊಣ ಅಂತ ಅನ್ನಿಸ್ತಿದೆ. ಯಾಕೊ “ನೇಮ್ ಸೇಕ್” ಸಿನಿಮಾ ನೆನಪಿಗೆ ಬರ್ತಿದೆ. ಅದೂ ಒಂದು ಹೆಸರಿನ ಕತೆ. ಒಂದು ಅಪ್ಪ ತನ್ನ ಮಗುವಿಗೆ ಯಾಕೆ ಆ ಹೆಸ್ರು ಇಟ್ಟ, ಆ ಮಗು ದೊಡ್ಡದಾಗ್ತಾ ತನ್ನ ಹೆಸರು ಯಾಕೆ ಬದಲಾಯಿಸಿಕೊಂಡ್ತು ಮತ್ತು ಯಾಕೆ ತನ್ನ ಹೆಸರಿಗೆ ವಾಪಾಸ್ಸಾಯಿತು ಅನ್ನೊ ಸೂತ್ರದ ಮೇಲೆ ನಿಂತ ಕತೆ. ಜೊತೆಗೆ ಬದಲಾಗೊ ಮೌಲ್ಯಗಳು ಮತ್ತು ಸಂಸ್ಕೃತಿ, ಹೊರ ದೇಶಗಳಲ್ಲಿ ನೆಲ ಊರಿರುವರ ಕಾಡುವ ಒಂಟಿತನ,… ಇನ್ನೂ ಬೇಕಾದಷ್ಟು ವಿಷಯಗಳೂ ಇವೆ. ಮೀರಾ ನಾಯರ್ ಸಿನೆಮಾ. ಸಿಕ್ಕಿದ್ರೆ ನೋಡಿ. ಇಂಟರೆಸ್ಟಿಂಗ್.

ಮತ್ತೆ ಸಿಗುವ.

ಕಾಗೆಯೊಂದು ಹಾರಿಬಂದು…..

April 28, 2010

ಮೊನ್ನೆ ಕಾಗೆ ತ್ರೀಕೋಣಾಕೃತಿಯ ತಂತಿಯೊಂದನ್ನು ಕಚ್ಚಿಕೊಂಡು ನಿಂತಿತ್ತು. ಅದನ್ನು ನೋಡಿ ನಂಗಾಶ್ಚರ್ಯ. ಅಯ್, ಕಾಗೇಯಾವಾಗಿಂದ ಇಂಜಿನೀಯರ್ ಆಯಿತು ಅಂತ. ಹಿಂದಿನ ದಿನ ಇನ್ನೊಂದು ತಂತಿ ಕಚ್ಚಿಕೂತಿತ್ತು. ಆ ತಂತಿಯ ಒಂದು ತುದಿ ಸುರುಳಿಯ ರೂಪದಲ್ಲಿತ್ತು. ಇವತ್ತು ಕಚ್ಚಿಹಿಡಿದ ತ್ರಿಕೋಣದ ಮೂರುಬದಿಯಲ್ಲೂ ಒಂದೊಂದು ಸುರುಳಿಯಿತ್ತು! ಹೋಗಲಿ ಗೂಡು ಎಲ್ಲಿ ಕಟ್ಟುತ್ತಿದೆ ಅಂತ ನೋಡೋಣ ಅಂತ ಸ್ವಲ್ಪ ಹೊತ್ತು ಕಾದೆ. ಆ ಕಾಗೆಯಮ್ಮ/ಪ್ಪ ಹಾರಿ ಹೋಗಿ ಎದುರಿಗಿನ ಎತ್ತರದ ಅಶೋಕಮರದ ಮೇಲೆ ಹೋಗಿ ಕುಂತಿತು. ಸ್ವಲ್ಪ ಆಕಡೆ ಈಕಡೆ ಕಣ್ಣಾಯಿಸಿ ಅಲ್ಲೇ ಎಲೆಗಳ ಮರೆಯಲ್ಲಿ ಒಂದಾಯಿತು. ಅದಕ್ಕೆ ಗೂಡು ಕಟ್ಟಲು ಆ ಮರವೇ ಬೇಕಿತ್ತಾ ಅಂತ ಬಯ್ದುಕೊಂಡೆ. ಏಕೆಂದರೆ ಪ್ರತಿ ಮಳೆಗಾಲದಲ್ಲಿ ಆ ಮರ ಗಾಳಿ-ಮಳೆಗೆ ಬಗ್ಗುತ್ತದೆ ಮತ್ತು ಅದರ ಮೇಲಿನ ಭಾಗವನ್ನು ಕಡಿದು ಹಾಕುತ್ತಾರೆ. ಹಿಂದಿನ ಸಲ ಹೀಗೆ ಗೂಡು ಕಟ್ಟಿಕೊಂಡ ಹಕ್ಕಿಗಳ ಗೂಡು ಮೊಟ್ಟೆ/ಮರಿಗಳ ಸಮೇತ ನೆಲಪಾಲಾಗಿತ್ತು. ಆದರೂ ಆ ಮರದ ಬುಡ(ಕಾಂಡ) ಉಳಿದ ಅಕ್ಕಪಕ್ಕದ ಮರಗಳಿಗಿಂತ ದಪ್ಪಗೆ ಬೆಳದಿದ್ದು ಕಂಡು ಸ್ವಲ್ಪ ಸಮಾಧಾನ ಮಾಡಿಕೊಂಡೆ.

ನಂಗೆ ಸಾಧ್ಯ ಆಗಿದ್ರೆ ಆ ಕಾಗೆಯ ಗೂಡು ನೋಡುತ್ತಿದ್ದೆ. ಆದು ಆ ತಂತಿಯನ್ನು ಹೇಗೆ ಉಪಯೋಗಿಸಿದೆ ಅಂತ. ಆದರೆ ನಂಗೆ ಮೇಲೆ ಹಾರಕೆ ಬರೊಲ್ವೆ :( ಹೋಗಲಿ ಟೆಲಿಸ್ಕೋಪ್ ಕ್ಯಾಮೆರಾ ಇದ್ದರಾದ್ರೂ ಒಂಚೂರಾದ್ರೂ ಕಾಣಿಸ್ತಿತ್ತೇನೋ, ಆದ್ರೆ ಅದೂ ಇಲ್ಲ. ಹೋಗಲಿ ಬಿಡಿ.

ಆದ್ರೆ ಈ ಕಾಗೆ ಗಂಡ-ಹೆಂಡತಿಯ ಕಾರಣ ನನ್ನ ನೀರುದಾನಿ ಕುಲಗೆಟ್ಟು ಹೋಗಿದೆ. ನೀರಲ್ಲಿ ನಾರು, ಕಡ್ಡಿ, ಅನ್ನ, ತಿಂಡಿ ತಂದು ಹಾಕಿ-ಹಾಕಿ ಬೇರೆ ಹಕ್ಕಿಗಳಿಗೆ ನೀರು ಕುಡಿಯಲು ಸಾಧ್ಯವಾಗದಂತೆ ಮಾಡಿವೆ. ಜೊತೆಗೆ ದಿನಾ ಒಂದು ಮೊಟ್ಟೆ ತಂದು ನಮ್ಮ ಮನೆಯೆದುರಿಗಿನ ಪಟ್ಟಿಯ ಮೇಲೆ ಕೂತು ತಿನ್ನುತ್ತವೆ. ಪಾಪ! ಅದು ಗುಬ್ಬಿದೊ, ಪಾರಿವಾಳದ್ದೊ ಇನ್ಯಾವ ಹಕ್ಕಿದೋ. ಮೊನ್ನೆ ನೀರುದಾನಿಯಲ್ಲಿ ಹಕ್ಕಿ ಮರಿಯದೊಂದರ ’ಹೆಣ’ ತೇಲುತ್ತಿತ್ತು. ಅದಕ್ಕೇ, ಈ ಮಳೆಗಾಲದಲ್ಲಿ ಮರಕಡಿದು ಬಿದ್ದಾಗ ಮರಿಗಳನ್ನು ಕಳೆದುಕೊಂಡ ಮೇಲೆ ಇವಕ್ಕೆ ತಕ್ಕ ಶಿಕ್ಷೆಯಾಗುತ್ತೆ ಅಂತ ನಾನು ಸುಮ್ಮನೆ ಅಂದುಕೊಳ್ಳುತ್ತೇನೆ.

ಯಾಕೊ ಈ ಕಾಗೆಗಳನ್ನು ಕಂಡಾಗ ಗುಬ್ಬಿ ಕಂಡಷ್ಟು ಖುಶಿಯಾಗುವುದಿಲ್ಲ. ಅವು ಕಪ್ಪಗಿದೆ ಅನ್ನುವುದಕ್ಕೆ ಅಲ್ಲ ಎಂದು ಅಂದುಕೊಳ್ಳುತ್ತೇನೆ. ಏಕೆಂದರೆ ಪಾರಿವಾಳಗಳು ಸ್ವಲ್ಪ ಕಪ್ಪನ್ನೇ ಹೋಲುವಂತಿರುತ್ತವೆ. ಇವು ಮಾಂಸಹಾರಿಗಳೆಂದಾ ಅಥವಾ ಮಾಟ, ಪ್ರೇತವನ್ನು ನೆನಪಿಸುತ್ತವೆಯೆಂದಾ (’ಫೂಂಕ್’ಅಲ್ಲಿ ತೋರಿಸಿದಂತೆ), ನಂಗೂ ಸರಿ ಗೊತ್ತಿಲ್ಲ. ಆದರೆ ಕಿಚನ್ ಕಿಟಕಿಯಲ್ಲಿ ಅನ್ನ ಖಾಲಿಯಾದಾಗ ಬಂದು ಕಾಂವ್ ಕಾಂವ್ ಅಂದರೆ ಪಾಪ ಕಾಣುತ್ತೆ. ಉಳಿದ ಇಡ್ಲಿಯೋ, ರೊಟ್ಟಿಯೊ ತಟ್ಟೆಗೆ ಹಾಕುತ್ತೇನೆ.

