Archive for the ‘ಸೌಪಿ’ Category

ಒಂದು ಚೌತಿ ಕತೆ

ಸೆಪ್ಟೆಂಬರ್ 1, 2019

ಈ ಚೌತಿ ಒಂಥರಾ ಹಳೇ ನೆನಪುಗಳನ್ನು ಎತ್ತಿ‌ಹಾಕಿ ಬಿಡುತ್ತೆ. ಬಹುಶಃ ಬದುಕಿನ ಮೊದಲ ಇಪ್ಪತ್ತಾರು ವರ್ಷ ಗಳಲ್ಲಿ ಕಂಡ ಅಬ್ಬರದ ಹಬ್ಬ ಇದಾಗಿತ್ತು. ಆಗ ವರ್ಷದ ದೊಡ್ಡ ಹಬ್ಬ ಅಂದರೆ ಚೌತಿ. ಅದೂ ಅಜ್ಜನಮನೆಯ ಚೌತಿ. ಹೊಸ ಅಂಗಿ, ಎಲ್ಲರಿಗೆ ಕೊಡಲು ಬಳೆ, ಅದಕ್ಕಿಂತ ಜಾಸ್ತಿ ‌ನಾವೆಲ್ಲ ಸೇರಿ ರಾತ್ರಿ ಇಡೀ ಮಾಡುತ್ತಿದ್ದ ಗಣಪತಿ ಮಂಟಪ. ಮೊದಲು ಮಾವ ಅವನ ಸ್ನೇಹಿತರ ಜೊತೆ ಸೇರಿ ಪ್ರತಿ ವರ್ಷ ಹೊಸತೇನಾದರೂ ಮಾಡುತ್ತಿದ್ದ. ಅವರು ಫ್ಯಾನ್ ಉಪಯೋಗಿಸಿ ಮಾಡಿದ್ದ ರೊಬೊಟ್ ಇನ್ನೂ ನೆನಪಿದೆ. ತದನಂತರ ನಾವು ಬೆಳೆದ ಹಾಗೇ ಅಣ್ಣಂದಿರ ಜೊತೆ ಸೇರಿ ನಾವೆಲ್ಲ ಮಾಡುತ್ತಿದ್ದದ್ದು. ಮರುದಿನ ಊರೆಲ್ಲ ತಿರುಗಿ ಯಾರ ಮನೆಯ ಗಣಪತಿ ಅಲಂಕಾರ ಹೊಸದಾಗಿದೆ, ಚೆನ್ನಾಗಿದೆ ಎಂದು ಚರ್ಚಿಸುತ್ತಿದ್ದದ್ದು.

ಆಮೇಲೆ ಊರವರೆಲ್ಲ ಗಣಪತಿ ದೇವಸ್ಥಾನದಲ್ಲಿ ಸೇರಿ, ಊರ ಗಡಿಯಾದ ಚೌಡಿ ಕಟ್ಟೆಯ ಜೊತೆ ನಡೆದು‌ಹೋಗುತ್ತಿದ್ದು. ಅಲ್ಲಿ ಈಡುಗಾಯಿ ಒಡೆಯುವ ಚಿಕ್ಕ ಸ್ಪರ್ಧೆಯೂ ಇರುತಿತ್ತು. ಇದು ದೀಪಾವಳಿಗಾಗಿತ್ತಾ, ನೆನಪಾಗುತ್ತಿಲ್ಲ. ಒಂದು ವರ್ಷ ಅಲ್ಲಿ ಎಲ್ಲರನ್ನೂ ಸೇರಿಸಿ ದುಡ್ಡು ಕಲೆ ಹಾಕಿ ಮಾಡಿದ ಸಾಂಸ್ಕೃತಿಕ ಕಾರ್ಯಕ್ರಮವೂ ನೆನಪಿದೆ.

ನನಗೆ ಏನು‌ ಹುಚ್ಚೊ‌ ಗೊತ್ತಿಲ್ಲ. ಎಲ್ಲರನ್ನೂ ಸೇರಿಸಿ ಈ ತರಹದ ಕಾರ್ಯಗಳನ್ನು ಮಾಡುವುದು. ಮದುವೆಯ ನಂತರ ಇವನ ಮನೆಯಲ್ಲಿ ಮಾಡುವ ನವರಾತ್ರಿಯ ಮಕ್ಕಳ ಕಾರ್ಯಕ್ರಮಗಳು ಇದರ ಮುಂದುವರೆದ ಭಾಗವಾಗಿರಬಹುದು.

ಹಾಗೇ ಗಣಪತಿಯ ಅಲಂಕಾರದ ವಿಷಯಕ್ಕೆ ಬಂದರೆ ಅಪ್ಪನ ಮನೆ, ಊರಲ್ಲಿ ಮಾಡಿದ ಒಂದೇ ಗಣಪತಿ ನೆನಪಿದೆ. ಆಗ ಚಿಕ್ಕಪ್ಪ ಮತ್ತು ದೊಡ್ಡಪ್ಪ ಜೊತೆಗೆ ಇದ್ದರು ಮತ್ತು ಚಿಕ್ಕಪ್ಪನಿಗೆ ಮದುವೆಯಾಗಿರಲಿಲ್ಲ. ಮನೆಯೂ ಒಡೆದಿರಲಿಲ್ಲ. ಆಗ ಬಣ್ಣ ಬಣ್ಣದ ಕಾಗದಗಳಲ್ಲಿ ಮಾಡಿದ್ದ ಅಲಂಕಾರ ನೆನಪಿದೆ. ಜಾಸ್ತಿ ಹಬ್ಬದ ಹಿಂದಿನ‌ ದಿನ ಸಾಗರಕ್ಕೆ ಹೋಗುತ್ತಿರಲಿಲ್ಲವಾಗಿದ್ದಕ್ಕೆ, ಒಂದೇ ಹಬ್ಬ ನೆನಪಿರುವುದು ಸಹಜ ಅನ್ನಿಸುತ್ತದೆ. ಹಬ್ಬದ ಮಾರನೇ ದಿನ ಹೋಗುತ್ತಿದ್ದದ್ದು, ಅಲ್ಲಿಯ ಕೆರೆಯ ಕಟ್ಟೆಯಲ್ಲಿ ಎಲ್ಲರೂ ಸಾಲಾಗಿ ಕೆಂಪು ಗಣಪತಿ ನಿಲ್ಲಿಸುತ್ತಿದ್ದದ್ದು ನೆನಪಿದೆ.

ಅಲ್ಲಿಯ ಅಂದರೆ ಸಾಗರದ ಗಣಪತಿಗೆ ಮತ್ತು ಶಿರಸಿಯ ಗಣಪತಿಗೆ ಸಾಕಷ್ಟು ವ್ಯತ್ಯಾಸ ಇರುತ್ತದೆ. ಬಣ್ಣ ಮತ್ತು ಆಕಾರದಲ್ಲಿ. ಇಲ್ಲಿ ಮುಂಬಯಿಗೆ ಬಂದ ಮೇಲೆ ಶಿರಸಿಯ ಗಣಪತಿಗೆ ಮತ್ತು ಇಲ್ಲಿ ಮಾಡುವ ಗಣಪತಿಯ ಮೂರ್ತಿಗಳಿಗೆ ಸಾಮ್ಯವಿದೆಯೆಂದು ಅನ್ನಿಸುವುದು. ಹೆಚ್ಚಾಗಿ ಇವೆರಡೂ ಮುಂಬಯಿ ಪ್ರಾಂತ್ಯವಾಗಿದ್ದಕ್ಕಾ, ಈ ಕೊಂಕಣ್ ಸೀಮೆ ನಮ್ಮವರೆಗೂ ಬಂದಿರಬಹುದು. ಅದೇ ಸಾಗರವು ಕೆಳದಿ, ಮೈಸೂರಿಗೆ ಸೇರಿದ್ದಕ್ಕೆ ಎರಡೂ ಊರಲ್ಲೂ ಇಷ್ಟು ವ್ಯತ್ಯಾಸ ಬೆಳೆದಿರಬಹುದು, ಗೊತ್ತಿಲ್ಲ.

ಆದರೆ ಶಿರಸಿಯ ಅಜ್ಜನ ಮನೆಯ ಗಣಪತಿಯ ವಿಜ್ರಂಭಣೆ ಅಲ್ಲಿ ಇರುತ್ತಿದ್ದಿಲ್ಲ. ಸಾಗರದ ಅಜ್ಜಿ ಮಾಡುತ್ತಿದ್ದ ಮೊದಕ ಅದೂ ಹಿಟ್ಟಿನ ಗಂಟು ಹಾಕಿ ಮತ್ತು ಬೇಯಿಸಿದ ಕಾಯಿ ಕಡುಬಿನ ರುಚಿ ಮಾತ್ರ ಈಗಲೂ ನೆನಪಿದೆ.

ಶಿರಸಿಯ ಅಜ್ಜನಮನೆಯಲ್ಲಿ ( ಮುಂಡಿಗೇಸರ) ದಿನಾ ಏಷ್ಟು ಜನ ಊಟಕ್ಕೆ ಆಗುತ್ತಿದ್ದರು. ಈಗ ದೊಡ್ಡವರಾದ ಮೇಲೆ ಆ ಅಜ್ಜ, ಆಮೇಲೆ ಮಾವ ಬರೀ ಅಡಿಕೆ ತೋಟದ ಕಮಾಯಿಯಲ್ಲಿ ಅಷ್ಟೆಲ್ಲಾ ಮಾಡತ್ತಿದ್ದದ್ದು ಈಗ ಗ್ರೇಟ್ ಅನ್ನಿಸುತ್ತದೆ. ಅಮ್ಮಮ್ಮ ಮತ್ತು ಅತ್ತೆ ಸಹ. ಬಂದ ಅಷ್ಟೂ ಜನಕ್ಕೆ ಊಟೋಪಚಾರದಿಂದ ಹಿಡಿದು, ಹಬ್ಬದ ಅಷ್ಟೂ ಬಗೆ ಬಗೆಯ ನೈವೇದ್ಯ ಗಳನ್ನು ಮಡಿ ಬಟ್ಟೆ ಯಲ್ಲಿ ಮಾಡುತ್ತಿದ್ದದ್ದು!

ಅಲ್ಲಿ‌ ಎಲ್ಲರ ಮನೆಯಲ್ಲೂ ಡಬ್ಬಿಗಟ್ಟಲೇ ಚಕ್ಕಲಿ ಮತ್ತು ಹಬ್ಬದ ಹಿಂದಿನ‌ ದಿನಗಳಲ್ಲಿ ಆಗುವ ಚಕ್ಕಲಿ ಕಂಬಳ. ಎಲ್ಲದಕ್ಕೂ ಮಿಗಿಲಾಗಿ ಮಜಾ ಅನ್ನಿಸುವುದು, ಅಲ್ಲಿ ಗಣಪತಿಯಲ್ಲಿ ಒಡೆ ಏನಕ್ಕೆ ಮಾಡುತ್ತಿದ್ದರು ಎಂದು. ಮೂಲತಃ ಶ್ರಾದ್ಧಕ್ಕೆ ಮಾಡುವ ತಿನಿಸೊಂದನ್ನು ಹಬ್ಬಕ್ಕೆ ಮಾಡುವುದು. ಇದೂ ಗೊತ್ತಿಲ್ಲ.

ಈ ಗಂಗೂ ಬಾಯಿ, ಭೀಮ್ ಸೇನ್ ಜೋಶಿ ಎಲ್ಲ ಜಾಸ್ತಿ ಕೇಳಿದ್ದೆ ಅಜ್ಜನ ಮನೆಯಲ್ಲಿರಬಹುದು. ಆಗ ಎಲ್ಲರಿಗೂ ಕ್ಯಾಸೆಟ್ ಕಲೆಹಾಕುವ ಹವ್ಯಾಸ. ಮನೆಯಲ್ಲಿ ಎಲ್ಲ ಸಂಗೀತಾಸಕ್ತರೂ ಹಾಗೂ ಅಭ್ಯಾಸ ಮಾಡಿದವರೂ ಇದ್ದಿದ್ದಕ್ಕೆ ಹೆಚ್ಚಾಗಿ ಕ್ಲಾಸಿಕಲ್ ಸಂಗೀತ ಗಣಪತಿಯ ನಾಲ್ಕು ದಿನ ಚಾಲೂ ಇರುತ್ತಿತ್ತು. ಆಮೇಲೆ ಅಣ್ಣನ‌ ಜಮಾನೆಯಲ್ಲಿ ಅದೂ ಹಿಂದೀ ಚಿತ್ರಗೀತೆಗಳಿಗೆ ತಿರುಗಿತ್ತು.

