ಸ್ವಲ್ಪ ಹೊತ್ತು ಮೊದಲು ‘ಲೋಕಧ್ವನಿ’ ದಿನಪತ್ರಿಕೆ ವಿಶ್ವವಾಣಿ ಬಳಗಕ್ಕೆ ಸೇರಿದ ಕುರಿತು ವಿಶ್ವೇಶ್ವರ ಭಟ್ಟರು ಹಾಕಿದ ಪೋಸ್ಟ್ ನೋಡಿ ಹಳೆಯ ನೆನಪುಗಳು ಒಟ್ಟಾಗಿ ಬಂತು.
ಶಿರಸಿ ಸಮಾಚಾರ
ಶಿರಸಿಯ ಮನೆಗಳಲ್ಲಿ ರಾಜ್ಯಮಟ್ಟದ ದಿನ ಪತ್ರಿಕೆಯ ಜೊತೆ ಅಲ್ಲಿಯ ಸ್ಥಳೀಯ ಜಿಲ್ಲಾ ಪತ್ರಿಕೆಗಳಾದ ʼಲೋಕ ಧ್ವನಿʼ ಇಲ್ಲಾ ʼಜನಮಾಧ್ಯಮʼ ದಿನನಿತ್ಯ ಬಂದೇ ಬರುತ್ತೆ ಎಂದು ನಾನು ನಂಬಿದ್ದೇನೆ. ಆ ಮಟ್ಟಿಗೆ ಅಲ್ಲಿ ಜನಪ್ರಿಯ. ನಾನು ತುಂಬಾ ಸಣ್ಣವಳಿದ್ದಾಗ ಅಜ್ಜನ ʼಶಿರಸಿ ಸಮಾಚಾರʼ ಜನಪ್ರಿಯವಾಗಿತ್ತು ಅನ್ನುವುದು ಕೇಳಿ ಗೊತ್ತು.
ಬಾಲ್ಯದಲ್ಲಿ 5-7ನೇಯ ವಯಸ್ಸಿನಲ್ಲಿ ಅಜ್ಜನ ʼಶಾರದಾ ಪ್ರೆಸ್ʼ ನೋಡಿದ್ದ ನೆನಪಿದೆ. ಅಥವಾ ಶಿವಮೊಗ್ಗ ತೊರೆದು ಅಪ್ಪ- ಅಮ್ಮ ಶಿರಸಿಗೆ ಬಂದ ಕೂಡಲೇ ಅದೇ ಕಟ್ಟಡದಲ್ಲಿ ಕೆಲವು ಕಾಲ ತಂಗಿದ್ದ ಕಾರಣ ಈ ನೆನಪುಗಳು ಇನ್ನೂ ಇರಬಹುದು. ಆಮೇಲೆ ಅಪ್ಪ ಸಿ ಪಿ ಬಜಾರಿನಲ್ಲಿ ʼಉದಯ ಮುದ್ರಣʼ ಶುರು ಮಾಡಿದ ಮೇಲೆ, ಸ್ಕೂಲಿನಿಂದ ಬರುತ್ತಾ ಕೆಲವೊಮ್ಮೆ ಅಜ್ಜನ ಕಛೇರಿಗೆ ಹೋಗುತ್ತಾ ಇದ್ದಿದ್ದು ನೆನಪಿದೆ. ಮೆಟ್ಟಿಲು ಹತ್ತಿ ಒಳ ಹೋಗುತ್ತ ಇದ್ದ ಹಾಗೆ ಉದ್ದವಾದ ಹಾಲ್, ಎದುರು ಮರದ ವಿಶಾಲವಾದ ಟೇಬಲ್, ಅದರ ಮಧ್ಯ ಗಾಂಧಿ ಟೋಪಿ ಮತ್ತು ಬಿಳಿ ಖಾದಿಧಾರಿ ಅಜ್ಜ ಕುಳಿತಿರುತ್ತಿದ್ದ ನೆನಪು. ಎಡಗಡೆ ವಿಶಾಲವಾದ ಕಿಟಕಿ, ಅದರ ಕೋನಾಕಾರದ ಬಿಳಿ ಬಣ್ಣ ಬಳಿದ ಮರದ ಪಟ್ಟಿಗಳಿಂದ ಕೋಣೆಗೆ ಬೀಳುತ್ತಿದ್ದ ಬೆಳಕು, ಮೇಲೆ ಕಳೆದ ದೀಪಾವಳಿಗೆ ದಾರದಲ್ಲಿ ಕಟ್ಟಿದ ಬಣ್ಣ ಬಣ್ಣದ ಪತಾಕೆಗಳು. ಬಲಗಡೆ ಕಿಟಕಿಗಳಿರಲಿಲ್ಲ. ಪ್ರಿಂಟಿಂಗ್ ಇಂಕ್ ತುಂಬಿದ ಡಬ್ಬಿಗಳಿರುವ ಮರದ ಕಪಾಟು ಇದ್ದ ನೆನಪು. ಹಾಗೆ ಬಲ ತುದಿಗೆ ಒಳಗಡೆ ಹೋಗುವ ದಾರಿ. ಒಳ ಹೋಗುತ್ತ ಮೊದಲು ಕಾಣುವುದು ಸದ್ದು ಮಾಡುತ್ತಿರುವ ಟ್ರೆಡಲ್ ಪ್ರಿಂಟಿಂಗ್ ಮೆಶಿನ್, ಹಾಗೇ ಮುಂದೆ ಹೋದರೆ ಮರದ ಅಚ್ಚು ಮೊಳೆಗಳ ವಿಭಾಗ, ಇನ್ನೊಂದು ಮೆಶಿನ್ ಹಾಗೂ ಅಚ್ಚು ಮೊಳೆಗಳ ಚೌಕಟ್ಟು ಕಟ್ಟುವ ಟೇಬಲ್. ಸೀಮೆ ಎಣ್ಣೆ ಮತ್ತು ಇಂಕ್ ಗಳ ವಾಸನೆ, ಕಪ್ಪು ಬಣ್ಣ ಮೆತ್ತಿಕೊಂಡಿರುವ ಶರ್ಟ್ಗಳನ್ನು ಧರಿಸಿರುವ ಕೆಲಸಗಾರರು ಮತ್ತು ಕಪ್ಪು ಕೈಗಳು,….
ಅಜ್ಜನಿಗೆ ವಯಸ್ಸಾಗುತ್ತ ಬಂದ ಹಾಗೆ ಶಾರದಾ ಪ್ರೆಸ್ ಮಾರುವ ನಿರ್ಧಾರ ಮಾಡಿ ಮಾರಿಯೂ ಆಯಿತು. ಅಲ್ಲಿಯ ಕೆಲವು ಕುರ್ಚಿಗಳು, ಟೀಪಾಯಿಗಳು ಅಜ್ಜನ ಮನೆಗೆ ವರ್ಗಾಯಿಸಿದರು. ಅಜ್ಜನ ಮನೆಗೆ ಹೋದಾಗ ಮೆತ್ತಿಯ ರೂಮಿನಲ್ಲಿ ತುಂಬಿಟ್ಟಿದ್ದ ಮರದ ಪೀಠೋಪಕರಣಗಳು ಶಾರದಾ ಪ್ರೆಸ್ಸು ಮತ್ತು ಶಿರಸಿ ಸಮಾಚಾರದ ಗತ ವೈಭವ ಹೇಳುತ್ತಿದ್ದವು.
ನಾನು ಆವೆಮರಿಯಾ ಸ್ಕೂಲಿನಿಂದ ಸಿಪಿ ಬಜಾರಿನ ನಮ್ಮ ಮನೆಗೆ ನಡೆದು ಹೋಗುತ್ತಾ ಎಡಗಡೆ ಬೀಗ ಜಡಿದು ಕುಳಿತ ಆ ಬಿಳಿ ಕಟ್ಟಡ ನನ್ನಲ್ಲಿ ಯಾವ ಭಾವನೆಗಳನ್ನು ಹುಟ್ಟಿಸುತಿತ್ತು ಅನ್ನುವುದು ನಿಖರವಾಗಿ ನನಗೂ ತಿಳಿದಿಲ್ಲ. ಈಗಲೂ ಈ ಕಟ್ಟಡವಿದೆ. ಕೃಷ್ಣಾ ಫೈನ್ ಆರ್ಟಿಗೆ ಭೇಟಿ ಕೊಟ್ಟಗಲೆಲ್ಲ ಅಲ್ಲಿ ಹಿರಿಯ ಗುಡಿಗಾರರು ಸಿಕ್ಕಾಗ ಮತ್ತೆ ಹಳೆಯದು ನೆನಪಿಗೆ ಬರುತ್ತದೆ. ಶಿರಸಿ ಸಮಾಚಾರ ಆಮೇಲೆ ವಾರ ಪತ್ರಿಕೆಯಾಗಿ, ಅನೇಕ ಸಂಪಾದಕರು ಆಗಿ ಹೋಗಿ, ಸಧ್ಯ ಪ್ರಕಟನೆಯಲ್ಲಿ ಇದೆಯಾ ಅನ್ನವುದು ನನಗೆ ತಿಳಿದಿಲ್ಲ.