ಹಾಂಗೆ ನಂಗೆ ಒಂದು ಸಮಸ್ಯೆ ಬಂದಿದೆ. ಈ ಕಾಗೆಗಳಲ್ಲಿ ಯಾವುದು ಗಂಡು, ಮತ್ತ್ಯಾವುದು ಹೆಣ್ಣು ಎಂದು. ಎರಡು ಸುಮಾರು ಒಂದೇ ತರಹ ಕಾಣುತ್ತಿತ್ತು. ಗುಬ್ಬಿಗಳಲ್ಲಾದರೆ ಗಂಡು ಗುಬ್ಬಿಯ ತಲೆಮೇಲೆ ಕಪ್ಪಗಿನ ಗುರುತಿರುತ್ತದೆ. ಪಾರಿವಾಳದಲ್ಲೂ ಸಹ ಗುಬ್ಬಿಗಳ ತರಹ ಗಂಡು ಸ್ವಲ್ಪ ದಪ್ಪವಾಗಿರುತ್ತದೆ. ಹೆಣ್ಣು ಸ್ವಲ್ಪ ನಾಜೂಕು ಮತ್ತು ಗಂಡಿಗಿಂತ ಬಹು ಬೇಗ ಹೆದರಿ ಓಡಿ ಹೋಗುತ್ತದೆ. ಈಗ ಇದನ್ನು ಬರೆದಾದ ಮೇಲೆ ನೆಟನಲ್ಲಿ ಗೂಗ್ಲಿಸಬೇಕು.

ಮತ್ತೆ ಸಿಗ್ತೇನೆ.

ಸ್ಥಳಾಂತರ

April 16, 2010

ನಾಳೆಯಿಂದ ನಾನಿಲ್ಲಿ ಇರುವುದಿಲ್ಲ ಎಂದು ಇವಕ್ಕೆ ಹೇಗೆ ಹೇಳುವುದು? ಪ್ರತಿದಿನ ಮಧ್ಯಾಹ್ನದ ಊಟದ ಜೊತೆಗೆ, ಟೀ ಜೊತೆಗೆ ಕಂಪನಿ ಕೊಡುತ್ತಿದ್ದ ಇವುಗಳನ್ನು ಇಲ್ಲಿಯೇ ಬಿಟ್ಟು ದೂರ ಹೋಗುತ್ತಿದ್ದೇನೆ. ಇನ್ಮುಂದೆ ಬೇಕಾದಾಗ ಬಂದು ನೀರಲ್ಲಿ ಆಡಲು ಇವಕ್ಕೆ ಇಲ್ಲಿ ನೀರುದಾನಿ ಇರುವುದಿಲ್ಲ. ಬೇಕಾದಾಗ ಬಂದು ತಿನ್ನಲು ಕಾಳುಗಳೂ ಇರುವುದಿಲ್ಲ. ಕಾಳುಗಳು ಖಾಲಿಯಾದಾಗ ಕಂಬಿಯ ಮೇಲೆ ಕೂತು ಪಿಳಿಪಿಳಿ ಕಣ್ಣು ಬಿಡುತ್ತಿದ್ದರೆ, ಅತ್ತಿಂದಿತ್ತ ಕಿಟಕಿಯ ಬಳಿ ಸುಳಿಯುತ್ತಿದ್ದರೆ ಗಮನಿಸುವರ್‍ಯಾರಿಲ್ಲ. ಮುಂದೆ ನಮ್ಮ ಜಾಗದಲ್ಲಿ ಬರುವವರು ಕೊಳಕು ಪಾರಿವಾಳಗಳು ಎಂದು ಇವನ್ನು ಓಡಿಸಿ ಕಿಟಕಿಗೆ ಜಾಲಿ ಹಾಕಿಸಿದರೆ ಬಿಸಿಲಲ್ಲಿ ತಂಪಾರಿಸಿಕೊಳ್ಳಲು ಛಾವಣಿಯೊಂದಿರುವುದಿಲ್ಲ. ಕಾಗೆಗೆ, ಗುಬ್ಬಿಗೆ, ಮೈನಾಗೆ, ಬುಲ್ ಬುಲ್ಲಿಗೆ ಒಂದು ತುತ್ತು ಅನ್ನವೂ ದೊರಕುವುದಿಲ್ಲ. ಬಾಯಾರಿ ಕೂಗಿದರೆ ಮುಚ್ಚಿದ ಕಿಟಕಿ ಬಾಗಿಲು ತೆರೆಯುವುದಿಲ್ಲ.

ಹಾಗಂತ ಕೋಳಿ ಕೂಗಿದರೇನೆ ಬೆಳಗಾಗಬೇಕೆಂದಿಲ್ಲವಲ್ಲ. ಇನ್ನೊಂದು ಕೊಡುವ ಕೈ ಇವಕ್ಕಾಗಿ ಕಾದಿರುತ್ತದೆ. ನಾನಿಲ್ಲದಿದ್ದರೆ ಬೇರೊಬ್ಬ. ಇರುವಷ್ಟು ದಿನ ನನ್ನ ಕರ್ತವ್ಯ. ಬೇರೆಲ್ಲೊ ಇನ್ನೊಂದು ಜೀವಿಗಳ ಗುಂಪಿನ ಜೊತೆ ಸ್ನೇಹದ ವಿನಿಮಯ ನಡೆಯಲಿದೆ. ಅಷ್ಟೇ.

ಹೀಗೊಂದು ಪ್ರವರ

March 30, 2010

ಬೆಳ್ಳಂಬೆಳಗ್ಗೆ ಎದ್ದು ತಿಂಡಿಯೇನು ಮಾಡುವುದೆಂದು ಯೋಚಿಸುತ್ತಿರುವಾಗ ಬೆಲ್ ಆಯಿತು. ತೆರೆದರೆ ಕೆಳಗಡೆ ಮನೆ ಪುಟ್ಟು ಗೆಳೆಯರೊಡನೆ ಇಣಚಿ ನೋಡಲು ಬಂದಿದ್ದ. ಇವನಿಗೆ ಬೇರೆ ಕೆಲಸವಿಲ್ಲ ಎಂದು ಬೈಯ್ದುಕೊಳ್ಳುತ್ತಾ ಇಣಚಿಯನ್ನು ಎತ್ತಿ ತೋರಿಸುತ್ತಿದ್ದೆ. ಅಷ್ಟರಲ್ಲಿ ಬಾಗಿಲ ಎದುರಿಗೆ ’ದುತ್’ ಎಂದು ಪ್ರತ್ಯಕ್ಷನಾಗಿದ್ದ ಅವನು. ಅಯ್ ಇವನೇನು ಇಲ್ಲಿ ಎಂದು ಅಚ್ಚರಿ ಪಡುತ್ತಿರುವಾಗಲೇ ಸೀದಾ ಮನೆಯೊಳಗೆ ನುಗ್ಗಿ ಬಿಡಬೇಕೆ. ನೀವು ಇಣಚಿ ಸಾಕ್ಕೊಂಡಿದಿರಂತಲ್ಲ, ನೋಡೊಣ ಅಂತ ಬಂದೆ ಎಂದು ಇಣಚಿ ನೋಡದೆ ಮನೆಯಲ್ಲಿ ಎಲ್ಲಿ ಏನೇನಿದೆ ಎಂದು ಇಣುಕಿದ. ಆ ಮಕ್ಕಳೆದುರು ಅವನಿಗೆ ಬಯ್ಯಲು ತೋಚುತ್ತಿರಲಿಲ್ಲ. ಹೇಗೊ ಮಾಡಿ ಸಾಗ ಹಾಕಿದೆ. ಆದರೆ ಹೋಗೊ ಮೊದಲು ಇನ್ನೊಬ್ರಿದ್ದ್ರಲ್ಲಾ, ನಿನ್ನೆ ಸಂಜೆ ಆಕಿ ಮನೆ ಖಾಲಿ ಮಾಡಿಕೊಂಡು ಹೋದ್ರಲಾ, ನಾ ಅಲ್ಲೆ ಕೆಳಗೆ ಇದ್ದೆ. ಇನ್ನೂ ನೀ ಒಬ್ಬಾಕಿನಾ ಎಂದು ಕೆಣಕಿ ಹೋಗಿದ್ದ. ಥತ್! ನಿನ್ನೆ ತನಕ ಸಾಂಬಾವೀತನಾಗಿದ್ದ ಎದುರುಗಡೆ ಮನೆ ಗಾರೆಕೆಲಸದ ಅಜ್ಜನಿಗೆ ಇದ್ದಕಿದ್ದ ಹಾಗೇ ಏನ್ ಆಯಿತಪಾ ಅಂದುಕೊಂಡೆ. ಒಬ್ಬಳೇ ಹೆಣ್ಣು ಅಂದ ಕೂಡಲೇ ಎಲ್ಲ ಗಂಡಸರಿಗೂ ಅದೇನು ಭಂಡ ಧೈರ್ಯ ಬಂದು ಬಿಡುತ್ತದೆ! ಕರ್ಮ.