ಹಬ್ಬದ ಕೊನೆಯ ದಿನ ಪಟಾಕಿಯ ಗೌಜು. ಅಂದಿಗೂ ಇಂದಿಗೂ ಪಟಾಕಿಯ ಅಲರ್ಜಿ ಯಿರುವ ನಾನೂ ಸಹ ಆ ತಿರುಗುವ ನೆಲಚಕ್ರ, ಹಾವು, ಹೂವು ಎಲ್ಲ ಆಸಕ್ತಿಯಿಂದ ನೋಡುತ್ತಿದ್ದೆ. ಎಲ್ಲ ಸಡಗರವೂ ನಿಲ್ಲುತ್ತಿದ್ದು ಮನೆಯ ಎದುರಿಗಿನ ಹೊಂಡದಲ್ಲಿ ಗಣಪತಿ, ಬಪ್ಪಾ ಮೊರೆಯಾ ಎಂಬ ಕೂಗಿನಲ್ಲಿ ಮರೆಯಾದಾಗ. ಈಗಲೂ ಸಂಭ್ರಮದ ಕೊನೆಯ ಸಾಲಿಗೆ ಎದೆ ಕಟ್ಟಿ, ಕಣ್ಣಂಚು ಒದ್ದೆಯಾಗುತ್ತದೆ. ಹಮ್.

ಹಾಗಂತ ಎಲ್ಲವಯ ಮುಗಿಯತ್ತಿರಲಿಲ್ಲ. ಶಿರಸಿಯ ಪೇಟೆ ಗಣಪತಿ ನೋಡುವ ಸಂಭ್ರಮ ಶುರುವಾಗುತ್ತಿತ್ತು. ದೇವಿಕೆರೆಯ ಚಡ್ಡಿ ಗಣಪತಿ, ಅದರ ಹಿಂದಿನ ಶಬರಿ ಮಲೈ ಗಣಪತಿ, ಜ್ಯೂ ಸರ್ಕಲ್ ಗಣಪತಿ, ಕೆಇಬಿ ಗಣಪತಿ, ಬಸ್ ಸ್ಟ್ಯಾಂಡ್ ಗಣಪತಿ, ನಟರಾಜ ಗಲ್ಲಿ ಗಣಪತಿಗಳು, ರಾಯರ ಪೇಟೆ ಗಣಪತಿ, ನೀಲೆಕಣಿ ಗಣಪತಿ,… ಕೊನೆಯ ದಿನದಲ್ಲಿ ಮೆರವಣಿಗೆಯ ಜೊತೆ ಸಾಗುವ ದೊಡ್ಡ ದೊಡ್ಡ ಗಣಪತಿಗಳು. ಮುಂಬಯಿಗೆ ಬಂದ ಮೇಲೆ ದೊಡ್ಡ ಗಣಪತಿ ಹೇಗಿರುತ್ತದೆ ಎಂದು ಗೊತ್ತಾದರೂ, ಬಾಲ್ಯ ಮತ್ತು ಯೌವನದಲ್ಲಿ ಶಿರಸಿಯದ್ದೇ ದೊಡ್ಡ ಗಣಪತಿಯಾಗಿತ್ತು. ಅಲ್ಲಿ ಇಲ್ಲಿಯ ತರಹ ಎಲ್ಲ ಸೇರಿ‌ ಕುಣಿಯುತ್ತಿರಲಿಲ್ಲ. ಅದೂ ಹೆಂಗಸರೂ ರಸ್ತೆಯಲ್ಲಿ ಮನಸ್ಸು ಬಿಚ್ಚಿ ಕುಣಿಯುವುದು ಇನ್ನೂ ನಾನು ಅರಗಿಸಿಕೊಂಡಿಲ್ಲ. ಅಲ್ಲಿ ಮುಖ್ಯ ರಸ್ತೆಯಾದ ಸಿ.‌ಪಿ. ಬಝಾರಿನಲ್ಲೇ ಜಾಸ್ತಿ ಕಾಲ ಮನೆ ಇದ್ದಿದ್ದಕ್ಕಾಗಿ ಎಲ್ಲ ಗಣಪತಿಗಳ ಪ್ರೊಸೆಷನ್ ನೋಡಲು ಸಿಗುತ್ತಿತ್ತು. ಅನೇಕ‌ ಜಾನಪದ ತಂಡದವರನ್ನು ಪರಿಚಯಿಸಿದ್ದು ಸಹ ಇದೇ ಗಣಪತಿಯೇ.

ಈಗ ಇವೆಲ್ಲ ನೋಡದೇ ವರ್ಷಗಳಾಗಿವೆ. ಅಜ್ಜನಮನೆಯಲ್ಲಿ ಮೊದಲಿದ್ದ ಸಂಭ್ರಮ ಈಗಿಲ್ಲ. ಮದುವೆಯಾಗಿ ಹನ್ನೆರಡು ವರ್ಷ ಗಳಲ್ಲಿ ಒಂದೊ ಎರಡೊ ಬಾರಿಯೇ ಶಿರಸಿಗೆ ಹೋಗಿದ್ದೇನೊ. ಈ ನವರಾತ್ರಿಯ ಕಾಲಕ್ಕೆ ಎಲ್ಲವೂ ನಿಂತು ಹೋಯಿತು. ಇವನ ಮನೆಯಲ್ಲಿ ವರ್ಷ ಕ್ಕೊಂದೇ ದೊಡ್ಡ ಹಬ್ಬ, ಅದೂ ನವರಾತ್ರಿ. ಗಣಪತಿಯ ಬೆನ್ನಿಗೆ ಅದೂ ಬರುವುದರಿಂದ ಗಣಪತಿಗೆ ರಜೆ ಹಾಕಿ ಮತ್ತೆ ನವರಾತ್ರಿ ಗೆ ಹದಿನೈದು ದಿನ ರಜೆ ಹಾಕುವುದು ಸಾಧ್ಯವಿರಲಿಲ್ಲ. ಜೊತೆಗೆ ಇವನ ಮನೆಯಲ್ಲಿ ಮುಖ್ಯ ದೇವರು ಗಣಪತಿ ಯಾಗಿದ್ದರಿಂದ ನಾನು ಗಣಪತಿಗೆ ನನ್ನ ಮನೆಗೆ, ಅಜ್ಜನ ಮನೆಗೆ ಹೋಗುವುದು ಇವನಿಗೆ ಸರಿ ಕಾಣುತ್ತಿರಲಿಲ್ಲ. ಆಮೇಲೆ ಗಣಪತಿಯ ರಜೆಯಲ್ಲಿ ಊರೂರು ತಿರುಗುವುದಕ್ಕೆ ಶುರುವಾಗಿ, ಒಂದು ಸಲ ಬಾದಾಮಿ , ಇನ್ನೊದು ಸಲ ಬಿಜಾಪುರ, ಮಗದೊಂದು ಸಲ ಹರಿದ್ವಾರ ಅಂತೆಲ್ಲ ಆಗಿ ಇಲ್ಲಿನ ಮುಂಬಯಿ ಮನೆಯಲ್ಲಿ ಗಣಪತಿ ಆಚರಿಸಿದ್ದು ಕಡಿಮೆಯೆ.

ಹೋಗಲಿ, ಈ ಸಲನೂ ಎಲ್ಲೂ ಹೋಗುತ್ತಿಲ್ಲ. ಹೊಸ ಊರು ಅಲೆಯಲು ಹೋಗಬಹುದು. ಮಗಳು ಗೋತಮಿಗೆ ದೇವರೆಂದರೆ ಗೊತ್ತಿಲ್ಲ. ದೊಡ್ಡವಳಾಗುತ್ತ ಇವಳು ಈ ದೇವರನ್ನು ( ಮೂರ್ತಿ ಪೂಜೆ) ಹೇಗೆ ಸ್ವೀಕರಿಸುತ್ತಾಳೆ ಎಂಬ ಕುತೂಹಲ ನನಗಿದೆ. ಮನೆಯಲ್ಲಿ ನಿತ್ಯ ಪೂಜಾ ಕ್ರಮ ನಾನು‌ ಮಾಡುವುದಿಲ್ಲ. ಇವನು ತನ್ನ ನಿತ್ಯ ಕರ್ಮ ಮಾಡುತ್ತಾನೆ. ಹಿಂದಿನ ಸಲ ಭೂತ ಕೋಲದ ಪರಿಣಾಮದಿಂದ ಗಣಪತಿಯಲ್ಲಿ ಗೋತಮಿಗೆ ಭೂತ ಕಾಣುತ್ತಿತ್ತು. ಈ ಸಲ ನೋಡಬೇಕು.

ತುತ್ತು

ಡಿಸೆಂಬರ್ 24, 2014

ಊಟದ ಮೊದಲ ತುತ್ತಿಡುವಾಗ ಆ ಚಿತ್ರಗಳು ಮತ್ತೆ ಮೂಡುತ್ತವೆ. ಇವನು ಕೇಳ್ತಾನೆ,  ‘ಮತ್ತ್ಯಾಕೆ ಅಳ್ತಿದಿಯಾ? ಏನ್ ಕತೆಯೋ ನಿಂದು’ ಅಂತ.

ಚೆನ್ನೈ ಚಂಡಮಾರುತಕ್ಕೆ ಸಿಕ್ಕಿ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿದ್ದವು. ಅದೇ ಸಮಯದಲ್ಲಿ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಬಸ್ ಕಾಯುತ್ತಾ ನಿಂತವಳಿಗೆ ಪೇಪರಿನಲ್ಲಿ ಏನನ್ನೋ ಹಿಡಿದುಕೊಂಡು ಇತ್ತ ಕಡೆ ಬರುತ್ತಿದ್ದ ಅವನು ಕಂಡ. ಬಡವ ಎಂದು ಅನ್ನಿಸುತ್ತಿರಲಿಲ್ಲ. ಬಟ್ಟೆ ಕೊಳಕಾಗಿತ್ತಷ್ಟೆ. ಇತ್ತ ನನ್ನ ಪಕ್ಕದಲ್ಲಿ ರಸ್ತೆಯಲ್ಲಿ ಕೂತ ಆಕೆಯತ್ತ ತೆರಳಿ ಪೇಪರಿನಲ್ಲಿದ್ದ ಬಿಳಿ ಅನ್ನ ತೋರಿಸಿದ. ಆಕೆ ದುಃಖದಲ್ಲಿ ತಿನ್ನಲು ತಯಾರಾಗಲಿಲ್ಲ. ಆತ ಪ್ರೀತಿಯಲ್ಲಿ ಅದೇನೋ ಹೇಳುತ್ತಾ ಕೈಯಲ್ಲಿದ್ದ ಪೇಪರಿನಿಂದ ಅನ್ನದ ತುತ್ತೆತ್ತಿ ಆಕೆಗೆ ತಿನ್ನಿಸತೊಡಗಿದ. ಬಸ್ ಬಂತು, ನಾನು ಹತ್ತಿ ಸೀಟಿನಲ್ಲಿ ಕೂತು ಆತನತ್ತ ಕಣ್ ತುಂಬಿ ನೋಡಿದಾಗ ಚಲಿಸುತ್ತಿದ್ದ ಗಾಜಿನ ಹಿಂದೆ ಆತ ನನ್ನೆಡೆ ಮುಗುಳ್ನಕ್ಕಂತೆ ಕಂಡಿತು.

ಹರಿದ್ವಾರದ ಬೀದಿ ಬದಿಯ ಯಾವುದೋ ಒಂದು ಗುರುದ್ವಾರದ ಮೆಟ್ಟಿಲುಗಳ ಮೇಲೆ ಕೂತಿದ್ದೆ. ಮೊಬೈಲಿನಲ್ಲಿ ನಾಳೆ ದೆಹಲಿಗೆ ಹೋಗಿ ಉಳಿಯುವ ಹೋಟೆಲ್ ಗಳಿಗಾಗಿ ಹುಡುಕಾಟ ನಡೆಸಿದ್ದೆ. ಎದುರಿಗೆ ನೆಲದಲ್ಲಿ ಸಾಲಿನಲ್ಲಿ ಅವರೆಲ್ಲ ಕೈ ನಲ್ಲಿ ಪ್ಲಾಸ್ಟಿಕ್ ಹಿಡಿದು ಕೂತಿದ್ದರು. ಒಳಗಿನಿಂದ ಬಂದವರು ಅದರಲ್ಲಿ ಬಡಿಸುತ್ತಿದ್ದನ್ನು ತಿನ್ನುತ್ತಿದ್ದರು. ನಾನು ಸಾವಿರಗಳ ರೂಮಿನಲ್ಲಿ ಯಾವುದು ಸರಿ ಹೋಗುತ್ತೆ ಎಂದು ಲೆಕ್ಕಾಚಾರ ಮಾಡುತ್ತ, ನಾಳಿನ ದೆಹಲಿ ಸುತ್ತಾಟಗಳ ಬಗ್ಗೆ ಲೀಸ್ಟ್ ಮಾಡುತ್ತಾ ಕೂತಿದ್ದೆ. ಮತ್ತೆ ಹತ್ತು ನಿಮಿಷ ಬಸ್ ಹೊರಡುವವವರೆಗೆ ಅವರನ್ನು ಸುಮ್ಮನೇ ನೋಡುತ್ತಾ ಕುಳಿತಿದ್ದೆ. ಪ್ಲಾಸ್ಟಿಕ್ ಎತ್ತಿ ಕೊನೆಯ ಹನಿಯನ್ನು ಬಿಡದೇ ಅವನು ಕುಡಿಯುತ್ತಿದ್ದ.

ಜೊತೆಗೆ ಹುಷಾರಿಲ್ಲದ ಆ ಜೀವಕ್ಕೆ ರೊಟ್ಟಿ ತಿನ್ನಿಸುತ್ತಿರುವ ಅವನ ಚಿತ್ರ ಮತ್ತು ಎದುರಿಗಿನ ಕಪ್ಪು ಮಡಿಕೆಯ ಮೇಲಿನ ಮುಚ್ಚುಳ ತೆರೆದು,ಕಪ್ಪಿನಲ್ಲಿ ಅಂಬಲಿ ಎತ್ತಿ ಕುಡಿಯುತ್ತಾ , ಅಕೆಯೆಡೆ ನೋಡಿ ಮುಗುಳ್ನಗುವ ಅವನ ಚಿತ್ರ.  ಇವೆರಡೂ ಪದೇ ಪದೇ ನೆನಪಿಗೆ ಬರುವ ಮತ್ತೆರಡು ಚಿತ್ರಗಳು. ಬಾಲ್ಯದಲ್ಲಿ ಯಾವ ಸಿನೆಮಾದಲ್ಲಿ ನೋಡಿದ್ದೇನೊ ಗೊತ್ತಿಲ್ಲ. ಅವನು, ಆಕೆ ಯಾರು ಅನ್ನೋದು ಗೊತ್ತಿಲ್ಲ. ಆದರೆ ರೊಟ್ಟಿ ಮಾಡಿಕೊಂಡು ತಿನ್ನುವಾಗ ಮಾತ್ರ ಮತ್ತೆ ನೆನಪಿಗೆ ಬರುತ್ತೆ. ಕಣ್ ತುಂಬಿ ಬರುತ್ತೆ, ಮತ್ತೆ ಇವನು ಕೇಳ್ತಾನೆ, ‘ಮತ್ತ್ಯಾಕೆ…………..

ಫಿಶ್ಸು ಮತ್ತು ವೈಫು

ನವೆಂಬರ್ 24, 2014

ಈ ಹೆಂಡ್ತಿಗೂ ಬಂಗಾರದ ಮೀನಿಗೂ ಏಷ್ಟೆಲ್ಲಾ ಹೋಲಿಕೆ!
ತಿನ್ನಲು ಹೊತ್ತಿಗೆ ಸರಿಯಾಗಿ ಆಹಾರ
ಸದಾ ಹೊಳೆಯಿತ್ತಿರಲೆಂದೇ ಬೇಕಾಗುವಷ್ಟು ಬೆಳಕು ಮತ್ತು ಶಾಖ
ಜೀವಂತಿಕೆಗಾಗಿ ಅಲಂಕರಿಸಿದ ಮನೆ
ಬೇಸರಕ್ಕಾಗಿ ಸುತ್ತಲು ವಿವಿಧ ಸಾಮಾನುಗಳು
ಸಮಯಕ್ಕೆ ಸರಿಯಾಗಿ ಸ್ವಚ್ಛ ಹೊಸ ನೀರು
ಎಲ್ಲಕ್ಕಿಂತ ಜಾಸ್ತಿ ತುಂಬಾ ಪ್ರೀತಿ
ಆದರೆ ಇರಬೇಕಾಗಿದ್ದು ಮಾತ್ರ ನಾಲ್ಕು ಗೋಡೆ ಮಧ್ಯ
ಬಾಲ್ಯದಿಂದಲೂ ಬೆಳೆದದ್ದೂ ನಾಲ್ಕು ಗಾಜಿನ ನಡುವೆ
ನದಿಗೆ ಬಿಟ್ಟರೆ ತರಭೇತಿ ಇಲ್ಲದೇ ಸಾವ ಭಯ
ಅದಕ್ಕೆಂದೇ ದೊಡ್ಡ ಕೊಳ ಕಟ್ಟಿಸುವ ಆಸೆ
ಸುತ್ತ ಗೋಡೆ ಇದೆಯೆಂದು ಗೊತ್ತಾಗದಷ್ಟು !

ಸುಮ್ಮನೇ ಅನಿಸಿದ್ದು. ಬಯ್ಕೊಬೇಡಿ.

ಬೆಂಕಿಯ ಕಣ್ಣುಗಳು

ಸೆಪ್ಟೆಂಬರ್ 24, 2014

ಶಮ್ಮಿ ಅವರ ಕವಿತೆಗೆ ಉತ್ತರಿಸುತ್ತಾ ಹೀಗೆ ಯೋಚಿಸ್ತಾ ಇದ್ದೆ, ನನ್ನ ಜೊತೆ ಹೀಗೆ ಯಾವಾಗಾವಾಗ ಆಗಿತ್ತು ಅಂತ. ಆಹ್ ! ಆಗ ನೆನಪಿಗೆ ಬಂಗಿದ್ದು ಲಾವಾಸಾ ಕತೆ. ನಾನು ಯಾವಾಗಲೂ ಊರು ಸುತ್ತೋಕೆ ಹೋಗುವಾಗ ನೆಟ್ಟಗೆ ಡ್ರೆಸ್ ಮಾಡಿಕೊಳ್ತೇನೆ. ಅಂದರೆ ಜಾಸ್ತಿ ಉದ್ದನೆಯ ತೋಳಿನ ಅಂಗಿಗಳು, ಇಲ್ಲವೇ ಜೀನ್ಸ್ ಮತ್ತು ಕುರ್ತಾಗಳು.  ಎದೆ, ಹಿಂಬಾಗ, ತೋಳು, ಕಾಲುಗಳನ್ನು ಮುಚ್ಚಿರುವಂತದ್ದು. ಏನಕ್ಕಂದ್ರೆ ಹೋದ ಕಡೆ ದಿಟ್ಟಿಸಿ ನೋಡುವ ಕಣ್ಣುಗಳು ನನಗೆ ಬೇಕಾಗಿಲ್ಲ. ಬಗ್ಗಿದಾಗ, ಹೇಗೆಂದರೆ ಹಾಗೆ ಕ್ಯಾಮೆರಾ ಹಿಡಿದು ಕ್ಲಿಕ್ಕಿಸುತ್ತಿರುವಾಗ ನನ್ನ ಅಂಗಿಯ ಬಗ್ಗೆ ಗಮನ ಹರಿಸಲು ನನಗೆ ತಾಳ್ಮೆಯಿರುವುದಿಲ್ಲ. ಆದರೆ ಅವತ್ತು ಉಮೇದು ಬಂದು ಬಿಟ್ಟಿತ್ತು. ಏನಂದರೆ ಚಿಕ್ಕ ಲಂಗ ಹಾಕಿಕೊಂಡು ಹೋಗಬೇಕೆಂದು. ಇವನು ನಾವಿಬ್ಬರೇ ಹೋಗುತ್ತಿರುವುದು, ಡ್ರೆಸ್ ಹಾಕ್ಕೊಳಬಹುದಿತ್ತು ಅಂದರೆ ನಾ ಕೇಳಲಿಲ್ಲ. ಆಸೆ ಪಟ್ಟು ತೆಗೆದುಕೊಂಡಿರೊ ಲಂಗ ಹಾಕಿಕೊಳ್ಳಲೇಬೇಕು ಅಂತ ತೀರ್ಮಾನಿಸಿ ಆಗಿತ್ತು. ಆಯಿತು, ಹಾಗೆ ಹೋದೆವು. ಕಾರಲ್ಲಿ ಜಾಸ್ತಿ ಹೊತ್ತು ಕೂತಿರೋದರಿಂದ ಏನೂ ಅನ್ನಿಸ್ತಾ ಇರಲಿಲ್ಲ. ಲಾವಾಸಾ ಬಂತು. ಅಲ್ಲಿ ಒಂದು ತಿರುವಿನಲ್ಲಿ ತುಂಬಾ ಚೆನ್ನಾಗಿ ಸೀನ್ಸ್ ಕಾಣ್ತಾ ಇದ್ದಿದ್ದರಿಂದ ಯಾವತ್ತಿನ ಹಾಗೆ ಕಾರಿನಿಂದ ಐಳಿದು ಇಬ್ಬರು ನಮ್ಮ ಪಾಡಿಗೆ ನಾವು ಕ್ಲಿಕ್ಕಿಸುತ್ತಿದ್ದೆವು. ಅವನು ಆ ಕಡೆ ಹೋದರೆ, ನಾನು ಈ ಕಡೆ ಕ್ಲಿಕ್ಕಿಸುತ್ತಾ ನಿಂತಿದ್ದೆ. ಅವನು ಯಾರೋ, ಅವನ ಕರ್ಮ. ಬೈಕಲ್ಲಿ ಗಾಡಿ ಓಡಿಸುತ್ತಾ ಹೋಗುತ್ತಿದ್ದವನು ನನ್ನ ನೋಡಿ ಇಳಿದದ್ದು ಆಯಿತು, ಬರ್ತೀಯಾ ಅಂತ ಕೇಳಿದ್ದು ಆಯಿತು. ಏನೇನೋ ಹೇಳಿದ್ದು ಆಯಿತು. ನಾನು ಷಾಕ್. ಅವನು ಇದ್ದಕಿದ್ದ ಹಾಗೆ ಎದುರಿಗೆ ಬಂದಾಗ ನನಗೆ ಒಂದು ಸಲ ಚಿಕ್ಕದಾಗಿ ಭಯದಿಂದ ಮೈ ನಡುಗಿದ್ದು ನಿಜ. ಮೊದಲ ಬಾರಿ ನನ್ನ ಜೊತೆ ಹೀಗಾದದ್ದು. ಏಷ್ಟೋ ಕಡೆ ಸುತ್ತಿದ್ದೇವೆ, ದಟ್ಟ ಕಾಡುಗಳ ನಡುವೆ, ಹೊಲ, ತೊರೆಗಳ ನಡುವೆ, ಎಲ್ಲೂ ಆಗದದ್ದು ಇವತ್ತು!  ಅವನಿಗೆ ನೀಟಾಗಿ ಮತ್ತೇರಿತ್ತು. ಅಷ್ಟರಲ್ಲೇ ಇವನು ಬಂದ, ಅವನು ಮತ್ತೆ ಬೈಕೇರಿ ಮುಂದೆ ಹೋದ.  ಆ ಬೈಕೀನವನ ಕರ್ಮ ಅಂತ ನಾನು  ಬಯ್ದುಕೊಳ್ಳುತ್ತಾ ಸುಮ್ಮನೆ ಕಾರೇರಿದೆ. ಇವನು ನನಗೆ ಬಯ್ತಾ ಇದ್ದ. ನೋಡು, ಸರಿ ಆಯ್ತಾ, ಈ ತರಹ ಹೊಸ ಜಾಗಗಳಿಗೆ ಬರ್ತಾ ಸ್ವಲ್ಪ ಎಚ್ಚರಿಕೆಲಿ ಇರಬೇಕು. ಈಗ ಅವನು ಹೋಗಿ ಸ್ನೇಹಿತರನ್ನು ಕರೆದು ತಂದರೆ ಏನು ಮಾಡೋದು ಅಂತ ಇನ್ನಷ್ಟು ಹೆದರಿಸಿ, ಏನಕೆ ನಾನು ಲಂಗ ಹಾಕಿಕೊಂಡು ಬಂದೆನೋ ಅನ್ನುವಂತೆ ಮಾಡಿ ಬಿಟ್ಟಿದ್ದ. ಅವನು ಹೇಳಿದ್ದು ನಿಜ. ನಾವು ಯಾವತ್ತೂ ಹೊಸ ಜಾಗಗಳಿಗೆ ಹೋಗ್ತಾ ಒಂದಿಷ್ಟು ಸಿದ್ಧ ಸೂತ್ರಗಳನ್ನು ಪಾಲಿಸ್ತೀವಿ. ತುಂಬಾ ಒಳಗೊಳಗೇ ಜನ ನಿಭಿಡ ಜಾಗಗಳನ್ನು ಹುಡುಕಿಕೊಂಡು ಹೋಗಲ್ಲ. ಕೆಲವೊಂದು ಕಡೆ ನಾನು ಕಾರಿನಿಂದ ಇಳಿಯೊಲ್ಲ. ….. ತದನಂತರ ಲಾವಾಸಾದ ಸುಮಾರು ಜಾಗದಲ್ಲಿ ನಾನು ಕಾರಿನಿಂದ ಇಳಿಯೋಕೆ ಹೋಗಿಲ್ಲ. ಸಿಟಿಲಿ ಇಳಿದ್ರೂ ಎಲ್ಲಾ ನನ್ನ ಕಾಲನ್ನೇ ನೋಡ್ತಾ ಇದ್ರೆ ಅಂತ ತಲೆಬಿಸಿಯಾಗಿತ್ತು. ಹಾಗೇನೂ ಇರಲ್ಲ ಅಂತ ನನ್ನೇ ನಾನು ಸಮಾಧಾನ ಮಾಡಿಕೊಂಡು ಸುತ್ತಾಡಿದ್ದೆ. ಆಮೇಲೆ ಮಾತ್ರ ಈ ತರಹ ಡ್ರೆಸ್ ನನಗೆ ನಿಭಾಯಿಸೋಕೆ ಸಾಧ್ಯವಿಲ್ಲದ್ದು ಅಂತ ಹಾಕಿಕೊಳ್ಳೊಕೆ ಹೋಗಿಲ್ಲ.