———-
ಜನಮಾಧ್ಯಮ
ಅಪ್ಪನದು ಮುದ್ರಣದ ಕಾರ್ಯ ಕ್ಷೇತ್ರವೇ ಆಗಿದ್ದರಿಂದ ಜನಮಾಧ್ಯಮದ ಜಯರಾಮ ಹೆಗಡೆಯವರ ಪರಿಚಯ ಅವರಿಂದಲೇ ಆಗಿದ್ದು. ಸಿಂಪಿಗಲ್ಲಿ(?)ಯಲ್ಲಿ ಅವರ ಕಛೇರಿ ಇದ್ದ ನೆನಪು. ಅಲ್ಲಿಯೇ ಇದ್ದ ಕೃಷ್ಣಾ ಪ್ರಿಂಟರ್ಸ್ ಕಛೇರಿಗೆ ಅಪ್ಪನ ಜೊತೆ ಬಾಲ್ಯದಲ್ಲಿ ಹೋದಾಗ ಜನಮಾಧ್ಯಮ ಕಛೇರಿಗೆ ಹೋಗಿದ್ದ ನೆನಪಿದೆ. ಅದಕ್ಕೂ ಹೆಚ್ಚಾಗಿ ಅಣ್ಣನ ಸ್ನೇಹಿತೆ ಸಿಂಧೂ ಅಕ್ಕಳ ಕಾರಣ ಜನಮಾಧ್ಯಮ ನೆನಪಿದ್ದಿದ್ದು ಹೆಚ್ಚು. ಆಮೇಲೆ ಸಿ ಪಿ ಬಜಾರಿನಿಂದ ಜಿಪಿ ಸೆಂಟರಿಗೆ ʼಉದಯ ಮುದ್ರಣʼ ಸ್ಥಳಾಂತರವಾದ ಮೇಲೆ ನಮ್ಮ ಮನೆಯೂ ಅದರ ಹಿಂದುಗಡೆ ಇದ್ದ ಗುರುನಗರಕ್ಕೆ ಬದಲಾಗಿತ್ತು. ಆಗ ಮೊದಲೇ ಸಿಗುತ್ತಿದ್ದ ಜಯರಾಮ ಹೆಗಡೆಯವರ ಮನೆ ಜನಮಾಧ್ಯಮದವರ ಮನೆಯಂತಲೇ ನೆನಪಿಟ್ಟುಕೊಂಡಿದ್ದಿದೆ.
——
ಧ್ಯೇಯನಿಷ್ಠ ಪರ್ತಕರ್ತ
ಕಾಲೇಜಿನಲ್ಲಿ ಸಚ್ಚಿದಾನಂದ ಹೆಗಡೆಯವರು ನಮ್ಮ ಪತ್ರಿಕೋದ್ಯಮದ ಗೆಸ್ಟ್ ಲೆಕ್ಚರ್ ಆಗಿ ಬಂದಾಗ ಆಗಲೇ ಡಿಜಿಟಲ್ ಕ್ರಾಂತಿ ಶುರುವಾಗಿ ಟ್ರೆಡಲ್ ಮಿಶಿನ್ ಬಿಟ್ಟು ಆಫ್ ಸೆಟ್ ಅದೂ ದೊಡ್ಡ ಮೆಶಿನ್ ಹಾಕಿದ್ದರು ಅನ್ನುವ ನೆನಪಿದೆ. ಪರ್ತಕರ್ತದ ಅಚ್ಚು ಮೊಳೆಗಳ ಅವರ ಕಛೇರಿಗೂ ಬಾಲ್ಯದಲ್ಲಿ ಅಪ್ಪನ ಜೊತೆ ಹೋದ ನೆನಪಿದೆ. ಆಮೇಲೆ ಅವರ ಆಧುನಿಕ ಆಫ್ ಸೆಟ್ ಕಛೇರಿಗೆ ನನ್ನ ಪಜಲ್ ಕೊಡುವ ವಿಚಾರವಾಗಿ ಭೇಟಿ ಆಗಿದ್ದೆ. ಅದಕ್ಕೂ ಹೆಚ್ಚಾಗಿ ಪರ್ತಕರ್ತ ನೆನಪಿರುವುದು ಅವರಿಗೆ ಹೆಚ್ಚು ಸಲ ಟಿಎಸ್ ಎಸ್, ಕೆಡಿಸಿಸಿ,.. ಇನ್ನೀತರ ಮುಖ್ಯವಾದ ಪ್ರಿಂಟಿಂಗ್ ಟೆಂಡರ್ ಸಿಗ್ತಾ ಇತ್ತು ಅನ್ನುವುದು. ಶಿರಸಿಯಲ್ಲಿ ಎಣಿಸುವಷ್ಟು ಪ್ರಿಂಟಿಂಗ್ ಪ್ರೆಸ್ಸುಗಳು ಇದ್ದರೂ ಕಾಂಪಿಟೇಶನ್ ಕೂಡ ಹಾಗೆಯೇ ಇತ್ತು. ಈಗ ಡಿಜಿಟಲ್ ಪ್ರಿಂಟ್ ಬಂದ ಮೇಲಂತೂ ಆಫ್ ಸೆಟ್ ಮುದ್ರಣವೂ ಕಡಿಮೆಯಾಗಿ, ಅನೇಕ ಹಳೆಯ ಪ್ರೆಸ್ಸುಗಳು ಮುಚ್ಚಿ ಹೋಗಿವೆ.
——
ಲೋಕಧ್ವನಿ
ಅಪ್ಪ- ಅಮ್ಮ ಟ್ರೆಡಲ್ ಪ್ರಿಂಟಿಂಗ್ ತೆಗೆದು ಆಫ ಸೆಟ್ ಪ್ರಿಂಟಿಂಗ್ ಯುನಿಟ್ ಹಾಕುವ ಯೋಚನೆ ಮಾಡಿದಾಗ ಲೋಕಧ್ವನಿಯ ಗೋಪಾಲಕೃಷ್ಣ ಆನವಟ್ಟಿಯವರನ್ನು ಭೇಟಿ ಆಗಿದ್ದರು ಅನ್ನುವ ನೆನಪಿದೆ. ಶಿರಸಿಯಲ್ಲಿ ಮೊದಲ ಆಫ್ ಸೆಟ್ ಮುದ್ರಣ ತಂತ್ರಜ್ಞಾನ ತಂದಿದ್ದು ಇವರೇ ಅನ್ನುವುದು ನನ್ನ ನೆನಪು. ಆಮೇಲೆ ಕಾಲೇಜಿನ ಮೊದಲ ವರ್ಷದಲ್ಲಿ ನನ್ನ ಪಜಲ್ ಕೊಡುವ ವಿಚಾರವಾಗಿ ಅವರ ಕಛೇರಿಗೆ ಭೇಟಿ ಕೊಟ್ಟಿದ್ದೆ. ಮಧುವನ ಎದುರುಗಡೆಯ ಕ್ರಾಸಿನಲ್ಲಿ ಸ್ವಲ್ಪ ಮುಂದೆ ಹೋದರೆ ಬಲಗಡೆ ಲೋಕಧ್ವನಿಯ ಆಫೀಸು. ಕೆಳಗಡೆ ಆನವಟ್ಟಿಯವರ ಮನೆ, ಮೆಲುಗಡೆ ಪ್ರೆಸ್ಸು. ಗುಂಗುರು ಕೂದಲಿನ, ಕಪ್ಪು ಕನ್ನಡಕ ಹಾಕಿದ ಮುಖ ನೆನಪಿದೆ. ಒಂದೋ, ಎರಡೋ ಬಾರಿ ಅಷ್ಟೇ ಅವರನ್ನು ನೋಡಿದ ನೆನಪಿದೆ.