ಹೌದು, ಹಿಂದಿನ ದಿನ ಆಕೆ ಮನೆ ಬಿಟ್ಟು ಹೋಗಿದ್ದಳು. ಬಾಗಿಲಿಗೆ ರಂಗೋಲಿ ಇಡುವ ವಿಷಯದಿಂದ ಹುಟ್ಟಿದ ಜಗಳ ಇಣಚಿಯವರೆಗೆ ಬೆಳೆದಿತ್ತು. ಸಿಂಪಲ್ಲಾಗಿ ಹೇಳುವುದಿದ್ದರೆ ಇಗೋ ಕ್ಲಾಶ್. ಇವತ್ತಿನಿಂದ ನಾನು ಒಬ್ಬಳೇ. ಪಕ್ಕದಲ್ಲೇ ದೊಡ್ಡಮ್ಮನ ಮಕ್ಕಳ ಸಂಸಾರ ಇರುವದರಿಂದ ನನ್ನ ಮನೆಯಲ್ಲಿ ಯಾರೂ ಕಿರಿಕಿರಿ ಮಾಡಿರಲಿಲ್ಲ. ಮನೆ ಓನರ್ ವಿಷಯ ಗೊತ್ತಾದ ಮೇಲೆ ಇಲ್ಲೇನೂ ಅಂತಾ ಹೆದರಿಕೆಯೇನಿಲ್ಲ, ಸ್ವಲ್ಪ ಹುಶಾರಿ ಎಂದರಷ್ಟೆ. ಜೊತೆಗೆ ಮನೆ ಭಾಡಿಗೆ ಏರಿಸಬೇಕಿತ್ತು ಎಂದು ಸಣ್ಣದಾಗಿ ಹೆದರಿಸಿದರು. ಅಮ್ಮನಿಗೆ ಸ್ವಲ್ಪ ಚಿಂತೆ ಇತ್ತು. ಅದೂ ಅಮ್ಮನಾದವರಿಗೆ ಬೆಳೆದ ಹುಡುಗಿಯರತ್ತ ಇರಬೇಕಾದ ಸಹಜ ಕಾಳಜಿ ಎನ್ನಿ.

ಈ ಮನೆಯನ್ನು ಹುಡುಕಬೇಕಾದರೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆಗ ವಿದ್ಯಾರ್ಥಿನಿಯರ ಹಾಸ್ಟೇಲಿನಲ್ಲಿ ನನ್ನ ಅವಧಿ ಮುಗಿಯುತ್ತಾ ಬಂದಿತ್ತು. ಕೆಲಸ ಬೇರೆ ಸಿಗ್ತಾ ಇರಲಿಲ್ಲ. ಬೆಂಗಳೂರಿನ ಸುಮಾರು ಪಿಜಿಗಳನ್ನು ಅಲೆದು ಮುಗಿದಿತ್ತು. ಆ ಕೊಂಪೆಗಳಲ್ಲಿ ಸತ್ತರೂ ಸೇರುವುದಿಲ್ಲ ಎಂದು ನಿರ್ಧರಿಸಿಯಾಗಿತ್ತು. ಆಗ ಉಳಿದಿದ್ದು ಒಂದೇ ಮಾರ್ಗ. ಸ್ವಂತ ಮನೆ ಬಾಡಿಗೆಗೆ ಹಿಡಿಯುವುದು. ಅದೂ ಅಷ್ಟು ಸುಲಭವಾಗಿರಲಿಲ್ಲ. ಮೊದಲು ಅದಕ್ಕೊಂದು ಪಾರ್ಟನರ್ ಹುಡುಕಿಕೊಳ್ಳಬೇಕಿತ್ತು. ಅಂತೂ ಹಾಸ್ಟೇಲಿನ ಸ್ನೇಹಿತೆಯೊಬ್ಬಳು ನನಗೆ ಸಾಥ್ ಕೊಟ್ಟಳು. ಇಬ್ಬರೂ ನಮ್ಮ ಹಾಸ್ಟೇಲಿಗೆ ತರಕಾರಿ ಸಪ್ಲೈ ಮಾಡುತ್ತಿದ್ದವನು ಮನೆ ಬಾಡಿಗೆ ಏಜೆಂಟ್ ಎಂದು ಗೊತ್ತಾಗಿ ಅವನ ಬಳಿ ಹೋದೆವು. ಅವನು ಸುಮಾರು ಮನೆ ತೋರಿಸಿದ. ಫುಲ್ ಡಬ್ಬಾ ಮನೆಗಳು. ಓಡಾಡೊ ದಾರಿ ಸುರಂಗದಂತೆ ಕತ್ತಲಿರುವುದು, ಇಡೀ ಬಿಲ್ಡಿಂಗ್ ಸುತ್ತು ಹಾಕಿ ಮೂಲೆಯಲ್ಲಿದ್ದ ಔಟ್‌ಹೌಸುಗಳು, ಟೆರೆಸ್ಸಿನ ಮೂಲೆಯಲ್ಲಿರುವ ಒಬ್ಬಂಟಿ ಸಿಂಗಲ್ ರೂಂಗಳು, ನೆಲದ ಗಾರೆ ಕಿತ್ತು ಹೋದ ಮನೆಗಳು, ಸ್ನಾನ-ಶೌಚಾಲಯ ದೂರವಿದ್ದ ಅಥವಾ ಶೇರಿಂಗ್ ಸೌಲಭ್ಯದ ಮನೆಗಳು…. ನಾವು ಹುಡುಗಿಯರಾದ್ದರಿಂದ ನಮಗೆ ನಮ್ಮ ಸೇಫ್ಟಿಯ ಸಲುವಾಗಿ ಓನರ್, ಅಕ್ಕ-ಪಕ್ಕದವರು, ಏರಿಯಾ ಅಂತೆಲ್ಲಾ ಗಣನೆಗೆ ತೆಗೆದು ಕೊಳ್ಳಬೇಕಿತ್ತು. ಕೊನೆಗೆ ಒಂದು ದಿನ ಸಾಕಾಗಿ ನನ್ನ ಸ್ನೇಹಿತೆ ಇನ್ನು ತನ್ನ ಕೈಯಲಾಗುವುದಿಲ್ಲ ಎಂದು ’ಸ್ಸಾರಿ’ ಹೇಳಿ ಹೊರಟು ಹೋದಳು.

ಮತ್ತೆ ನಾನು ಒಬ್ಬಂಟಿ. ಪ್ರೊಸೆಸ್ಸನ್ನು ಮತ್ತೆ ಶುರುವಿನಿಂದ ಪ್ರಾರಂಭಿಸಬೇಕಿತ್ತು. ನಮ್ಮ ಹಾಸ್ಟೆಲ್ ಬಿಟ್ಟ ಅನೇಕರು ಸುತ್ತಮುತ್ತ ಗುಂಪಾಗಿ ಮನೆ ಮಾಡಿಕೊಂಡಿದ್ದರೂ ನನಗೆ ಅಲ್ಲಿ ಜಾಗ ಇರಲಿಲ್ಲ. ಹೌಸ್‌ಫುಲ್! ಅಯ್ಯೋ ರಾಮ, ಆ ಕೊಂಪೆ ಪಿಜಿಗಳಿಗೆ ಹೋಗಬೇಕಾ ಎಂದು ಅನ್ನಿಸಿ ಅಳುವುದೊಂದೆ ಬಾಕಿ. ಆ ಹೊತ್ತಿನಲ್ಲಿ ಬೆಂಗಳೂರಿನ ಮೂಲೆ ಮೂಲೆ ಸುತ್ತಿ ಅನೇಕ ಸಸ್ಯಾಹಾರಿ ಪಿಜಿಗಳನ್ನು ನೋಡಿದ್ದೇನೆ. ಆ ಹರಡಿಕೊಂಡಿರುವ ರೂಂಗಳು, ಕಂಡ ಕಂಡಲ್ಲಿ ಹಾರ್ಡಬೊರ್ಡ್ ನೆಟ್ಟು ಮಾಡಿದ ಚಿಕ್ಕ ಚಿಕ್ಕ ಉಸಿರುಗಟ್ಟಿಸುವ ರೂಮುಗಳು… ಈಗಲೂ ನೆನಪಿದೆ. ಓನರುಗಳು ದುಡ್ಡಿನ ಹಿಂದೆ ಬಿದ್ದು ಏಷ್ಟಾಗುತ್ತೊ ಅಷ್ಟು ಜನರನ್ನು ಒಳಗೆ ದಬ್ಬಿದ್ದರು. ಟಾಯ್ಲೆಟ್, ಬಾತ್ ರೂಂಗಳು ಆ ದೇವರಿಗೆ ಪ್ರೀತಿ. ಹಾಗಂತ ಎಲ್ಲ ಪಿಜಿಗಳೂ, ಹಾಸ್ಟೆಲ್‌ಗಳೂ ಕೆಟ್ಟವಿರಲಿಲ್ಲ. ವಿಜಯನಗರದ ಬಂಟ್ಸ್ ಇರಬಹುದು, ಸಂಪಿಗೆ ರೋಡಿನ ಮತ್ತು ಗಿರಿನಗರದ ಆ ಅಮ್ಮಂದಿರ ಪಿಜಿಗಳು ಇರಬಹುದು, ಬಿಟಿಎಂ ಲೇಔಟಿನ ಮಂಗಳೂರಿನವರ ಆ ಪಿಜಿಯಿರಬಹುದು. ಆದರೆ ಅವೆಲ್ಲ ಪೋಶ್ ಕೆಟಗೆರಿಯವು. ಅವುಗಳ ತಿಂಗಳ ಭಾಡಿಗೆ ಆಗತಾನೇ ಸಿಕ್ಕ ಚಿಕ್ಕ ಕೆಲಸದ ಸಂಬಳದಷ್ಟೇ ಇತ್ತು.