ನಾನು ಕಾಲೇಜು ಓದುವ ಸಮಯದಲ್ಲಿ ಒಂದೇ ಕಾಲಿಗೆ ಖಡಗ ಹಾಕ್ತಾ ಇದ್ದೆ. ಅದು ಯಾವತ್ತೂ ಹೊಸ ಚಪ್ಪಲ್ ತಗೊಬೇಕಾದ್ರೆ ಕಷ್ಟ ಕೊಡೋದು. ಏಷ್ಟೋ ಸಲ ಚಪ್ಪಲ್ ಅಂಗಡೀಲಿ ಅಲ್ಲಿನ ಕೆಲಸದ ಹುಡುಗರು ಚಪ್ಪಲ್ ಹಾಕಿಕೊಡುವಾಗ ಖಡಗ ಹಾಕಿದ ಕಾಲನ್ನು ಮುಂದೆ ಮಾಡಿದರೆ ಅಷ್ಟೇ, ಕ್ಷಣಾರ್ಧದಲ್ಲಿ ಅವರ ಒಂದು ಬೆರಳು ಮೀನಖಂಡ ತನಕ ಎಳೆದಿರುತ್ತಿತ್ತು. ನನಗೆ ಮೈಯಲ್ಲಾ ಉರಿ, ಅವರಿಗೆ ತಾನು ಮಾಡಿದ್ದು ಗೊತ್ತಿದ್ದೂ, ಗೊತ್ತೇ ಇಲ್ಲವರಂತೆ ಕಣ್ಣು ತಪ್ಪಿಸುತ್ತಿದ್ದದ್ದು. ಅವರಿಗೆ ಬಯ್ಯೊಕೂ ಆಗಲ್ಲ, ಚಪ್ಪಲ್ ಹಾಕಕೇ ಕಾಲು ನೀಡಿದ್ದು ನಾನೇ ತಾನೇ. ಅದಾದ ಮೇಲೆ ಸಭ್ಯಸ್ಥರಂತೆ ಮಾತಾಡೊ ಅವರಿಗೆ ಏನಂತ ಹೇಳಿದರೂ ಉಪಯೋಗವಿಲ್ಲ.

ಗೊತ್ತಿಲ್ಲ, ನಾನು ಜಾಸ್ತಿ ಈ ಕೈ, ಕಾಲುಗಳನ್ನು ಅಂದವಾಗಿ ಇಟ್ಟುಕೊಳ್ಳೊದು ಕಡಿಮೇನೆ. ಆವತ್ತು ನೀಟಾಗಿ ಬೆರಳಿಗೆ ಬಣ್ಣ ಹಚ್ಚಿಕೊಂಡು ಚೆಂದ ಚೆಂದ ಮಾಡಿಕೊಂಡು ಕ್ಲಾಸಿಗೆ ಹೋಗಿದ್ದೆ. ದಿನಾ ಚೆನ್ನಾಗಿ ಮಾತಾಡ್ತಾ ಇದ್ದ ಸ್ನೇಹಿತ ಇದ್ದಕಿದ್ದ ಹಾಗೆ ಬೆರಳುಗಳನ್ನು ಹಿಡಿದುಕೊಂಡು ತುಂಬಾ ಚೆನ್ನಾಗಿದೆ ಅಂತ ಹೇಳಕೆ ಪ್ರಾರಂಭಿಸಿದ. ನಾನು ಸೀದಾ ಕೈ ಕೊಡವಿ ಅಲ್ಲಿಂದ ಎದ್ದೆ. ಅವನಿಗೆ ತಾನು ಮಾಡಿದ್ದು ಗೊತ್ತಾದ್ರೂ ಏರಿದ್ದು ಕೆಳಗೆ ಇಳಿದಿರಲಿಲ್ಲ.  ಮನೆಗೆ ವಾಪಸ್ ಆದಮೇಲೆ ಬಣ್ಣಗಳನ್ನು ತೆಗೆದು ಹಾಕಿದ್ದೆ. ಸೀದಾ ಸಾದಾ ಕೈಗಳೇ ಚೆಂದ. ಕೈ ನೋಡಿ ಯಾರು ಯಾರಿಗೋ ಮೈ ಬಿಸಿ ಏರೋ ಕತೆಯೇ ಬೇಡ. ಆಮೇಲೆ ಅವನೊಡನೆ ನಾನು ಮಾತಾಡಿದ್ದು ಕಡಿಮೆನೆ.

ಆ ದೊಡ್ಡ ಕಂಪನಿಯಲ್ಲಿ ಸಣ್ಣ ಪ್ರಾಜೆಕ್ಟ್ ಕೊಡಿಸಿದ ಆ ಮನುಷ್ಯ ಚೆನ್ನಾಗೇ ಇದ್ದ. ನಾನೇನು ಅವನ ಜೊತೆ ಕೆಲಸ ಮಾಡ್ತಾನೂ ಇರಲಿಲ್ಲ. ತುಂಬಾ ಚೆನ್ನಾಗಿ ವರ್ತಿಸುತ್ತಿದ್ದ ಆತ, ಅವತ್ತು ಅವನ ಛೇಂಬರಿಗೆ ಏನೋ ಕೇಳಲು ಹೋದಾಗ ಶೇಕ್ ಹ್ಯಾಂಡ್ ಮಾಡಿದ್ದ. ಅವನ ಮಧ್ಯ ಬೆರಳು ನನ್ನ ಹಸ್ತಕ್ಕೆ ತಾಗಿತ್ತು. ನನಗೆ ವಿಚಿತ್ರ ಅನ್ನಿಸಿ ಏನನ್ನು ಹೇಳದೆ ಸುಮ್ಮನೆ ಬಂದಿದ್ದೆ. ಅವನು ನನ್ನ ಹತ್ರ ಬೇರೆ ತರಹದ ಫೇವರ್ ಕೇಳಿದ್ನಾ ಗೊತ್ತಿಲ್ಲ.  ಸುಮ ಸುಮ್ಮನೆ ಡಿಕೋಡ್ ಮಾಡಬೇಡ ಅಂತ ನನಗೆ ನಾನೇ ಹೇಳಿಕೊಂಡು ಸುಮ್ಮನಾಗಿದ್ದೆ. ಆಮೇಲೆ ಮೇಸೇಜಿನಲ್ಲಿ ನಿಮಗೆ ಮುಂದೆವರಿಯುವ ಇಷ್ಟವಿದ್ದಲ್ಲಿ ಮೇಸೇಜ್ ಹಾಕಿ ಅಂತ ಬರೆದುಕೊಂಡಿದ್ದು ನೋಡಿ ಕನ್ಫರ್ಮ್ ಆಗಿತ್ತು. ನಾನು ದೊಡ್ಡದಾಗಿ ನಕ್ಕು, ಈ ಹುಡುಗರ ಕರ್ಮ ಅಂತ ಇಗ್ನೋರ್ ಮಾಡಿದ್ದೆ.  ನನಗೆ ಏನು ಗೊತ್ತಾಗಿಲ್ಲ ಅನ್ನೋ ತರಹ ನಾನು ಇದ್ದಿದ್ದಕ್ಕೆ ಅಥವಾ ಬೇರೆ ಇನ್ಯಾವ ಕಾರಣಕ್ಕೊ ಆಮೇಲೆ ಸರಿಯಾಗೇ ವರ್ತಿಸುತ್ತಿದ್ದ.

ಅವತ್ತ್ಯಾವುದೋ ಒಂದಿನ ಫ಼್ಲೀಕರಿನಲ್ಲಿ ಎಲ್ಲರೂ ಪಾದಗಳ ಫೋಟೋ ಹಾಕ್ಕೊಳ್ತಾರೆ ಅಂತ ನೋಡಿ ನನಗೂ ಆಸೆಯಾಗಿ ಚೆನ್ನಾಗಿ ಕ್ಲಿಕ್ಕಿಸಿಕೊಂಡು ಹಾಕಿದ್ದೆ. ಮಾರನೇ ದಿನ ಇನ್ನೊಬ್ಬ ಎಡವಟ್ಟು ತಲೆಏರಿ ಮಾಡಿದ ಕಮೆನ್ಟ್ ಓದಿ ಆ ಚಿತ್ರನೇ ತೆಗೆದು ಹಾಕಿದ್ದೆ.  ಅದು ಹೇಗೆ ಮುದ್ದು ಮುದ್ದಾಗಿ ಕೈ, ಪಾದಗಳ ಚಿತ್ರಗಳನ್ನು ಹಾಕಿಕೊಳ್ತಾರೆ ಅಂತ ನನಗೆ ಗೊತ್ತಾಗಿಲ್ಲ.  ಅದಕ್ಕೆ ‘ಸೆಕ್ಸಿ’ ‘ಹಾಟ್’ ಅಂದರೆ ಮೈ ಉರಿಯುವ ನನಗೆ,  ಈ ತರಹದ ನನ್ನದಲ್ಲದ ಜಗತ್ತು ಬೇಡ, ಹೋಗಿ ಸಿಕ್ಕಿ ಹಾಕಿಕೊಳ್ಳಬಾರದೆಂದು ಸುಮ್ಮನಿರುತ್ತೇನೆ.

ನಾನು ಯಾವತ್ತೂ ಚೆನ್ನಾಗಿ ಡ್ರೆಸ್ ಮಾಡಿಕೊಳ್ಳುವ ಹುಡುಗಿಯರನ್ನು ನೋಡಿದಾಗ ಯೋಚಿಸ್ತಾ ಇರ್ತೇನೆ. ಇವರಿಗೆ ಈ ತರಹದ ಅನುಭವಗಳು ಆಗಿರಬೇಕಲ್ಲವಾ ಅಂತ. ಅದನ್ನೆಲ್ಲಾ ಹೇಗೆ ನಿಭಾಯಿಸುತ್ತಾರೋ ಅಂತ. ಈ ಚಿಕ್ಕ ಫ್ರಾಕುಗಳನ್ನು ಹಾಕಿಕೊಂಡು ಓಡಾಡುವ ಹುಡುಗಿಯರ ದಿಟ್ಟತನಕ್ಕೆ ನನ್ನದೊಂದು ಸಲಾಂ ಇದ್ದೇ ಇರುತ್ತೆ. ಅವರಿಗೂ ಗೊತ್ತು, ಸುತ್ತಲಿನ ಹುಡುಗರು ಅವರನ್ನು ಕಣ್ಣಲ್ಲೇ ತಿಂದು ಹಾಕಿರುತ್ತಾರೆ ಅಂತ. ಆದರೂ ತಮ್ಮನ್ನು ಯಾರು ನೋಡುತ್ತಿಲ್ಲ ಅಂತ ಓಡಾಡುತ್ತಿರುತ್ತಾರೆ. ಹಾಗೇನೇ ಸುಮಾರು ಹುಡುಗಿಯರಿಗೂ ತಾನು ಮಾಡ್ ಮತ್ತು ಸೆಕ್ಸಿ ಅನ್ನಿಸಿಕೊಳ್ಳುವುದು ತುಂಬಾ ಇಷ್ಟದ ವಿಷಯವು ಹೌದು.  (ಇದು ಹುಡುಗರಿಗೂ ಅನ್ವಯವಾಗುತ್ತೆ) ಹಾಗಂತ ಮನೆಗೆ ಹೋಗ್ತಾ ಕಾರಿನಲ್ಲಿ, ಆಟೋಗಳಲ್ಲಿ ಕಾಲುಗಳ ಮೇಲೊಂದು ಸ್ಕಾರ್ಫ್ ಹಾಕಿ ಕೊಳ್ಳುವುದನ್ನು ಮರೆಯುವುದಿಲ್ಲ. ಸಂಜೆಯಾದ ಮೇಲೆ ಜೊತೆಗೆ ಇಲ್ಲದೆ ಇಬ್ಬರೇ ಮಾಡ್ ಡ್ರೆಸ್ ಗಳಲ್ಲಿ ತಿರುಗಾಡುವುದಿಲ್ಲ.

