ಅಭಿಸಾರಿಕೆ ಇತ್ತೀಚಿಗೆ ನನ್ನ ಬಳಿ ಮಾತನಾಡುತ್ತಿಲ್ಲ. ತನ್ನದೇ ಧ್ಯಾನದಲ್ಲಿರುತ್ತಾಳೆ. ಯಾವಾಗಲಾದರೂ ಬರುತ್ತಾಳೆ, ಯಾವಾಗಲೋ ಹೊರಡುತ್ತಾಳೆ. ಆಕೆಯಾಗಿಯೇ ನನ್ನ ಬಳಿ ಹೇಳದ ಹೊರತು ನಾನೆಂದೂ ಏನೆಂದು ಆಕೆಯನ್ನು ಕಾಡಿದವನಲ್ಲ. ಆಕೆ ಪಡಸಾಲೆಯ ಕಂಬಕ್ಕೆ ಒರಗಿ ನಿಂತು ಆಗಸವನ್ನು ದಿಟ್ಟಿಸುತ್ತಾ ಕೂತಿದ್ದರೆ, ಆಕೆಯ ಆ ಮೌನಭಾವದಲ್ಲೂ ಅರ್ಧ ಕತೆಗಳು ಚಿಮ್ಮಿ ಚೆಲ್ಲಿ ತಣ್ಣಗಾಗುತ್ತವೆ.
ಅವರಿಬ್ಬರಲ್ಲಿ ಮಾತಾಗಿತ್ತು. ಪ್ರತಿ ಹುಣ್ಣಿಮೆಯ ದಿನ ಗುಡ್ಡದ ತುದಿಯ ಮರದ ಕೆಳಗೆ ಮಿಲನವೆಂದು. ಅಲ್ಲಿ ಇಬ್ಬರು ಮಾಡುತ್ತಿದ್ದಿದ್ದೆನಿಲ್ಲ, ಮುತ್ತುಗಳು, ಮುತ್ತುಗಳು, ಮುತ್ತುಗಳು. ರಾತ್ರಿ ಚೆಲ್ಲಿದ ಅವೆಲ್ಲ ಬೆಳಗಿನ ಸೂರ್ಯಕಿರಣ ತಾಗಿ ಇಬ್ಬನಿಯ ಹನಿಗಳಾಗಿ ಮಾರ್ಪಾಡಗುತ್ತಿದ್ದವು. ತದನಂತರ ಇಬ್ಬರೂ ಒಬ್ಬರನ್ನೊಬ್ಬರನ್ನು ಆಗಲಿ ಮತ್ತೆ ಸೇರಲೆಂದೇ ತಂ ತಂ ಜಾಗಗಳಿಗೆ ಮರಳುತ್ತಿದ್ದರು. ಅವರಿಬ್ಬರ ಮೊಗದ ಹೊಳಪಿನಿಂದ ಸೂರ್ಯನ ಬೆಳಕು ಇನ್ನೂ ಶುಭ್ರವಾಗಿ ಎಲ್ಲವನ್ನೂ ಹೊಳೆಯುಸುತ್ತಿತ್ತು.
ಒಂದು ಪೂರ್ಣ ಬೆಳದಿಂಗಳ ರಾತ್ರಿಯಲ್ಲಿ ನಕ್ಷತ್ರಗಳನ್ನು ಏಣಿಸತೊಡಗಿದವನಿಗೆ ತಾನೇನೊ ಸಾಧಿಸಬೇಕೆಂದು ಅನ್ನಿಸಿತು. ಯಶಸ್ಸು, ಕೀರ್ತಿ, ಸಂಪತ್ತು ಹೀಗೆ ಏನೇನೋ ಹಲುಬಿದ. ತಂಪು ಚಂದ್ರನಲ್ಲಿ ಕಳೆದು ಹೋಗಿದ್ದ ಅವಳು ಅವನ ಮಾತಿನ ಲಯಕ್ಕೆ ತಾಳ ಹಾಕುತ್ತಾ ಹೊರಬಂದಳು. ಅಹುದು, ಜ಼ೀವನ ಅಂದರೆ ಇದೇನೆ ಅಂದುಕೊಂಡಳು. ಆಮೇಲೆ ಒಂದು ಇರುಳು ಅವನು ಅಲ್ಲಿ ಬಂದರೆ, ಅವಳು ಬರಲಿಲ್ಲ. ಆಕೆ ಬಂದಾಗ ಅವನಿರಲಿಲ್ಲ. ಕ್ರಮೇಣ ಇಬ್ಬರು ಬಾರದೆ ಆ ಮರ ಒಣಗಿ ಹೋಗಲಿಲ್ಲ. ಬದಲಿಗೆ ಇನ್ನೂ ಹರಡಿಕೊಂಡು ವಿಶಾಲವಾಯಿತು.
ಏಷ್ಟೋ ಕಾಲದ ಮೇಲೆ ಹೆಲಿಕ್ಯಾಪ್ಟರ್ ನಿಂದ ಅವನು ಇಳಿದು ಬಂದ. ಆಕೆ ದೊಡ್ಡ ಉದ್ದ ಕಾರಿನಲ್ಲಿ ಬಂದಿಳಿದಳು. ಇಬ್ಬರೂ ಸೇರಿ ಜೊತೆಗೆ ಗುಡ್ಡ ಹತ್ತಿದರು. ಅಲ್ಲಿ ಮರದ ಕೆಳಗೆ ಕೂತು ಅಂದು ಅವಳು ನಕ್ಷತ್ರಗಳನ್ನು ಏಣಿಸತೊಡಗಿದಳು. ಆತ ಚಂದ್ರನಲ್ಲಿ ಕಳೆದು ಹೋದ. ಅವತ್ತಿನ ಮಿಲನದಲ್ಲಿ ಬರೀ ಮುತ್ತಿರಲಿಲ್ಲ, ಮತ್ತೆಲ್ಲವೂ ಇತ್ತು. ಪ್ರಾಯಶಃ ಅದಕ್ಕೆ ಮಾರನೇ ದಿನ ಕೆಂಪು ಸೂರ್ಯ ಜನಿಸಿದ್ದ.