ಹಾಸ್ಟೇಲಿನ ಅಂತಿಮ ಅವಧಿಯ ದಿನ ಹತ್ತಿರ ಬರುತ್ತಿರುವಾಗ ನನ್ನ ಪುಣ್ಯಕ್ಕೆ ಸ್ಕೂಲಿನ ಸ್ನೇಹಿತೆಯ ಜೊತೆಗೆ ಬಾಡಿಗೆಮನೆ ಹಿಡಿಯುವ ಅವಕಾಶ ಲಭಿಸಿತು. ಆಕೆ ನಾನ್ ವೆಜ್ ಮತ್ತು ಬೇರೆ ಜಾತಿ ಎಂದು ಮನೆಯಲ್ಲಿ ಚಿಕ್ಕ ಅಸಮಾಧಾನವಿದ್ದರೂ ಆವತ್ತು ಬೇರೆ ದಾರಿ ಇರಲಿಲ್ಲ. ಆ ಓನರಿನ ಇನ್ನೊಂದು ಮನೆಯಲ್ಲಿ ಬಾಡಿಗೆಗೆ ಇದ್ದ ಇನ್ನೊಬ್ಬ ಸ್ಕೂಲ್ ಸ್ನೇಹಿತೆಯಿಂದ ಆ ಅವಕಾಶ ಪ್ರಾಪ್ತವಾಗಿತ್ತು. ಮಾತಾಡಲು ಹೋದಾಗ ಓನರ್ ಆಂಟಿ ಅರಿಶಿನ-ಕುಂಕುಮ, ಮಲ್ಲಿಗೆ ಹೂವನ್ನೆಲ್ಲಾ ಕೊಟ್ಟು ಬಾಯ್ತುಂಬಾ ಮಾತಾಡಿಸಿ ಏನೂ ಟೆನ್ಶನ್ ಮಾಡಿಕೊ ಬೇಡಮ್ಮ, ಈ ಮನೆ ನಿಮಗೇನೆ ಅಂತ ಪಕ್ಕಾ ಮಾಡಿಕೊ ಎಂದು ಹೇಳಿ ಕಳಿಸಿದರು. ನನಗೆ ಆ ಮಾರನೇ ದಿನವೇ ದೊಡ್ಡಮ್ಮನ ಮಗನ ಮದುವೆಗೆ ಊರಿಗೆ ಹೋಗಬೇಕಾದ್ದರಿಂದ ಮುಂದಿನ ವಾರ ಬಂದು ಹಾಲು ಉಕ್ಕಿಸುತ್ತೇವೆ ಎಂದು ಹೇಳಿ ಬಂದಿದ್ದೆ. ಖುಷಿಯಿಂದ ಹಾಸ್ಟೆಲ್ಲಿನಲ್ಲಿನ ಎಲ್ಲ ಸಾಮಾನುಗಳನ್ನು ಪ್ಯಾಕ್ ಮಾಡಿ ಹೊರಗಡೆ ಕೋಣೆಯಲ್ಲಿ ಇಟ್ಟು ಎಲ್ಲರಿಗೂ ಬೈ ಹೇಳಿ ಊರಿಗೆ ಹೊರಟಿದ್ದೆ.

ಆದರೆ ಆ ಖುಷಿ ಜಾಸ್ತಿ ದಿನ ಇರಲಿಲ್ಲ. ಮದುವೆ ಅಟೆಂಡ್ ಮಾಡಲು ಊರಿಗೆ ಹೋದ ನನಗೆ ಫೋನ್ ಬಂತು. ಆ ಓನರ್ ಅಂಕಲ್ ಹತ್ತಿರ ಮನೆ ರೀಪೇಟಿಂಗ್ ಬಗ್ಗೆ ನಾ(ಯಕಃಶ್ಚಿತ ಹೆಣ್ಣಾಗಿ) ಮಾತಾಡಿದ್ದು ಸ್ವಲ್ಪ ಓವರ್ ಆಗಿ ಅವರು ಅದೇ ನೆವ ಹೇಳಿ ಮನೆಯನ್ನು ಬೇರೆಯವರಿಗೆ ಕೊಟ್ಟಿದ್ದರು. ನನ್ನ ಸ್ನೇಹಿತೆಗೆ ಚೆನ್ನಾಗಿ ಬೈದು ಆಕೆ ನನ್ನ ಮುಖ ನೋಡದ ಹಾಗೆ ಮಾಡಿದ್ದರು. ಬೆಂಗಳೂರಿಗೆ ವಾಪಾಸ್ಸಾದ ಮೇಲೆ ಉಳಿಯಲು ನನಗೆ ಜಾಗ ಇರಲಿಲ್ಲ. ಪುಣ್ಯಕ್ಕೆ ನನ್ನ ಮನೆಯಲ್ಲಿ ಗಟ್ಟಿ ಇದ್ದರು, ಬೆಂಗಳೂರಿನಲ್ಲಿ ಕೆಲವು ತಿಂಗಳು ಉಳಿಯಲು ಅವಕಾಶ ಮಾಡಿಕೊಡಬಲ್ಲ ಸಂಬಂಧಿಕರು ಇದ್ದರು. ಆ ಪ್ರಶ್ನೆ ಬಿಡಿ. ನನಗೆ ಆ ಹೊತ್ತಲ್ಲಿ ನಗು ನಗುತ್ತಾ ಮಾತಾಡಿಸಿದ್ದ ಆ ಆಂಟಿಯ ಮುಖ ಕಣ್ಮುಂದೆ ಹಾದು ಹೋಯಿತು.

ಅಮ್ಮ ನಮ್ಮ ಮಾವನಿಗೆ ಊರಿನಿಂದಲೇ ಫೋನ್ ಮಾಡಿ ಪರಿಸ್ಥಿತಿ ವಿವರಿಸಿ, ಅವರ ವಶೀಲಿಯಿಂದ ಹಾಸ್ಟೇಲಿನಲ್ಲಿ ಒಂದು ತಿಂಗಳ ಹೆಚ್ಚುವರಿ ಗಡವು ತೆಗೆದುಕೊಂಡರು. ಈಗ ಮದುವೆಯಾಗುತ್ತಿದ್ದ ಅಣ್ಣನಿಗೆ ಅವನು ಹೊಸದಾಗಿ ಭಾಡಿಗೆ ಹಿಡಿದಿದ್ದ ಮನೆಯ ಬಗ್ಗೆ, ನನ್ನ ಇನ್ನೊಬ್ಬ ಹಾಸ್ಟೇಲ್ ಮೇಟಿನಿಂದ ವಿಷಯ ತಿಳಿದು ಆತನಿಗೆ ನಾನೇ ಹೇಳಿದ್ದೆ. ಆ ಮನೆಯೂ ಚೆನ್ನಾಗಿದ್ದರಿಂದ ಆತ ನೋಡಿದ ತಕ್ಷಣ ಒಪ್ಪಿಕೊಂಡಿದ್ದ. ಜೊತೆಗೆ ಆ ಮನೆಯ ಓನರ್ ನಮ್ಮ ಊರಿನವರೇ ಆಗಿದ್ದರು. ಹಾಗಾಗಿ ಆ ಮನೆಯ ಓನರ್ ಸಹ ಮದುವೆಗೆ ಬಂದಿದ್ದರು. ಮದುವೆಯ ದಿನ ಅಣ್ಣನ ಪಕ್ಕದ ಮನೆ ಖಾಲಿ ಇದ್ದದ್ದು ಅವರಿಂದ ತಿಳಿದು ಬಂದು ಮದುವೆ ಮಂಟಪದ ಪಕ್ಕವೇ ಅಪ್ಪ-ಅಮ್ಮ ಸೇರಿ ನನಗೆ ಮನೆ ಪಕ್ಕಾ ಮಾಡಿದರು. ಪಾರ್ಟನರ್ ಹುಡುಕಿ ಕೊಳ್ಳುವ ಒಂದು ಕೆಲಸವನ್ನು ನನಗೆ ಬಿಟ್ಟರು. ಏಕೆಂದರೆ ಒಬ್ಬಳೇ ಹುಡುಗಿ ಮನೆ ಮಾಡಿಕೊಂಡಿರುವುದು ಅವರಿಗೆ ಒಪ್ಪಿಗೆ ಇರಲಿಲ್ಲ, ಓನರ್ರು ಸಹ ಮನೆ ಕೊಡುವುದಕ್ಕೆ ಒಪ್ಪುವುದಿಲ್ಲ ಬಿಡಿ.