ನನಗೆ ಮಾತ್ರ ನನ್ನ ಕಡೆ ಮೈ ಬಿಸಿ ಏರಿಕೊಂಡು ನೋಡುವ ಕಣ್ಣುಗಳು ಇಷ್ಟವಾಗೊಲ್ಲ. ಆಫೀಸಿನಲ್ಲಿ ಟೀಂ ನಲ್ಲಿ ಒಬ್ಬಳೇ ಹುಡುಗಿಯಾಗಿರುವುದರಿಂದ ಡ್ರೆಸ್ ಬಗ್ಗೆ ಸ್ವಲ್ಪ ಕಾಳಜಿಯಿರುತ್ತೆ. ಜಾಸ್ತಿ ಉದ್ದ ಕೈಯನ ಡ್ರೆಸ್ಗಳು, ನೋ ಡೀಪ್ ನೆಕ್ ಅಂಗಿಗಳು. ತುಟಿಗೂ ಗಾಢವಾದ ರಂಗು ಬಳಿಯುವುದಿಲ್ಲ. ಮಾತಾಡುವಾಗ ದೇಹದ ಯಾವುದೇ ಅಂಗದ ಮೇಲೂ ದೃಷ್ಟಿ ಹೋಗಬಾರದು. ನನಗೆ ನೀಟಾಗಿ ಚೆನ್ನಾಗಿ ಕಾನ್ಫಿಡೆನ್ಸ್ ಕಾಣಬೇಕೇ ಹೊರತು ‘ಆ ತರಹ’ ಚೆನ್ನಾಗಿ ಕಾಣುವುದು ಬೇಕಿಲ್ಲ. ಯಾವತ್ತೋ ಹೊಸ ಅಂಗಿ ಹಾಕಿ ಕೊಂಡು ಹೋದಾಗ, ಸ್ನೇಹಿತರು ‘ಚೆನ್ನಾಗಿ ಕಾಣ್ತಿಯಾ’ ಅಂದಾಗ ಸಣ್ಣಗೆ ನಕ್ಕು, ಅವರ ಕಣ್ಣಲ್ಲಿ ಇಣುಕಿ ‘ ಸೆಕ್ಸಿ ಮತ್ತು ಹಾಟ್ ಅಲ್ಲ’  ಅಂತ ಕನ್ಫರ್ಮ್ ಮಾಡಿಕೊಳ್ತೇನೆ. ನನಗೆ ಯಾವತ್ತೂ ನಾನು ಇಂಪಾರ್ಟೆಂಟ್, ನನ್ನ ಕೆಲಸ ಮತ್ತು ವಿಚಾರಗಳು. ನಾನು ಅಂದರೆ ದೇಹದ ಭಾಗಗಳು ಅಥವಾ ಹೊರಗಿನ ಅಂಗಿಯಿಂದ ಕೂಡಿದ ರೂಪವಲ್ಲ.

ಮತ್ತೊಂದು ಮಜಾ ವಿಷ್ಯ ಅಂದರೆ, ನಾನು ಮುಂಬಯಿ ಬರೋ ತನಕ ಈ ಅಲಂಕಾರಕ್ಕೂ ನನಗೂ ಸಂಭಂಧವೇ ಇರಲ್ಲಿಲ್ಲ. ಮಧ್ಯ ಮಧ್ಯ ತಲೆ ಬಾಚುವುದು, ಬಸ್ಸಿನಲ್ಲಿ ಅಫೀಸಿಗೆ ಬಂದಾದ ಮೇಲೆ ಫ್ರೆಶ್ ಅಪ್ ಆಗುವುದು, ಈ ಕಾಡಿಗೆ, ಕ್ರೀಮುಗಳು ಇದನ್ನೆಲ್ಲಾ ಉಪಯೋಗಿಸ್ತಾನೆ ಇರಲಿಲ್ಲ. ನನಗೆ ಮೊದಲಿನಿಂದಲೂ ಈ ಚೆನ್ನಾಗಿ ಕಾಣುವ ಪ್ರಕ್ರಿಯೆ ಅಂದರೆ ಇಷ್ಟವಿರಲಿಲ್ಲ. ಸ್ವಲ್ಪ ಚೆನ್ನಾಗಿ ಮಾಡಿಕೊಂಡರೂ ಯಾರದ್ದೋ ಕಣ್ಣು ಬಿದ್ದು, ಅವನಿಗೆ ಮೈ ಬಿಸಿ ಏರುವುದು ನನಗೆ ಬೇಕಾಗಿರಲಿಲ್ಲ. ನನಗೆ ‘ಹೆಣ್ಣು’  ಅಂತ ನೋಡಿದರೆ ಈಗಲೂ ಕೋಪ ಬರುತ್ತೆ.  ಎಲ್ಲರೂ ಮನುಷ್ಯರು ಅಂತ ನೋಡಿ ಅಂತ ನಾನು.  ಇಲ್ಲಿ ಬಂದು ಮನೇಲಿದ್ದಾಗ ನೆಟ್ನಲ್ಲಿ ಸುಮಾರು ಜನ ಸ್ನೇಹಿತರಾದ ಮೇಲೆ, ಈ ಡೆಕಾರ್ ಬ್ಲಾಗುಗಳನ್ನೆಲ್ಲಾ ಓದುತ್ತಾ ಇದ್ದ ಹಾಗೆ ಒಂದು ವಿಷ್ಯ ಅರ್ಥ ಆಯಿತು. ಅಲಂಕಾರ ಮಾಡಿಕೊಳ್ಳೊದು ತಪ್ಪೇನು ಅಲ್ಲ ಅಂತ. ಅದು ಸಹ ಒಂದು ಅಭಿವ್ಯಕ್ತಿ. ನಾವೇನು ಡ್ರೆಸ್ ಹಾಕಿಕೊಳ್ತೆವೆ, ಹೇಗೆ ನಮ್ಮನ್ನು ನಾವು ತೋರಿಸಿಕೊಳ್ಳುತ್ತೇವೆ, ಇದೆಲ್ಲದೂ ಸೇರಿ ಒಂದು ವ್ಯಕ್ತಿತ್ವ ಅಂತ ಬರುತ್ತೆ ಅಂತ. ನಾನು ಹೇಗೆ ಇರ್ತೇನೆ ಅದು ನನ್ನ ಜೀವನದ ಬಗೆಗಿನ ಒಲುವು ತೋರಿಸುತ್ತೆ ಅಂತ. ಕೆಲವೊಬ್ಬರಿಗೆ ‘ಸೆಕ್ಸಿ’ ಅಂತ ಬಿಂಬಿಸಿಕೊಳ್ಳುವುದು ಇಷ್ಟ, ಮತ್ತೊಬ್ಬರಿಗೆ ‘ಆರ್ಟಿ’ ಅಂತ, ಅವರವರ ಅಭಿರುಚಿಗೆ ತಕ್ಕಂತೆ ಉಡುಪುಗಳನ್ನು ಹಾಕಿ ಕೊಳ್ತಾರೆ ಅಂತ.

ನಾನು ಈಗ ಜಾಸ್ತಿ ಅಲಂಕಾರ ಮಾಡಿಕೊಳ್ಳದಿದ್ದರೂ ನನ್ನನ್ನು ನಾನು ಹೇಗೆ ನೋಡಿಕೊಳ್ಳಬೇಕೆಂದು ಗೊತ್ತಿದೆ. ಮೊದಲು ಹ್ಯಾಂಡ್ ಶೇಕ್ ಮಾಡಲೂ ನಿರಾಕರಿಸುತ್ತಿದ್ದ ನಾನು ಈಗ ಸಹಜವಾಗಿಯೇ ಕೈ ಕುಲುಕುತ್ತೇನೆ. ಕೈ ಮುಟ್ಟಿ ಅವನಿಗೇನೋ ಅನ್ನಿಸಿದರೆ ಅದು ಅವನ ತಲೆಬಿಸಿ. ನನಗಿಲ್ಲ. ಎದುಗಿರುವನು ಮೈಯೆಲ್ಲ ಮುಚ್ಚಿಕೊಂಡಿದ್ದರೂ ಸ್ವಲ್ಪ ಜಾಸ್ತಿ ನೋಡ್ತಾ ಇದ್ದರೆ ಕೈ ಆಡಿಸಿ, ಏನಾಯ್ತೋ ಮಗಾ ಅಂತ ಕೇಳಿ ಬಿಡ್ತೇನೆ. ಮುಂಬಯಿನಲ್ಲಿ ಹುಡುಗಿಯರಿಗೆ ತುಂಬಾ ಸೇಫ್ ಇರೋ ಕಾರಣ ಎಲ್ಲಿ ಹೋದ್ರು ಬೆಂಗಳೂರಿನ ತರಹ, ಶಿರಸಿಯ ತರಹದ ಆಸೆ ಹತ್ತಿದ ಬೆಂಕಿಯ ಕಣ್ಣುಗಳು ಕಾಣುವುದು ತುಂಬಾನೇ ಕಮ್ಮಿ.  ಆ ಕಾರಣ ತಲೆಬಿಸಿ ಇಲ್ಲದೇ ಆರಾಮಾಗಿ ಖುಶಿಯಿಂದ ಓಡಾಡ್ಕೊಂಡು ಇರಬಹುದು.

ಕಾಗೆಯೊಂದು ಹಾರಿಬಂದು…..

ಏಪ್ರಿಲ್ 28, 2010

ಮೊನ್ನೆ ಕಾಗೆ ತ್ರೀಕೋಣಾಕೃತಿಯ ತಂತಿಯೊಂದನ್ನು ಕಚ್ಚಿಕೊಂಡು ನಿಂತಿತ್ತು. ಅದನ್ನು ನೋಡಿ ನಂಗಾಶ್ಚರ್ಯ. ಅಯ್, ಕಾಗೇಯಾವಾಗಿಂದ ಇಂಜಿನೀಯರ್ ಆಯಿತು ಅಂತ. ಹಿಂದಿನ ದಿನ ಇನ್ನೊಂದು ತಂತಿ ಕಚ್ಚಿಕೂತಿತ್ತು. ಆ ತಂತಿಯ ಒಂದು ತುದಿ ಸುರುಳಿಯ ರೂಪದಲ್ಲಿತ್ತು. ಇವತ್ತು ಕಚ್ಚಿಹಿಡಿದ ತ್ರಿಕೋಣದ ಮೂರುಬದಿಯಲ್ಲೂ ಒಂದೊಂದು ಸುರುಳಿಯಿತ್ತು! ಹೋಗಲಿ ಗೂಡು ಎಲ್ಲಿ ಕಟ್ಟುತ್ತಿದೆ ಅಂತ ನೋಡೋಣ ಅಂತ ಸ್ವಲ್ಪ ಹೊತ್ತು ಕಾದೆ. ಆ ಕಾಗೆಯಮ್ಮ/ಪ್ಪ ಹಾರಿ ಹೋಗಿ ಎದುರಿಗಿನ ಎತ್ತರದ ಅಶೋಕಮರದ ಮೇಲೆ ಹೋಗಿ ಕುಂತಿತು. ಸ್ವಲ್ಪ ಆಕಡೆ ಈಕಡೆ ಕಣ್ಣಾಯಿಸಿ ಅಲ್ಲೇ ಎಲೆಗಳ ಮರೆಯಲ್ಲಿ ಒಂದಾಯಿತು. ಅದಕ್ಕೆ ಗೂಡು ಕಟ್ಟಲು ಆ ಮರವೇ ಬೇಕಿತ್ತಾ ಅಂತ ಬಯ್ದುಕೊಂಡೆ. ಏಕೆಂದರೆ ಪ್ರತಿ ಮಳೆಗಾಲದಲ್ಲಿ ಆ ಮರ ಗಾಳಿ-ಮಳೆಗೆ ಬಗ್ಗುತ್ತದೆ ಮತ್ತು ಅದರ ಮೇಲಿನ ಭಾಗವನ್ನು ಕಡಿದು ಹಾಕುತ್ತಾರೆ. ಹಿಂದಿನ ಸಲ ಹೀಗೆ ಗೂಡು ಕಟ್ಟಿಕೊಂಡ ಹಕ್ಕಿಗಳ ಗೂಡು ಮೊಟ್ಟೆ/ಮರಿಗಳ ಸಮೇತ ನೆಲಪಾಲಾಗಿತ್ತು. ಆದರೂ ಆ ಮರದ ಬುಡ(ಕಾಂಡ) ಉಳಿದ ಅಕ್ಕಪಕ್ಕದ ಮರಗಳಿಗಿಂತ ದಪ್ಪಗೆ ಬೆಳದಿದ್ದು ಕಂಡು ಸ್ವಲ್ಪ ಸಮಾಧಾನ ಮಾಡಿಕೊಂಡೆ.