ಒಟ್ಟಿನಲ್ಲಿ ಎಲ್ಲ ಸುಖಾಂತವಾಗಿ ನನ್ನ ಹಾಸ್ಟೇಲಿನಲ್ಲಿ ಸೀನಿಯರ್ ಆಗಿದ್ದ ಆಕೆಯನ್ನು ಒಪ್ಪಿಸಿ ಈ ಮನೆಯನ್ನು ಮಾಡಿದ್ದಾಗಿತ್ತು. ಮಧ್ಯದಲ್ಲಿ ಮೊದಲೊಮ್ಮೆ ನನಗೆ ಕೈ ಕೊಟ್ಟ ಹಾಸ್ಟೆಲ್ ಸ್ನೇಹಿತೆಯು ಬಂದು ಒಂದು ವರ್ಷ ನಮ್ಮ ಜೊತೆ ಉಳಿದು ಹೋಗಿದ್ದಳು. ಮೂರು ವರ್ಷದ ನನ್ನ ಆಕೆಯ ಸ್ನೇಹಕ್ಕೆ ನಿನ್ನೆ ಕೊನೆಯ ದಿನವಾಗಿತ್ತು. ಮನದಲ್ಲಿ ಕಹಿ ತುಂಬಿಕೊಂಡು ಆಕೆ ಮತ್ತು ನಾನು ಬೇರೆಯಾಗಿದ್ದೆವು. ಇವತ್ತಿನಿಂದ ನಾನು ಒಬ್ಬಳೇ. ನನ್ನದೇ ದುಡ್ಡು, ನನ್ನದೇ ಮನೆ, ನನ್ನದೇ ಅನ್ನ.

ನನ್ನ ಮನೆ ಮೇಟ್ ತಾನು ಬೇರೆ ಹೋಗುತ್ತೇನೆ ಎಂದಾಗ ನಾನು ಕೆಲಸದಲ್ಲಿರಲಿಲ್ಲ. ಇದ್ದ ಕೆಲಸ ಬಿಟ್ಟು ಮನೆಯಲ್ಲಿ ಪ್ರಾಕ್ಟಿಸ್ ಮಾಡುತ್ತಿದ್ದೆ. ಆ ಹೊತ್ತಲ್ಲಿ ಸಿಕ್ಕ ಇಣಚಿ ಮರಿಯನ್ನು ಸಾಕಿಕೊಂಡಿದ್ದೆ. ಆಕೆ ಇಣಚಿಯನ್ನು ಮನೆಯಿಂದ ಹೊರ ಹಾಕಿದರೆ ತಾನು ಇರುವುದಾಗಿ ಹೇಳಿದರೆ ನಾನು ಕೇಳಬೇಕಲ್ಲ. ಇಣಚಿಯನ್ನು ಸಾಯಿಸುವುದು ನನ್ನಿಂದಾಗದ ಮಾತಾಗಿತ್ತು. ಅದು ಬೆಳೆದು ತನ್ನಷ್ಟಕ್ಕೆ ನಿಸರ್ಗಕ್ಕೆ ಮರಳಿ ಹೋಗುವ ತನಕ ನಾ ಅದನ್ನು ನೋಡಿಕೊಳ್ಳುತ್ತೇನೆ ಎಂದು ಆಣೆ ಮಾಡಿಕೊಂಡಿದ್ದೆ. ಅದೆಲ್ಲಿಂದ ಧೈರ್ಯ ಉಕ್ಕಿತ್ತೊ. ಆಯಿತು, ನಾನು ಒಬ್ಬಳೇ ಇರುತ್ತೇನೆ ಎಂದು ಹಟ ತೊಟ್ಟಿದ್ದೆ. ಆ ಹೊತ್ತಲ್ಲಿ ಆಕೆ ಶೇರ್ ಮಾಡಿದ್ದ ಅಡ್ವಾನ್ಸ್ ವಾಪಸ್ಸು ಕೊಡಲು ಹಣವಿರಲಿಲ್ಲ. ಆಕಾರಣ ಮೂರು ತಿಂಗಳ ಗಡವು ತೆಗೆದುಕೊಂಡೆ. ಇದ್ದ ಹಣ ಆಕೆಗೆ ಕೊಟ್ಟರೆ ಹೊಸ ಕೆಲಸ ಸಿಗುವವರೆಗೆ ಹಣಕ್ಕೇನು ಮಾಡುವುದು ಎಂಬ ಚಿಂತೆಯಿತ್ತು. ಮನೆಯಿಂದ ದುಡ್ಡು ತೆಗೆದುಕೊಳ್ಳುವುದು ಆಗದ ಮಾತು. (ಯಾರಿಗೂ ಕಡೆಘಳಿಗೆಯ ತನಕ ವಿಷಯ ಹೇಳಿದ್ದರೆ ತಾನೆ). ಆಗ ಸಹಾಯಕ್ಕೆ ಬಂದಿದ್ದು ನನ್ನ ಕಂಪ್ಯೂಟರ್. ಅದನ್ನು ’e-bay’ ಮೂಲಕ ಗಿರಾಕಿ ಹುಡುಕಿ ಮಾರಿ ಜೊತೆಗೆ ಸಿಕ್ಕ ಹೊಸ ಕೆಲಸದ ಮೊದಲ ಸಂಬಳದ ಸ್ವಲ್ಪ ದುಡ್ಡು ಸೇರಿಸಿ ವಾಪಾಸ್ಸು ಕೊಟ್ಟೆ. ಉಫ್! ಕೆಟ್ಟ ಹಟ.

ಪ್ರಾರಂಭದಲ್ಲಿ ಅಡಿಗೆ ಮನೆ ವ್ಯವಸ್ಥೆಗೆ ಸ್ವಲ್ಪ ಕಷ್ಟವಾಯಿತು. ಅಲ್ಲಿಯವರೆಗೂ ಆಕೆ ತಂದಿದ್ದ ಗ್ಯಾಸ್ ಸ್ಟೋವ್ ಇತ್ತು. ಹೊಸ ಕನೆಕ್ಷನ್ ನನಗೊಬ್ಬಳಿಗೆ ದುಬಾರಿ. ಕೊನೆಗೆ ಒಂದೇ ಒಲೆಯ ಚಿಕ್ಕ ಸಿಲೆಂಡರಿನ ಗ್ಯಾಸ್ ಒಲೆ ತಂದಿಟ್ಟುಕೊಂಡೆ. ಜೊತೆಗೆ ಒಬ್ಬಳಿಗೆ ಸಾಕಾಗುವಷ್ಟು ಚಿಕ್ಕ ಕುಕ್ಕರ್ ಮತ್ತು ಪಾತ್ರೆಗಳು ಬಂತು. ಮೊದಲೇ ನಾನು ಮಿಕ್ಸರ್ ಖರೀದಿಸಿದ್ದು ಆವತ್ತು ಉಪಯೋಗಕ್ಕೆ ಬಂತು. ಹೀಗೆ ನನ್ನ ಮತ್ತು ಇಣಚಿಯ ಪುಟ್ಟ ಸಂಸಾರ(!) ಪ್ರಾರಂಭವಾಗಿತ್ತು.

ಬೆಂಗಳೂರಿನಲ್ಲಿ ಮದುವೆಗೆ ಮುನ್ನ ಕಳೆದ ಆ ದಿನಗಳು ಇನ್ನೂ ನನಗೆ ನೆನಪಿವೆ. ನನಗೆ ಊಟ ಮಾಡಲು, ಶಾಪಿಂಗ್ ಹೋಗಲು ಜೊತೆ ಬೇಕೆನ್ನುವ ಆವಶ್ಯಕತೆ ಇಲ್ಲದ್ದರಿಂದ ಅಥವಾ ನನ್ನ ಜೊತೆ ನನಗೆ ಬದುಕಲು ಬೇಸರವಿಲ್ಲದ ಕಾರಣ ದಿನಗಳು ಬೇಗ ಖಾಲಿಯಾದವು. ಒಬ್ಬಳೇ ತಿಂದ ನೆರಳೆ ಹಣ್ಣಿನ ರುಚಿ ಇನ್ನೂ ನೆನಪಿದೆ. ದಿನಾ ಸಂಜೆ ಟೀ ಜೊತೆ ಈರುಳ್ಳಿ ಬಜೆ ಮಾಡಿಕೊಂಡು ಇಣಚಿ ಜೊತೆಗೆ ಸೇರಿ ಕಿಟಕಿಯ ಬಳಿ ತಿನ್ನುತ್ತಾ ಕುಳಿತುಕೊಳುತ್ತಿದ್ದೆ. ರಜಾ ದಿನಗಳಲ್ಲಿ ರಾತ್ರಿ ಎಷ್ಟು ಹೊತ್ತು ಬೇಕಾದರೂ ಕಂಪ್ಯೂಟರ್(ಭಾಡೀಗೆದು)ನಲ್ಲಿ ಕುಟ್ಟುತ್ತಾ ಅಥವಾ ದೊಡ್ಡದಾಗಿ ವಾಲ್ಯೂಮ್ ಹಾಕಿ ಸಿನೆಮಾ ನೋಡಬಹುದಿತ್ತು. ಇಣಚಿಗೂ ಇಡೀ ಮನೆ ಓಡಾಡುವ ಪರ್ಮಿಟ್ ಸಿಕ್ಕಿತ್ತು. ಅದಕ್ಕೆ ಬಯ್ಯುವರಾರು ಇರಲಿಲ್ಲ. ಬೇಕೆಂದಾಗ ಅಡಿಗೆ ಮಾಡಿಕೊಳ್ಳಬಹುದಿತ್ತು. ಪಾತ್ರೆ ತೊಳೆಯದೇ ಹಾಗೆ ಇಟ್ಟರೂ ಕೇಳುವರ್ಯಾರಿರಲಿಲ್ಲ. ಸುಮಾರು ಆರು ತಿಂಗಳ ಆ ಸಮಯದಲ್ಲಿ ಕೆಲವೊಂದು ಘಟನೆಗಳನ್ನು ಬಿಟ್ಟರೇ ಉಳಿದಿದ್ದೆಲ್ಲ ಸಕತ್ ಚೆನ್ನಾಗಿತ್ತು. ನಾನು ಒಬ್ಬಳೇ ಇರುವ ವಿಷಯ ಗೊತ್ತಾಗಿ ಭೂಪನೊಬ್ಬ ರಸ್ತೆಯಲ್ಲಿ ಹಿಂದೆ ಬಿದ್ದಿದ್ದು, ಆತನಿಗೆ ನಾ ಹೊಡೆಯಲು ಹೋಗಿದ್ದು,… ವಗೈರೆಗಳು. ಮೊದಲಿನಿಂದಲೂ ಮನೆಗೆ ಹುಡುಗರನ್ನು ಸ್ನೇಹಿತ ಅಥವಾ ದೂರದ ಅಣ್ಣ ಎಂದು ಕರೆತರುವ ಹಾಗಿರಲಿಲ್ಲ. ಆದು ನಮ್ಮ ಅಲಿಖಿತ ಒಪ್ಪಂದವಾಗಿತ್ತು. ಆಗ ಮಾಡಿಕೊಂಡಿದ್ದ ರೂಲ್ಸು ನಾನು ಒಬ್ಬನೇ ಇರಬೇಕಾದರೆ ತುಂಬಾ ಚೆನ್ನಾಗಿ ಸಹಾಯ ಮಾಡಿದವು. ಅಕ್ಕ-ಪಕ್ಕದ ಮನೆಯವರಿಗೆ, ಓನರಿಗೆ ಒಳ್ಳೆಯ ಅಭಿಪ್ರಾಯ ಇದ್ದುದರಿಂದ ಏನೂ ರಗಳೆಯಾಗಲಿಲ್ಲ. ಎಲ್ಲಕ್ಕಿಂತ ಜಾಸ್ತಿ ಪಕ್ಕವೇ ಅಣ್ಣನವರು ಇದ್ದುದು ನನಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿತ್ತು. ಕೊನೆಗೊಂದು ದಿನ ನಾನು ಒಬ್ಬನೇ ಇರಲು ಕಾರಣವಾದ ಇಣಚಿ ಮನೆ ಬಿಟ್ಟು ಸಂಗಾತಿಯ ಬೆನ್ನು ಹತ್ತಿ ಹೋಯಿತು. ಮೊದಲು ಸ್ವಲ್ಪ ದಿನ ಅದರ ನೆನಪಲ್ಲಿ ಬೇಸರವಾದರೂ ನಂತರ ಹೊಸ ಕೆಲಸ ಮತ್ತು ನನ್ನ ಮದುವೆಯ ತಯಾರಿಯಲ್ಲಿ ನಾನು ಕಳೆದು ಹೋಗಿದ್ದೆ.

(ಕೆಲ ಬದಲಾವಣೆಗಳೊಂದಿಗೆ ‘ಸಖಿ’ಯ ಜನವರಿ೧೬-೩೦ರ ಸಂಚಿಕೆಯಲ್ಲಿ, ‘ಸಂತೆಯಲ್ಲಿ ಏಕಾಂತೆ’ ತಲೆಬರಹದಡಿ ಪ್ರಕಟವಾಗಿತ್ತು)

ಹಲ್ಲಾಬೋಲ್

January 3, 2010

ಈಗಷ್ಟೆ ಈ ಸಿನೆಮಾ ನೋಡಿ ಮುಗಿಸಿದೆ. ಸುಮಾರು ತಿಂಗಳುಗಳಿಂದ ಇದ್ದ ಗೊಂದಲಗಳಿಗೆ ಅಕ್ಷರಗಳು ಸಿಕ್ಕಿತು. ನಿಜ, “ಎಂಟಿ ಟೆರರಿಸ್ಟ್” ಎಲ್ಲಿ ಹೋಯಿತು? ಅದನ್ನು ಇಲ್ಲೇ ಮುಂದುವರಿಸದೇ ಇನ್ನೊಂದು ಬ್ಲಾಗಿಗೆ ಏಕೆ ಸ್ಥಳಾಂತರಿಸಲಾಯಿತು? ಆಮೇಲೆ ಆ ಬ್ಲಾಗಿನಲ್ಲಿ ಒಂದೇ ಒಂದು ಬರಹ ಏಕೆ ಬರೆಯಲಾಗಲಿಲ್ಲ?…….ಅಸಂಖ್ಯ ಪ್ರಶ್ನೆಗಳು ನನ್ನೊಳಗೆ.

ಅದನ್ನು ಪ್ರಾರಂಭಿಸಿದಾಗ, ಇನ್ನೊಂದು ವರ್ಷದಲ್ಲಿ ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದು ಪಟ್ಟಿ ತಯಾರಿಸಿದ್ದೇ ಬಂತು ಹೊರತು ಏನನ್ನೂ ಕಾರ್ಯರೂಪಕ್ಕಿಳಿಸಲಾಗಲಿಲ್ಲ. ಏಕೆಂದರೆ ಹೆದರಿಕೆ. ಬಾಗಿಲು ತೆರೆದಾಗ ಪಿಸ್ತೂಲ್ ಹಿಡಿದ ಮುಸುಕುದಾರಿಗಳ ಕನಸು ಅಥವಾ ಅಂತರಜಾಲದ ಮೂಲಕ ನನ್ನ ಪಿಸಿಯನ್ನು ಜೊಂಬಿಯನ್ನಾಗಿ ಮಾಡಿ ನನ್ನೇ ಟಾರ್ಗೇಟ್ ಮಾಡಬಲ್ಲ ಅತಿರೇಕದ ಯೋಚನೆ,……

ಬೆಂಕಿ ಹತ್ತೊಕೆ ಕಿಡಿ ಸಾಕು. ಆದರೆ ಕಿಡಿ ಬೆಂಕಿ ಆಗೋಕೆ ಪೂರಕ ವಾತಾವರಣವೂ ಇರಬೇಕೆ! ಹೊಸ ಯೋಜನೆಗಳನ್ನು ಪ್ರಾರಂಭಿಸಬಹುದು. ಆದರೆ ಅದನ್ನು ಮುಂದುವರೆಸಿಕೊಂಡು ಹೋಗುವುದು ಅದೂ ಸಮಂಜಸವಾದ ನೆಲಗಟ್ಟಿನಲ್ಲಿ, ಇದು ಕಷ್ಟಸಾಧ್ಯ. ಈ ಸಂಘಟಿಸೊ ಕ್ರಿಯೆ ಇದೆಯಲ್ಲ, ಅದೂ ಇನ್ನೂ ದೊಡ್ಡದು. ನಮ್ಮದೆಲ್ಲವನ್ನೂ ದಾವೆ ಹೂಡಿ ಮುಂದುವರೆಯಬೇಕು. ಕೊನೆಗೆ ಏನೂ ಉಳಿಯತ್ತೋ ಅದನ್ನು ದಕ್ಕಿಸಿಕೊಂಡೂ ಕಳೆದದ್ದನ್ನು ’ಆಹುತಿ’ ಎಂದು ಪರಿಭಾವಿಸಿಕೊಳ್ಳಬೇಕು.

ಅದನ್ನು ಮುಂದುವರೆಸುವ ಬಗ್ಗೆ ಕೆಲವರ ಬರಿ ಮಾತನಾಡುತ್ತಿದ್ದಾಗ ಅರಿವಾಗಿದ್ದು, ನಾವೀರೊದು ಕಾರ್ಪೊರೇಟ್ ಜಗತ್ತಿನಲ್ಲಿ ಎಂದು. ಇಲ್ಲಿ ಯಾರೂ ಸುಮ್ಮನೇ ತಮ್ಮ ಜೊತೆ ಗುರುತಿಸಿಕೊಳ್ಳುವುದಿಲ್ಲ. ಅಲ್ಲಿ ಫಾಯಿದೆ ಇದ್ದರೆ ಮಾತ್ರ. ಬಾಯಲ್ಲಿ ಬಣ್ಣದ ಮಾತುಗಳನ್ನು ಉಲಿಯಬಲ್ಲರು. ಏಕೆಂದರೆ ಅದು ಅವರ ಮತ್ತು ನಮ್ಮೆಲ್ಲರ ಹೊಟ್ಟೆಪಾಡು ಅಥವಾ ಪ್ರಾಕ್ಟಿಕಲ್ ರಿಯಾಲಿಟಿ.