ನಂಗೆ ಸಾಧ್ಯ ಆಗಿದ್ರೆ ಆ ಕಾಗೆಯ ಗೂಡು ನೋಡುತ್ತಿದ್ದೆ. ಆದು ಆ ತಂತಿಯನ್ನು ಹೇಗೆ ಉಪಯೋಗಿಸಿದೆ ಅಂತ. ಆದರೆ ನಂಗೆ ಮೇಲೆ ಹಾರಕೆ ಬರೊಲ್ವೆ 😦 ಹೋಗಲಿ ಟೆಲಿಸ್ಕೋಪ್ ಕ್ಯಾಮೆರಾ ಇದ್ದರಾದ್ರೂ ಒಂಚೂರಾದ್ರೂ ಕಾಣಿಸ್ತಿತ್ತೇನೋ, ಆದ್ರೆ ಅದೂ ಇಲ್ಲ. ಹೋಗಲಿ ಬಿಡಿ.

ಆದ್ರೆ ಈ ಕಾಗೆ ಗಂಡ-ಹೆಂಡತಿಯ ಕಾರಣ ನನ್ನ ನೀರುದಾನಿ ಕುಲಗೆಟ್ಟು ಹೋಗಿದೆ. ನೀರಲ್ಲಿ ನಾರು, ಕಡ್ಡಿ, ಅನ್ನ, ತಿಂಡಿ ತಂದು ಹಾಕಿ-ಹಾಕಿ ಬೇರೆ ಹಕ್ಕಿಗಳಿಗೆ ನೀರು ಕುಡಿಯಲು ಸಾಧ್ಯವಾಗದಂತೆ ಮಾಡಿವೆ. ಜೊತೆಗೆ ದಿನಾ ಒಂದು ಮೊಟ್ಟೆ ತಂದು ನಮ್ಮ ಮನೆಯೆದುರಿಗಿನ ಪಟ್ಟಿಯ ಮೇಲೆ ಕೂತು ತಿನ್ನುತ್ತವೆ. ಪಾಪ! ಅದು ಗುಬ್ಬಿದೊ, ಪಾರಿವಾಳದ್ದೊ ಇನ್ಯಾವ ಹಕ್ಕಿದೋ. ಮೊನ್ನೆ ನೀರುದಾನಿಯಲ್ಲಿ ಹಕ್ಕಿ ಮರಿಯದೊಂದರ ’ಹೆಣ’ ತೇಲುತ್ತಿತ್ತು. ಅದಕ್ಕೇ, ಈ ಮಳೆಗಾಲದಲ್ಲಿ ಮರಕಡಿದು ಬಿದ್ದಾಗ ಮರಿಗಳನ್ನು ಕಳೆದುಕೊಂಡ ಮೇಲೆ ಇವಕ್ಕೆ ತಕ್ಕ ಶಿಕ್ಷೆಯಾಗುತ್ತೆ ಅಂತ ನಾನು ಸುಮ್ಮನೆ ಅಂದುಕೊಳ್ಳುತ್ತೇನೆ.

ಯಾಕೊ ಈ ಕಾಗೆಗಳನ್ನು ಕಂಡಾಗ ಗುಬ್ಬಿ ಕಂಡಷ್ಟು ಖುಶಿಯಾಗುವುದಿಲ್ಲ. ಅವು ಕಪ್ಪಗಿದೆ ಅನ್ನುವುದಕ್ಕೆ ಅಲ್ಲ ಎಂದು ಅಂದುಕೊಳ್ಳುತ್ತೇನೆ. ಏಕೆಂದರೆ ಪಾರಿವಾಳಗಳು ಸ್ವಲ್ಪ ಕಪ್ಪನ್ನೇ ಹೋಲುವಂತಿರುತ್ತವೆ. ಇವು ಮಾಂಸಹಾರಿಗಳೆಂದಾ ಅಥವಾ ಮಾಟ, ಪ್ರೇತವನ್ನು ನೆನಪಿಸುತ್ತವೆಯೆಂದಾ (’ಫೂಂಕ್’ಅಲ್ಲಿ ತೋರಿಸಿದಂತೆ), ನಂಗೂ ಸರಿ ಗೊತ್ತಿಲ್ಲ. ಆದರೆ ಕಿಚನ್ ಕಿಟಕಿಯಲ್ಲಿ ಅನ್ನ ಖಾಲಿಯಾದಾಗ ಬಂದು ಕಾಂವ್ ಕಾಂವ್ ಅಂದರೆ ಪಾಪ ಕಾಣುತ್ತೆ. ಉಳಿದ ಇಡ್ಲಿಯೋ, ರೊಟ್ಟಿಯೊ ತಟ್ಟೆಗೆ ಹಾಕುತ್ತೇನೆ.

ಹಾಂಗೆ ನಂಗೆ ಒಂದು ಸಮಸ್ಯೆ ಬಂದಿದೆ. ಈ ಕಾಗೆಗಳಲ್ಲಿ ಯಾವುದು ಗಂಡು, ಮತ್ತ್ಯಾವುದು ಹೆಣ್ಣು ಎಂದು. ಎರಡು ಸುಮಾರು ಒಂದೇ ತರಹ ಕಾಣುತ್ತಿತ್ತು. ಗುಬ್ಬಿಗಳಲ್ಲಾದರೆ ಗಂಡು ಗುಬ್ಬಿಯ ತಲೆಮೇಲೆ ಕಪ್ಪಗಿನ ಗುರುತಿರುತ್ತದೆ. ಪಾರಿವಾಳದಲ್ಲೂ ಸಹ ಗುಬ್ಬಿಗಳ ತರಹ ಗಂಡು ಸ್ವಲ್ಪ ದಪ್ಪವಾಗಿರುತ್ತದೆ. ಹೆಣ್ಣು ಸ್ವಲ್ಪ ನಾಜೂಕು ಮತ್ತು ಗಂಡಿಗಿಂತ ಬಹು ಬೇಗ ಹೆದರಿ ಓಡಿ ಹೋಗುತ್ತದೆ. ಈಗ ಇದನ್ನು ಬರೆದಾದ ಮೇಲೆ ನೆಟನಲ್ಲಿ ಗೂಗ್ಲಿಸಬೇಕು.

ಮತ್ತೆ ಸಿಗ್ತೇನೆ.

ಪಿಂಕ್ ಚೆಡ್ಡಿ

ಫೆಬ್ರವರಿ 12, 2009

ಹ್ಹ ಹ್ಹ ಹ್ಹಾ , ಏಷ್ಟು ಚೆನ್ನಾಗಿರೊ concept ಅಲ್ವಾ ?
ನಂಗೆ ಈ ವಿಷಯ ಗೊತ್ತದಾಗಿನಿಂದ ಮತ್ತು ಆ ಪೋಸ್ಟರ್ ನೋಡಿ ನಗ್ಯಾಡ್ತಾ ಇದ್ದೇನೆ. ಫಸ್ಟ್ ಟೈಮ್ ಪಬ್ಲಿಕ್ ಆಗಿ ಚಡ್ಡಿ ಅದೂ ಹುಡುಗಿಯರ ಚೆಡ್ಡಿ ಬಗ್ಗೆ ಮಾತಾಡೊ ಹಾಗಾಯ್ತು. ಸಮಾಜದಲ್ಲಿ ಚೆಡ್ಡಿಗೂ ಒಂದು ಗೌರವದ ಸ್ಥಾನಮಾನ ಬಂತು. ನಂಗೆ ಗೊತ್ತಿರೊ ಹುಡುಗಿಯರಿಗೆಲ್ಲಾ ನಿನ್ನ ಪಿಂಕ್ ಚೆಡ್ಡಿ ಕಳಿಸಿದ್ಯಾ ಅಂತ ಕಿಚಾಯಿಸ್ತಾ ಇದ್ದೇನೆ. ಇಲ್ಲಾ ಅಂದ್ರೆ ಯಾರ ಹತ್ರನೂ ಡೈರೆಕ್ಟ್ ಆಗಿ ಚೆಡ್ಡಿ ವಿಷಯ ಎತ್ತೊ ಹಾಗಿರಲಿಲ್ಲ. ಶಾಂತಂ ಪಾಪಂ.
ಈಗ ಯಾರದ್ರೂ ಚೆಡ್ಡಿವಾಲಾಗಳು ಅಂದ್ರೆ ಯಾವ ಚೆಡ್ಡಿವಾಲಾಗಳು ಅಂತ ಕೇಳಬೇಕಾಯ್ತು. ಕೇಸರಿನೊ, ಪಿಂಕೊ, ಕೆಂಪೊ, ನೀಲಿನೊ………. ಅಂತೆಲ್ಲಾ.
ಈಗ ನೋಡಿ ಪಿಂಕ್ ಚೆಡ್ಡಿ ಅನ್ನೊದು ಸ್ತ್ರೀ ಶಕ್ತಿಯ ಸಂಕೇತ !
ಪಬ್ ಗೆ ಹೋಗಿ ಕುಡಿದು ಬರೊದು ಸ್ತ್ರೀ ಸಮಾನತೆಯ ಪ್ರತೀಕ !!
ಹೋಗ್ಲಿ ಬಿಡಿ. ಆದ್ರೆ ಈ ತರಹದ ಹೋರಾಟಗಳು ಚೆಲ್ಲಾಪಿಲ್ಲಿಯಾಗಿರೊ ಜನರನ್ನು ಒಂದು ಸೂತ್ರದಲ್ಲಿ ಬಂಧಿಸಿ ಒಂದೇ ಸೂರಿನಡಿ ಏಳೆದು ತರುತ್ತದೆ. ಅದು ಖುಷಿಯ ವಿಷಯ. ಹಾಗೇನೆ ಸಮೂಹ ಮಾಧ್ಯಮಗಳಲ್ಲಿ ಹೆಚ್ಚುತ್ತಿರುವ ನೆಟ್ (social networking sites, blogs,..) ಪ್ರಾಬಲ್ಯವನ್ನು ತೋರಿಸುತ್ತದೆ.

ಪಿಂಕ್ ಚೆಡ್ಡಿಯ ಬ್ಲಾಗ್

ಇನ್ಕಂ ಟ್ಯಾಕ್ಸ್ ನಿಂದ ನವೋದಯದವರೆಗೆ

ಜನವರಿ 23, 2009

ಮೊನ್ನೆ ಮನೇಲಿ ಟ್ಯಾಕ್ಸ್ ಹೇಂಗೆ ಉಳಿಸಿಕೊಳ್ಳಬಹುದು ಎಂದು ಚರ್ಚೆ ಆಗ್ತಾ ಇತ್ತು. ನಂಗೆ ಇದು ಯಾಕೊ ಸರಿ ಬರಲ್ಲ. ಸರಕಾರಕ್ಕೆ ನಾವು ದುಡ್ಡು ಕಟ್ಟದೇ ಇದ್ರೆ ಅದಕ್ಕೆ ಬೇರೆ ಎಲ್ಲಿಂದ ದುಡ್ಡು ಬರುತ್ತೆ, ಸರಕಾರ ನಮ್ಮದು ತಾನೇ, ಟ್ಯಾಕ್ಸ್ ಉಳಿಸುವ ನಾವೇ ನಾಳೆ ಸರಕಾರ ರೋಡ್ ಸರಿ ಮಾಡಿಲ್ಲ, ಸಬ್ಸಿಡಿ ಕೊಡ್ತಿಲ್ಲ ಎಂದೆಲ್ಲ ಖ್ಯಾತೆ ತೆಗಿತೇವೆ ಅಂತ ನಾನು. ನಾವು ಕಷ್ಟ ಪಟ್ಟು ದುಡಿಯೊ ದುಡ್ಡು ಯಾರೋ ರಾಜಕಾರಣಿಗಳ ಹೊಟ್ಟೆಗೆ ಹೋಗುತ್ತೆ, ಹಾಂಗಾಗಿ ಆದಷ್ಟು ಕಡಿಮೆ ಟ್ಯಾಕ್ಸ್ ಕಟ್ಟಬೇಕು ಅಂತ ಅವರು. ಉಫ್ ! ಸರಪಳಿಯ ಎಲ್ಲ ಕೊಂಡಿಗಳು ಗಟ್ಟಿ ಇದ್ದರಷ್ಟೆ ಅದಕ್ಕೆ ಬಲ ಬರುವುದು, ಭದ್ರತೆ ಸಿಗುವುದು. ಇಲ್ಲಿ ಎಲ್ಲ ಕೊಂಡಿಗಳು ಸ್ವಾರ್ಥವನ್ನೇ ನೋಡಿಕೊಳ್ಳುತ್ತ ಕಳಚಿಕೊಳ್ಳುವ ತಯಾರಿ ನಡೆಸಿವೆ.