ನಾ ಇದರ ಬಗ್ಗೆ ಬರೆಯಬಾರದು ಅಂದುಕೊಂಡಿದ್ದೆ, ಇದಕ್ಕೆ ಬರುವ ಪ್ರತಿಕ್ರಿಯೆಗಳ ಬಗ್ಗೆ ಊಹಿಸಿ. ಕೆಲವೊಬ್ಬರು ಹ್ಹ ಹ್ಹಾ ನಾ ಮೊದಲೇ ಹೇಳಿದ್ದೆ ಎನ್ನುವವರು, ಇನ್ನೂ ಕೆಲವರು ಇದರಿಂದೆಲ್ಲಾ ಏನೂ ಪ್ರಯೋಜನವಿಲ್ಲ, ಬೇರೆ ಕೆಲಸ ಮಾಡಿ ಅನ್ನುವವರು,……ಅಥವಾ ಉಢಾಫೆ ಮಾಡಬಹುದು ಎಂದು.

ಮತ್ತ್ಯಾಕೆ ಬರೆದೆ. ಗೊತ್ತಿಲ್ಲ. ಅನ್ನಿಸಿದ್ದನ್ನು ಅಕ್ಷರಗಳನ್ನಾಗಿ ಹೆಣೆದು ಮನಸ್ಸಿನ ಕೂಪದಿಂದ ಮೇಲೇರಿ ಬರಲೆಂದೆ? ನಿಧಾನವಾದರೂ ಸರಿಯೇ ಸಾಧಿಸಬಲ್ಲೆವು ಎಂದ ಆ ಆಮೆಯ ಮೇಲಿನ ಪ್ರೀತಿಗೆ? ಹ್ಹ್!!

ಮಲ್ಲಿಕಾವಲ್ಲಭ (ಅಭಿಸಾರಿಕೆಯ ಕತೆಗಳು-೫)

November 23, 2009

ಅಭಿಸಾರಿಕೆ ಕಾಲ್ಬೆರಳಿನಿಂದ ಜೀಕುತ್ತ ಮಲ್ಲಿಗೆಯ ಬಳ್ಳಿಯಲ್ಲಿ ಜೋಕಾಲಿಯಾಡುತ್ತಿದ್ದಳು. ಜಾಜಿ ಮಲ್ಲಿಗೆಯು ಪಾರಿಜಾತದ ಕಂಪಿನಲ್ಲಿ ಮಿಳಿತಗೊಂಡು ಇಡೀ ವಾತವರಣ ಮತ್ತೇರಿದಂತಿತ್ತು. ನನ್ನ ನೋಡಿದವಳೇ ನಾಚಿಕೊಂಡು ಅಲ್ಲಿಂದೆದ್ದು ಓಡಿ ನೈದಿಲೆಯ ಕೊಳದಲ್ಲಿ ಧುಮುಕಿ ಅಲೆಗಳನ್ನೆಬ್ಬಿಸಿದಳು. ಅಲ್ಲಿಂದ ಎದ್ದು ಬಂದವಳ ಮೈಬಿಸಿಗೆ ನೀರೆಲ್ಲ ಆರಿತ್ತು. ಕಣ್ಗಳಲ್ಲಿ ವಿಚಿತ್ರ ಮಿಂಚಿತ್ತು.

ಪ್ರಭಾವತಿಯ ರಾಜ ಜಕ್ಕಣ್ಣನ ಮಗಳು ಮಲ್ಲಿಕೆ ಇನ್ನೂ ಕನ್ಯೆಯೇ. ಆಕೆಯ ಕನ್ಯಾಸೆರೆ ಕಳೆಯುವವರಿಗೆ ರಾಜ ಇಡೀ ರಾಜ್ಯ ಘೋಷಿಸಿದ್ದ. ಸುದ್ದಿ ತಿಳಿದವರಾರು ಅತ್ತ ಸುಳಿದಿರಲಿಲ್ಲ. ಅತೀ ಬುದ್ಧಿವಂತರಿಬ್ಬರು ಬಂದವರು ಮಾರನೇಯ ದಿನ ಹೆಣವಾಗಿ ಮರಳಿದ್ದರು. ರಾತ್ರಿ ಏನಾಯಿತೆಂದು ಯಾರಿಗೂ ತಿಳಿದಿರಲಿಲ್ಲ.

ಆಕೆಗಿದ್ದಷ್ಟು ಲಾವಣ್ಯ, ಸೌಂದರ್ಯ ಯಾರೂ ನೋಡಿರಲಿಕ್ಕಿಲ್ಲ, ಮುಂದೆಯೂ ಹುಟ್ಟಲಿಕ್ಕಿಲ್ಲ. ಹೀಗಿರಲು ದಂಡೆತ್ತಿ ಬಂದ ಮಾಯಾಪುರಿಯ ರಾಜ ಪ್ರಭೇಂದ್ರ ಪ್ರಭಾವತಿಯನ್ನು ಗೆದ್ದು ಮಲ್ಲಿಕೆಯನ್ನು ಕೊಲ್ಲಲಾಗದೇ ತನ್ನೊಂದಿಗೆ ಕರೆದೊಯ್ದ. ಆಕೆ ಆತನ ಪಾಲಿಗೆ ಭಾಗ್ಯ ದೇವತೆಯಾದಳು. ನೆರೆಹೊರೆಯ ರಾಜರನ್ನೆಲ್ಲ ಮಣಿಸುತ್ತ ಮಹಾರಾಜನಾದ. ಈಗ ಆತನ ಮಗ ಯುವರಾಜ ಕಾಂತರಾಜನಿಗೆ ಮಲ್ಲಿಕೆಯ ಮೇಲೆ ಪ್ರೇಮ. ಆದರೆ ಪ್ರಭೇಂದ್ರ ಬಿಡಬೇಕಲ್ಲ. ಆಕೆಯನ್ನು ಮುಗಿಸಲು ಕತ್ತಿ ಎತ್ತಿದ. ಆದರೆ ಅದೇ ಕತ್ತಿಯನ್ನು ಮಗ ಅಪ್ಪನ ಕುತ್ತಿಗೆಗೆ ಇಟ್ಟು ಮಗದೊಂದನ್ನು ತನ್ನ ಕುತ್ತಿಗೆಗೆ ಇಟ್ಟುಕೊಂಡು ಆಕೆಯನ್ನು ತನ್ನವಳಾಗಿಸಿಕೊಂಡ.

ಆ ರಾತ್ರಿ ಕಾಂತ ತನ್ನ ಕಾಂತೆಯ ಬಳಿ ತೆರಳಿದರೆ ಪ್ರಭೇಂದ್ರ ತನ್ನನ್ನು ಸ್ವರ್ಗಕ್ಕೆ ಏರಿಸಲು ಇನ್ನೊಂದು ಮಗನಿಲ್ಲದಿದ್ದುದ್ದಕ್ಕೆ ದುಃಖಿಸುತ್ತಾ ರಾಜ್ಯಕ್ಕೆ ವಾರಸುದಾರ ಬೇಕೆಂದು ಕಿರಿರಾಣಿಯ ಅಂತಃಪುರಕ್ಕೆ ತೆರಳಿದ.

ಇತ್ತ ತಾರಸಿಯ ಮೇಲೆ ಕಾಂತರಾಜ ಹುಣ್ಣಿಮೆಯ ಬೆಳಕನ್ನು ಉಟ್ಟು ದಿಗಂತವಾಗಿ ನಿಂತಿದ್ದ. ಮಲ್ಲಿಕೆ ಬಳ್ಳಿಯಾಗಿ ಆತನ ಮೈತುಂಬ ಹಬ್ಬುತ್ತಿದ್ದಳು. ಬೇರುಗಳು ಮೇಲ್ಪದರ ಸೀಳಿ ಅವನಾಳಕ್ಕೆ ಇಳಿಯುತ್ತಿದ್ದವು. ಇನ್ನೇನು ಹಿಡಿತ ಬಿಗಿಯಾಗಬೇಕು, ಜೀವ ಹೀರಬೇಕು ಅನ್ನುವಷ್ಟರಲ್ಲಿ ಏನಾಯಿತೋ ಕಾಣೆ ಬಂಧ ಕಳಚಿ ಸುರುಳಿ ಸುರುಳಿಯಾಗಿ ಕೆಳಗೆ ಉರುಳಿದಳು. ಚೆಲ್ಲಿದ ಶರೀರರದ ತುಂಬೆಲ್ಲ ಹೂವು ಬಿರಿಯತೊಡಗಿತು. ಅರಳಿದ ಹೂವುಗಳು ನಾಚಿ ಕೆಂಪಾಗತೊಡಗಿದವು. ಕಾಂತ ಮೆಲ್ಲಗೆ ಬಾಗಿ ಒಂದೊಂದೆ ಹೂವನ್ನು ಆರಿಸಿ ತನ್ನ ಮುಡಿಗೇರಿಸಿಕೊಳ್ಳತೊಡಗಿದ.

ಆ ರಾತ್ರಿ ಚಂದಿರ ನಿದ್ದೆ ಮಾಡಲಿಲ್ಲ. ರೋಹಿಣಿಯ ನೆನಪಲ್ಲಿ ಕುದ್ದುಹೋದ.

ಗೌತಮಿ(ಅಭಿಸಾರಿಕೆಯ ಕತೆಗಳು-೪)

November 20, 2009

ಮಧ್ಯರಾತ್ರಿ ಮನೆಗೆ ಮರಳಿದ ಮೇಲೆ ಅಭಿಸಾರಿಕೆ ಎಲ್ಲೆಂದು ಹುಡುಕುತ್ತೇನೆ. ಎಲ್ಲೂ ಕಾಣಿಸುವುದಿಲ್ಲ. ಎಲ್ಲಿ ಹೋದಳಿವಳು ಎಂದು ಅಂಕಣದ ಮಧ್ಯ ಇಣುಕಿದರೆ ಅದೋ ಅಲ್ಲಿ ಚಂದ್ರನ ಕೆಳಗೆ ಕೌಪಿನ ತೊಟ್ಟು ಪದ್ಮಾಸನದಲ್ಲಿ ಕುಳಿತಿದ್ದಾಳೆ. ಎದುರಿಗೆ ಹೊಚ್ಚ ಹೊಸ ಕುಂಡದಲ್ಲಿ ನೆಟ್ಟ ಆಲದ ಮರದ ಸಸಿ ! ನನಗೆ ನಗು ತಡೆಯಲಾಗಲಿಲ್ಲ.

ಇದೇ ಸಂಜೆ ನಾವಿಬ್ಬರೂ ದೀಪಾಲಂಕೃತ ಊರನ್ನು ನೋಡಲೆಂದು ಆಕಾಶಯಾನ ಕೈಗೊಂಡಿದ್ದೆವು. ಮೇಲಿನಿಂದ ಇಡೀ ಊರಿಗೆ ಊರೇ ಹೊಳೆಯುತಿತ್ತು. ಹಣತೆಯ ದೀಪಗಳು ನಕ್ಷತ್ರದಂತೆ ಮಿಣುಗುತ್ತಿದ್ದವು. ಹೀಗೆ ಸೊಗಸಾದ ಮನೆ-ಮಠಗಳನ್ನು ನೋಡಿ ತಣಿಯುತ್ತ ಊರ ಹಿಂದಿನ ಬೀದಿಯಲ್ಲಿ ಇಳಿದೆವು.

ನಾವು ನಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದಾಗ ಹಿಂದಿನಿಂದ ಬಿದ್ದ ಧಪ್ ಎಂಬ ಶಬ್ದಕ್ಕೆ ಅತ್ತ ತಿರುಗಿದೆವು. ಕರಚ ದುಮುಗುಡುತ್ತ ಬಿದ್ದ ಬಾಗಿಲಿಗೆ ಇನ್ನೆರಡು ಸಲ ಒದ್ದು ನಮ್ಮ ಮುಂದಿನಿಂದ ಸರಿದುಹೋದ. ಕಟ್ಟೆಯ ಬದಿಯಲ್ಲಿ ನಾಗಿ ಗೋಳೊ ಎಂದು ಅಳುತ್ತಿದ್ದ ಕೆಂಚಿಯನ್ನು ಸಮಾಧಾನಿಸುತ್ತಿದ್ದಳು. ಒಳಗೆ ಕೆಂಚ ತನ್ನರ್ಧ ವಯಸ್ಸಿನ ಮಾವನ ಮಗಳು ರತಿಯೆದುರು ಮನ್ಮಥನಾಗ ಹೊರಟಿದ್ದ. ಸ್ವಲ್ಪ ಹೊತ್ತಿನ ಮುಂಚೆ ಗಂಜಿಗೆಂದು ಹಚ್ಚಿದ್ದ ಒಲೆಯಲ್ಲಿ ಈಗ ಕೆಂಡ ನಿಗಿನಿಗಿಸುತ್ತಿತು.

ನಾಗಿಯೂ ಏನಂತ ಸಮಾಧಾನ ಹೇಳಿಯಾಳು? ಅವಳ ಗಂಡ ಅಕ್ಕನ ಮಾತಿಗೆ ಕಟ್ಟು ಬಿದ್ದು ಈಕೆಯನ್ನು ಕಟ್ಟಿಕೊಂಡಿದ್ದ. ಇದ್ದೊಬ್ಬ ಮಗನಿಗೂ ತಲೆಮಂದ. ಸ್ವಲ್ಪ ವರುಷದ ಕೆಳಗೆ ಮದುವೆಗೆ ಮುನ್ನ ಇಟ್ಟುಕೊಂಡವಳನ್ನು ಇವಳಿಗೆ ಸವತಿಯಾಗಿ ಮನೆಗೆ ತಂದಿದ್ದ. ಇತ್ತೀಚಿಗೆ ಹೊಸದೊಂದು ಹುಡುಗಿಯ ಮನೆಯಲ್ಲಿ ರಾತ್ರಿ ಮನೆ ಮಾಡಿಕೊಂಡಿರುತ್ತಾನೆ.

ಎಲ್ಲಿಂದಲೊ ಓಡಿ ಬಂದ ಭಾಗಿ ಇವರಿಬ್ಬರಲ್ಲಿ ಏನೋ ಹೇಳಿದಳು. ಮೂರು ಜನ ಒಂದೇ ಉಸಿರಿಗೆ ಮತ್ತೆಲ್ಲೋ ಓಡಿದರು. ಈಗ ಬಂದಿದ್ದ ಭಾಗಿಯದು ಇನ್ನೊಂದು ಕತೆ. ಮದುವೆಯಾಗಿ ಕೈಗೊಂದು ಮಗು ನೀಡಿ ಭಾಗ ದೇಶಾಂತರ ಹೋಗಿದ್ದ. ಬದುಕಿದ್ದಾನೋ ಇಲ್ಲವೋ ಯಾರಿಗೂ ತಿಳಿದಿಲ್ಲ. ಈಕೆ ತವರಲ್ಲಿ ಕಸ-ಮುಸುರೆ ಮಾಡಿಕೊಂಡು ಮಗುವನ್ನು ಸಾಕಿಕೊಂಡು ಇದ್ದಾಳೆ.

ಅಷ್ಟರಲ್ಲಿ ರಾಮ ನಾಮ ಸತ್ಯ ಹೈ ಕೇಳಿ ಬಂತು. ಹಿಂತಿರುಗಿ ನೋಡಿದರೆ ಮುನಿಯನ ಹೆಣದ ಮೆರವಣಿಗೆ. ಅಲ್ಲೆ ದೂರದಲ್ಲಿ ಕೆಲಸಕ್ಕೆ ಬಾರದ ಗಂಡನನ್ನು ಕಳೆದುಕೊಂಡಿದ್ದಕ್ಕೆ ಮುನಿಯಮ್ಮ ಎದೆ ಬಡಿದುಕೊಳ್ಳುತ್ತ ರೋಧಿಸುತ್ತಿದ್ದಾಳೆ. ನಾಗಿ, ಕೆಂಚಿ, ಭಾಗಿ…. ಆಕೆಯ ಜೊತೆ ಕೂತು ತಾವು ಅಳುತ್ತಿದ್ದಾರೆ. ನಾನು ಪಾಪ ಅಂದುಕೊಳ್ಳುತ್ತಿರುವಾಗ ಈಕೆ ಕೇಳಿದಳು ’ಏನಾಯಿತು?’ ನಾನಂದೆ ’ಅವನು ಮೇಲೆ ಹೋಗಿದ್ದಾನೆ’. ’ಮೇಲೆ ಎಂದರೆ ಎಲ್ಲಿ?’ ’ಅಯ್ಯೋ, ಮೇಲೆ ಎಂದರೆ ಸತ್ತು ಹೋಗಿದ್ದಾನೆ’. ’ಓಹೊ ಸತ್ತು ಹೋಗುವುದಾ, …..’ ನಾನು ದುರುಗುಟ್ಟಿ ನೋಡಿದೆ. ಸುಮ್ಮನಾದಳು. ಸೀದಾ ಮನೆಗೆ ಬಂದಿಳಿದೆವು. ಬಾಗಿಲ ಒಳಗೆ ಹೆಜ್ಜೆಯಿಡುತ್ತಿದ್ದಂತೆ ಮತ್ತೆ ಕೇಳಿದಳು ’ಅವನೆಲ್ಲಿ ಹೋದ?’ ನನಗೆ ತಡೆಯಲಾಗಲಿಲ್ಲ. ಅವಳಿಗೊಂದು ಉದ್ದಂಡ ನಮಸ್ಕರಿಸಿ ನಾನು ಹೊರ ಹೊರಟೆ.


Follow

Get every new post delivered to your Inbox.