ನಂಗ್ಯಾಕೋ ಇದ್ದಕಿದ್ದಂತೆ ನವೋದಯ ನೆನಪಾಯಿತು, ನಾನು ಸತತ ಐದು ವರ್ಷ ಭಾರತದ ಪ್ರತಿಯೊಬ್ಬ ಪ್ರಜೆಯು ಕಟ್ಟುವ ಟ್ಯಾಕ್ಸ್ ನ ಹಣದ ಒಂದು ಭಾಗದಿಂದ ಬದುಕಿ ಬೆಳೆದಿದ್ದೇನೆ ಎಂದು ಅನ್ನಿಸತೊಡಗಿತು. ನಿಜ, ಭಾರತ ದೇಶ ಕೇವಲ ನನ್ನ ಬುದ್ಧಿಮತ್ತೆಗಾಗಿ ನನಗೆ ಅನ್ನ, ನೀರು, ವಿದ್ಯಾಭ್ಯಾಸ… ಎಲ್ಲ ಕೊಟ್ಟು ಪೊರೆದಿದೆ, ಇವತ್ತು ನಾನೇನಾಗಿದ್ದೇನೊ ಅದರಲ್ಲಿ ಇಡೀ ಭಾರತ ದೇಶದ ಕೊಡುಗೆಯಿದೆ. ನಾನು ಒಂದು ಐದು ವರ್ಷ ಅಕ್ಷರಶಹ ದೇಶದ ಮಗಳಾಗಿ ಹೋಗಿದ್ದೆ.

ನಮ್ಮ ಭಾರತ ಸರಕಾರ ಪ್ರತಿ ಜಿಲ್ಲೆಗೊಂದರಂತೆ ಜವಾಹರ ನವೋದಯ ವಿದ್ಯಾಲಯಗಳೆಂಬ ರೆಸಿಡೆನ್ಸಿ ಸ್ಕೂಲ್ ಗಳನ್ನು ನಡೆಸುತ್ತಿದೆ. ಭಾರತಾದ್ಯಂತ ಸಿಬಿಎಸ್ಸಿ ವತಿಯಿಂದ ೫ನೇ ತರಗತಿಯಲ್ಲಿ ಓದುವ ವಿದ್ಯಾರ್ಥಿಗಳ ಐಕ್ಯೂ ಟೆಸ್ಟ್ ನಡೆಸಿ ಪ್ರತಿಭಾವಂತ ಮಕ್ಕಳ ಪಟ್ಟಿ ತಯಾರಿಸಲಾಗುತ್ತದೆ. ಹೀಗೆ ಹೆಕ್ಕಿ ತೆಗೆದವರಿಗೆ ಕೇಂದ್ರ ಸರಕಾರ ಏಳು ವರ್ಷಗಳ ಕಾಲ ಉಚಿತ ಶಿಕ್ಷಣ ಹಾಗೂ ವಸತಿಯನ್ನು ಕಲ್ಪಿಸುತ್ತದೆ. ಸಿಬಿಎಸ್ಸಿ ಪುಸ್ತಕ, ಪಟ್ಟಿ-ಪೆನ್-ಪೆನ್ಸಿಲ್, ಯುನಿಫಾರಂ, ಶೂ, ಚಪ್ಪಲಿ, ಹಾಸಿಗೆ ಬಟ್ಟೆಗಳು, ಮೈ-ಬಟ್ಟೆ ಸಾಬೂನು, ನೀಲಿ, ತಲೆಗೆ ಎಣ್ಣೆ, ಸೂಜಿ ದಾರ……. ಹೀಗೆ ಎಲ್ಲವನ್ನು ಉಚಿತವಾಗಿ ನೀಡಲಾಗುತ್ತದೆ. ಎಲ್ಲವೂ ಒಳ್ಳೆಯ ಕ್ವಾಲಿಟಿದೇ. ಸ್ಪೋರ್ಟ್ಸನಲ್ಲಿ ಚೆನ್ನಾಗಿದ್ದವರಿಗೆ ಸ್ಪೊರ್ಟ್ಸ ಶೂ ಮತ್ತು ಎಕ್ಸಟ್ರಾ ಪ್ರೋಟೀನ್ ಫುಡಗಳು. ನಿಪುಣರಿದ್ದರೆ ಅವರನ್ನು ನ್ಯಾಶನಲ್ ಲೆವೆಲ್ ತನಕ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುತ್ತದೆ. ಮ್ಯೂಸಿಕನಲ್ಲಿ ಆಸಕ್ತಿ ಇದ್ದವರಿಗೆ ಬಗೆ ಬಗೆಯ ವಾದನಗಳು ಹಾಗೂ ಶಾಸ್ತ್ರೀಯ ಸಂಗೀತ ಕಲಿಕೆ. ಕಲೆಯಲ್ಲಿ ಇಷ್ಟವಿದ್ದವರಿಗೆ ಬಣ್ಣ, ಕ್ಯಾನ್ವಾಸ್ ಗಳು. ನೆನಪಲ್ಲಿ ಇದ್ದಂತೆ ನನ್ನ ಕ್ಲಾಸಿನಲ್ಲಿ ಇದ್ದದ್ದು ಕೇವಲ ೨೦ ಜನ. ಪ್ರತಿ ವಿಷಯಕ್ಕೂ ನುರಿತ ಬೇರೆ ಬೇರೆ ಸರ್ರು, ಮೇಡಂಗಳು. ಪ್ರಾಬ್ಲಂ ಇದ್ದರೆ ವೈಯಕ್ತಿಕವಾಗಿ ಕೇಳಿ ಕಲಿಯುವ ಅವಾಕಾಶ. ಹೀಗೆ ಸರ್ವಾಂಗೀಣ ಬೆಳವಣಿಗೆ. ಅದೂ ಉಚಿತವಾಗಿ!

ನೆನಪಿದ್ದಂತೆ ನನ್ನ ದಿನಚರಿ ಹೀಂಗಿತ್ತು; ಬೆಳಿಗ್ಗೆ 5.30ಕ್ಕೆ ಅಲಾರಂ. 6 ಗಂಟೆಗೆ ಪಿಟಿ. 7ರವರೆಗೆ ರೋಲ್ ಕಾಲ, ಜಾಗಿಂಗು ಮತ್ತು ಎಕ್ಸರ್ ಸೈಸ್. 7.15ಕ್ಕೆ ಬೊರ್ನವೀಟಾ. 7.30 ರಿಂದ ರೋಲ್ ಕಾಲ್, ಪರೇಡ ಮತ್ತು ಪ್ರಾರ್ಥನೆ. 8ರಿಂದ 9ರವರೆಗೆ 2 ಪಿರಿಯೆಡ್ಡು. 9ರಿಂದ 10 ತಿಂಡಿ ಮತ್ತು ಹಾಲು. 10 ರಿಂದ 11.30 ವರೆಗೆ 3 ಪಿರಿಯೆಡ್ಡು. ಮತ್ತೆ ಬೊರ್ನವೀಟಾ. 11.45 ರಿಂದ 1.45ರವರೆಗೆ 3 ಪಿರಿಯೆಡ್ಡು. ಅಮೇಲೆ ಊಟ. ಅನ್ನ, ಸಂಬಾರು, ಪಲ್ಯ, ಮಜ್ಜಿಗೆ, ಉಪ್ಪಿನ ಕಾಯಿ. 3ರಿಂದ 5 ಓದು. 5ರಿಂದ 5.30 ಬೋರ್ನವೀಟಾ ಮತ್ತು ಬಿಸ್ಕಿಟು. ಆಮೇಲೆ 6.30 ತನಕ ರೋಲ್ ಕಾಲು, ಜೋಗಿಂಗು ಮತ್ತು ಆಟಗಳು. 7ರಿಂದ 8 ಮತ್ತೆ ಓದು. 8 ರಿಂದ ಊಟ. ಅನ್ನ, ಸಾರು, ಪಲ್ಯ, ಮಜ್ಜಿಗೆ, ಚಪಾತಿ. ವಾರಕ್ಕೆರಡು ದಿನ ಸ್ವೀಟ್ ಅಥವಾ ನಾನ್ ವೆಜ್. 9.30ಗೆ ರೋಲ್ ಕಾಲ್ ಮತ್ತು ನಿದ್ದೆ. ವಾರಕ್ಕೆರಡು ಟೆಸ್ಟಗಳು, ವಾರಕ್ಕೊಂದು ಕಲ್ಚರಲ್ ಕಾಂಪಿಟೇಶನ್ನುಗಳು. ಜೊತೆಗೆ ಇಂಟರ್ ಸ್ಕೂಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕಾಂಪಿಟೇಶನ್ನುಗಳು. ಹೀಗೆ ಸಾಗುತ್ತಿತ್ತು.

ನಾನಿಲ್ಲಿ ಹೇಳಕ್ಕೆ ಹೊರಟಿರುವುದೇನಂದರೆ ನವೋದಯದಲ್ಲಿ ಸರಕಾರ ಕೊಡುತ್ತಿದ್ದದ್ದು ಒಂದು ಉತ್ತಮ ದರ್ಜೆಯ ಪ್ಯಾಕೇಜ್. ಕೇವಲ ಪ್ರತಿಭೆ ಒಂದರಿಂದ ಒಬ್ಬ ವಿದ್ಯಾರ್ಥಿ ಉಚ್ಚ ಮಟ್ಟದ ಶಿಕ್ಷಣವನ್ನು ಪಡೆಯುತ್ತಾನೆ. ಅದು ಬಿಟ್ಟಿಯಾಗಿ. ನನ್ನ ಕ್ಲಾಸಿನಲ್ಲೇ ಎಷ್ಟೋ ಜನರ ಪಾಲಕರಿಗೆ ಮನಸ್ಸಿದ್ದರೂ ಇಷ್ಟು ಒಳ್ಳೆಯ ಶಿಕ್ಷಣ ಕೊಡುವ ಆರ್ಥಿಕ ಶಕ್ತಿ ಇರಲಿಲ್ಲ. ಈ ತರಹ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಡುವ ಅವಕಾಶಗಳು ಇರಲಿಲ್ಲ. ಇಲ್ಲಿ ಗ್ರಾಮೀಣ ವಿಭಾಗದ ವಿದ್ಯಾರ್ಥಿ ಅನ್ನೊ ಖೋಟಾ ಮಾತ್ರ ಇತ್ತು ಎಂಬ ನೆನಪಿದೆ.

ನಮ್ಮ ಸರಕಾರ ಇದೇ ತರಹ ಅನೇಕ ಯೋಜನೆಗಳನ್ನು ನಡೆಸುತ್ತಿದೆ. ನಮ್ಮೆಲ್ಲರ ಗಮನಕ್ಕೆ ಬಂದಿಲ್ಲ ಅಷ್ಟೆ. ಹಾಗಂತ ನವೋದಯದಲ್ಲಿ ಎಲ್ಲೂ ಕುಂದು-ಕೊರತೆಗಳು ಇಲ್ಲವೇ ಇಲ್ಲ ಎಂದು ಹೇಳುತ್ತಿಲ್ಲ . ಭ್ರಷ್ಟತೆ ಭಾರತದಲ್ಲಿ ಸರ್ವೇ ಸಾಮಾನ್ಯ. ಪ್ಯೂನಿರಲಿ, ಬಸ್ ಕಂಡಕ್ಟರ್ ಇರಲಿ, ಮಂತ್ರಿಗಳಿರಲಿ, ಎಲ್ಲರಿಗೂ ಅನೇಕ ಕಾರಣಗಳಿಂದ ಲಂಚ ತೆಗೆದುಕೊಳ್ಳುವುದು ಅನಿವಾರ್ಯ ಎಂಬಂತೆ ಆಗಿದೆ. ಆದ್ದರಿಂದ ಸರಕಾರದ ಉತ್ತಮ ಯೋಜನೆಗಳಿದ್ದರೂ ನಾವು ಆಕ್ಷೆಪ ತೆಗೆಯುವುದು ಸುಲಭವಾಗಿದೆ. ಜಾಸ್ತಿ ಟ್ಯಾಕ್ಸ ಕಟ್ಟದೇ ಹಣ ಉಳಿಸಿಕೊಳ್ಳುವುದು ಹೆಮ್ಮೆಯ, ಬುದ್ಧಿವಂತಿಕೆಯ ವಿಷಯವಾಗಿದೆ. ಕಟ್ಟಬೇಕಾಗಿರುವ ಟ್ಯಾಕ್ಸನ್ನು ಕಾನೂನು ಬದ್ಧವಾಗಿ ಉಳಿಸಿಕೊಡುವುದನ್ನೇ ಕಾಯಕವನ್ನಾಗಿಸಿಕೊಂಡ ಒಂದು ವರ್ಗವನ್ನೇ ತಯಾರು ಮಾಡಿದ್ದೇವೆ.

ನನಗನ್ನಿಸುವುದೇನಂದರೆ, ಟ್ಯಾಕ್ಸ್ ಕಟ್ಟಿ ನಾವೇನು ಹೆಚ್ಚುಗಾರಿಕೆ ಮಾಡುತ್ತಿಲ್ಲ. ದೇಶದ ಪ್ರತಿ (ಸಲುವಾಗಿ) ಪ್ರಜೆಯೊಬ್ಬ ಮಾಡಬೇಕಾದ ಕರ್ತವ್ಯವನ್ನು ಮಾಡುತ್ತಿದ್ದೇವೆ. ಮುಖ ಹಿಂಡಿ, ಹೊಟ್ಟೆ ಉರಿಸಿಕೊಂಡು ಟ್ಯಾಕ್ಸ ಕಟ್ಟುವ ಬದಲು ಸ್ವಲ್ಪ ನಗು ಮುಖದಿಂದ ಈ ಜವಾಬ್ದಾರಿಯನ್ನು ನಿರ್ವಹಿಸಲಾಗದೇ ?

ರಜೆ ಕಳೆದಿದೆ, ಬಣ್ಣ ಬದಲಾಗಿದೆ

ಅಕ್ಟೋಬರ್ 17, 2008

ಹೋಯ್ ,
ಹೊಸ ಬಣ್ಣ ಹೇಗಿದೆ?

ಅತ್ತಿತ್ತ ಎಲ್ಲಿ ನೋಡ್ತಿರಾ ?
ನಿಮಗೇರಿ ಕೇಳಿದ್ದು

———————-
(ವಿಜಯರಾಜ್, ಪೂರ್ಣಿಮಾ ನಿಮ್ಮ ಕಣ್ಣುಗಳಿಗೆ ತಂಪಾಗಲಿ. ಭಾಗ್ವತರೇ ಎಲ್ಲಿದ್ದೀರಿ ?)

ನವರಾತ್ರಿ ರಜೆ

ಸೆಪ್ಟೆಂಬರ್ 28, 2008

ಸಲ ಸಿಕ್ಕಿ ಬೀಳದಿರುವುದು ಹೇಗೆ ಅಂತ ಯೋಚನೆ ಮಾಡ್ತಾ ಇದ್ದೀನಿ. ಹಿಂದಿನ ಸಲ ಕೆಲಸದ ನೆವ ಹೇಳಿ ಕೊನೆಯ ಮೂರು ದಿವಸಗಳು ಮಾತ್ರ ಹಾಜರಿ ಹಾಕಿದ್ದೆ. ಆದರೆ ಸಲ ಆಫೀಸ್ ಬಿಟ್ಟು ಮನೇಲಿ ಮಾತ್ರ ಕೆಲಸ ಮಾಡ್ತಾ ಇರೋದರಿಂದ ಏನು ಹೇಳುವ ಹಾಗಿಲ್ಲ. ಹತ್ತೂ ದಿವಸಗಳು ಅಲ್ಲಿ ಹಾಜರಿರಲೇಬೇಕು. ಮನೆಯ ಚೌಕಾಟ್ಟಿನ ಒಳಗೆ ನನ್ನ ಬಂಡಾಯದ, ಸಮಾನತೆಯನಾಸ್ತಿಕವಾದದ ಯೋಚನೆಗಳಿಗೆ ಪ್ರವೇಶವಿಲ್ಲ. ಹಿಂದಿನ ಸಲ ಹೋದಾಗ ದೊಡ್ಡವರ ಜೊತೆ ಮಾತಾಡುವುದನ್ನೇ ತಪ್ಪಿಸಿಕೊಂಡು ಚಿಕ್ಕ ಮಕ್ಕಳ ಜೊತೆ ಆಟವಾಡುತ್ತಾ ಕಳೆದಿದ್ದೆ. ಆದರೆ ಸಲ ಜಾಸ್ತಿ ದಿನ ಅಲ್ಲಿರುತ್ತಿರುವುದರಿಂದ ನನಗೆ ದಿಗಿಲಾಗುತ್ತಿದೆ. ನನ್ನ ನಿಜ ಬಣ್ಣ ಬಯಲಾದರೆ ಏನು ಗತಿ ಅಂತ. ಅಲ್ಲಿ ಹೋದ ಕೂಡಲೇ ಹಣೆಗೆ ಟಿಕ್ಲಿ, ಬೈತಲೆಗೆ ಕುಂಕುಮ, ಮುಡಿ ತುಂಬಾ ಮಲ್ಲಿಗೆ, ಉದ್ದ ಜಡೆಕಾಲ್ಬೆರಳುಗಳಿಗೆ ಉಂಗುರಕಾಲ್ಗೇಜ್ಜೆಮೈ ತುಂಬಾ ಸೆರಗು ಹೊದ್ದು ಥೇಟ್ ಮಡಿವಂತರ ತರಹವೇ ಕಾಣುತ್ತೇನೆ. ಯಾರು ನಿಜ ಹೇಳಿದರು ನಂಬಲಾರರು. ನನ್ನ ಮುಖವೇ ಹಾಗಿದೆಯಂತೆ. ಗೌರಮ್ಮನ ತರಹ. ಎಲ್ಲರೂ ಮೋಸ ಹೋಗುವರೆ. ಪಾಪ, ನನ್ನ ಕಸೀನ್ ಬಾಬ್ಪಾಪ್, ಜೀನ್ಸ್ ಎಂದರೂ ಅವಳ ಬೈತಲೆಯಲ್ಲಿ ಉದ್ದನೆಯ ಕುಂಕುಮ ಎದ್ದು ಕಾಣುತ್ತೆ. ಅವಳು ಎಷ್ಟು ಸಂಪ್ರದಾಯವಾದಿಯಾದರೂ ಯಾರು ಅವಳ ಹೊರವೇಷವನ್ನು ನೋಡಿ ಹಾಗಂತ ನಂಬುವುದೇ ಇಲ್ಲ.

ಮನೆಯಲ್ಲಿ ಅಚ್ಚರಿ ಹುಟ್ಟಿಸಿದ ಚಿಂತನೆಗೆ ಹತ್ತಿಸಿದ ಹಲವಾರು ವಿಷಯಗಳಿವೆ. ಈಗ ಬರೆಯಲು ಕೂತರೆ ತಡವಾಗುತ್ತದೆ. ಬೆಳಿಗ್ಗೆ ಬೇಗನೆ ಹೊರಡಬೇಕು. ಇನ್ನೇನಿದ್ದರೂ ಅಲ್ಲಿಂದ ಬಂದ ಮೇಲೆ. ಅಲ್ಲಿಯ ತನಕ ಕೆಲ ಕಾಲ ಎಲ್ಲರ ಕಣ್ಣುಗಳಿಗೂ ಕಪ್ಪು ಬಣ್ಣದಿಂದ ಮತ್ತು ಸಣ್ಣ ಅಕ್ಷರಗಳಿಂದ ವಿಶ್ರಾಂತಿ. ಅಲ್ಲಿಯ ಫೋನ್ ಸರಿ ಇದ್ದರೆ ಇಲ್ಲಿ ಬಂದು ಇಣುಕಿ ಹೋಗಬಹುದು. ಅದೇನೊ ಆಗಿ ಹೋಗುವ ವಿಷಯವೆಂದು ಈಗ ತೋರುವುದಿಲ್ಲ. ಬರುವರೆಗೆ ನೀಲಾಂಜಲ ಕುಮಾರಧಾರೆ ಹಾಗೆ ಪಾತ್ರ ಬದಲಿಸದಿದ್ದರೆ ಮತ್ತೆ ಸೀಗೊಣ. ಬ್ಲಾಗಿಸೋ ಚಾಳಿ ಅಷ್ಟು ಬೇಗ ನನ್ನ ಬಿಡುವ ತರಹ ಇಲ್ಲನೋಡೊಣ.

ಎಲ್ಲರಿಗೂ ನವರಾತ್ರಿಯ ಹಾರ್ದಿಕ ಶುಭ ಕಾಮನೆಗಳು.

copyright ಕದ್ದವರು

ಆಗಷ್ಟ್ 30, 2008

Hi everybody,

Today I went through the trauma faced by my favorite flicker members. This is not fare. I feel every body should know and respect copyright.Please don’t publish others stuff/photos/articles/artwork in your publishing without getting prior permission. If you still want to add others work, please give credit n link to their respective page.

ಕ್ಲಿಕ್ 1 ಕ್ಲಿಕ್ 2

ಈಗಷ್ಟೇ ಇವುಗಳನ್ನು ನೋಡಿ, ಪೇಪರ್ರಿನ ಬೇಜಾಬ್ದಾರಿತನಕ್ಕೆ ತುಂಬಾ ಬೇಜಾರಾಯಿತು.
ತುಂಬಾ ಮಂದಿ ನೆಟ್ ನಲ್ಲಿ ಸಿಗೋ ಇಮೇಜ್ ಗಳೆಲ್ಲಾ “ಫ್ರೀ” ಅಂದುಕೊಂಡುಬಿಟ್ಟಿರುತ್ತಾರೆ.
ಆಷ್ಟು ದೊಡ್ಡ ಪೇಪರ್ರಿನವರು ಹೀಗೆ ಮಾಡಬಾರದಿತ್ತು.

ಮೊನ್ನೆ ನನ್ನ ಕಾಲೇಜಿನ ಸಹಪಾಠಿಯೊಬ್ಬ ನನ್ನ ಕೇಳದೇ,
ನಾನು ತೆಗೆದ ಫೋಟೊಗಳನ್ನು (orkut) ಎತ್ತಿ ತನ್ನ orkut ಪೇಜ್ನಲ್ಲಿ ಹಾಕಿದ್ದ.
ಅವನು ಬೇರೆ ಖ್ಯಾತ ಪ್ರೋಡಕ್ಷನ್ ಹೌಸ್‌ನ ಲೀಗಲ್ ಅಡ್ವೈಸರ್ !
ನಾನು ತರಾಟೆಗೆ ತೆಗೆದುಕೊಂಡಿದ್ದಕ್ಕೆ ತನ್ನ ಫ್ರೆಂಡ್ ಲಿಸ್ಟ್ ದಿಂದ ನನ್ನ ಡಿಲೀಟ್ ಮಾಡಿಬಿಟ್ಟ!!

ನಾನು ಮೊದಲು ಪೇಪರ್ರಿಗೆ ಕೊಡುತ್ತಿದ್ದ ಪಜಲ್ ಗಳದ್ದೆಲ್ಲ ಇನ್ನೊಂದು ಕತೆ.
ನಾನು ಮಾಡಿದ ಚಿತ್ರದ ತಲೆ-ಬುಡಗಳನ್ನು ಕೆತ್ತಿ
ತಮ್ಮ ಹೆಸರಲ್ಲಿ ಹಾಕಿ ಕೊಂಡ ಎಷ್ಟೋ ಮೇಜ್ ಗಳು ನನಗೆ ಸಿಕ್ಕಿವೆ.
ಆಗೆಲ್ಲ ಏಷ್ಟು ಸಿಟ್ಟು ಬರುತ್ತದೆ ಎಂದರೆ……..
ತಮ್ಮ ತಲೆ ಉಪಯೋಗಿಸಲು ಇಷ್ಟೊಂದು ಆಲಸ್ಯವೇ! !

ನಿಮ್ಮ ಬಳಿ ಇದಕ್ಕೇನಾದರೂ ಮದ್ದು ಇದೆಯಾ?
ನಿಮಗೂ ಹೀಗೆನಾದರೂ ಆಗಿದೆಯಾ?
ಇಲ್ಲಿ ಹಂಚಿಕೊಳ್ಳಿ.

(if interested to know more, pls read copyright )