1996ರಲ್ಲಿ ಲೋಕಧ್ವನಿಯಲ್ಲಿ ಬರುತ್ತಿದ್ದ ಸಾಹಿತ್ಯ ಧ್ವನಿ ಮರೆಯಲು ಸಾಧ್ಯವೇ ಇಲ್ಲ. ಆಗಷ್ಟೇ ಹತ್ತನೇ ಕ್ಲಾಸು ನವೋದಯ ಮುಗಿಸಿ ಏಪ್ರಿಲ್-ಮೇ ರಜೆಯಲ್ಲಿ ಇದ್ದ ಸಮಯ. ಆಗ ಟ್ರೆಂಡಿನಲ್ಲಿ ಇದ್ದ ಪೆನ್ ಫ್ರೆಂಡುಗಳ ಟ್ರೆಂಡ್, ಅಜ್ಞಾತವಾಗಿ 15 ಪೈಸೆ ಹಳದಿ ಅಂಚೆ ಕಾರ್ಡಿನಲ್ಲಿ ಬರೆಯುತ್ತಿದ್ದ ಪತ್ರಗಳು,.. ಸುಪ್ರಿಯಾ ಅಂತ ಹೆಸರಿಟ್ಟುಕೊಂಡಿದ್ದೆ ಬೇರೆ. ಹೆಚ್ಚಾಗಿ ಇದೇ ಕಾರಣಕ್ಕೇ ಲೋಕಧ್ವನಿ ಜೊತೆ ಭಾವನೆಗಳು ಬೆಸೆದು ಕೊಂಡಿರಬಹುದು.
ಈಗ ಲೋಕಧ್ವನಿ ಅಂದರೆ ನೆನಪಾಗುವುದು ಅಶೋಕ ಕಾಕ. ಅವರು ಮೊದಲು ಕಾರವಾರದಲ್ಲಿ ʼಕರಾವಳಿ ಮುಂಜಾವುʼ ದಿನ ಪತ್ರಿಕೆಯಲ್ಲಿ ಸಂಪಾದಕರಾಗಿದ್ದರು. ಆನವಟ್ಟಿಯವರು ಲೋಕಧ್ವನಿ ಮಾಲಿಕತ್ವ ಬೇರೆಯವರಿಗೆ ವಹಿಸಿದ ಮೇಲೆ, ಕಾಕ ಸಂಪಾದಕತ್ವ ವಹಿಸಿಕೊಂಡರು. ಚಿಕ್ಕಿ ಮತ್ತು ಕಾಕ ಶಿರಸಿಗೆ ಸ್ಥಳಾಂತರವಾದರು. ಕಪ್ಪು ಬಿಳುಪಿನ ಲೋಕಧ್ವನಿ ಕಲರ್ ಫುಲ್ ಆಯಿತು. ಆಮೇಲೆ ಶಿರಸಿಗೆ ಅವರ ಮನೆಗೆ ಹೋದಾಗಲೆಲ್ಲ ಲೋಕಧ್ವನಿಯ ಪ್ರಸ್ತಾಪ ಆಗೇ ಆಗುತಿತ್ತು. ಶಿರಸಿಗೆ ಹೋದಾಗಲೆಲ್ಲ ಲೋಕಧ್ವನಿಯ ಹೊಸ ಆಫೀಸು ಹೊರಗಡೆಯಿಂದ ನೋಡಿದ್ದೇ ಹೊರತು ಯಾವತ್ತೂ ಆಫೀಸಿಗೆ ಹೋಗಿ ಕಾಕನನ್ನು ಭೇಟಿ ಮಾಡುವ ಯೋಚನೆಯೇ ಮಾಡಿರಲಿಲ್ಲ. ಆಥವಾ ಮಧುವನದ ಎದುರಗಡೆ ಇದ್ದ ಲೋಕಧ್ವನಿಯ ಕಛೇರಿಯ ನೆನಪು ಕಳೆದು ಕೊಳ್ಳಲು ಇಷ್ಟವಿರಲಿಲ್ಲವೇನೊ, ತಿಳಿದಿಲ್ಲ.
ಈಗ ಕಾಕನೂ ಲೋಕಧ್ವನಿಯಲ್ಲಿ ಇಲ್ಲ. ಲೋಕಧ್ವನಿ ಮತ್ತೆ ಬದಲಾಗಿದೆ. ವಿಶ್ವವಾಣಿ ಬಳಗಕ್ಕೆ ಸೇರ್ಪಡೆ ಆಗಿದೆ. ಅಪ್ಪ-ಅಮ್ಮನೂ ಈಗ ಶಿರಸಿಯಲ್ಲಿಲ್ಲ. ಸಾಗರಕ್ಕೆ ಸ್ಥಳಾಂತರವಾಗಿದ್ದಾರೆ. ಹಾಗಾಗಿ ಮುಂದೆ ಯಾವಾಗಲೋ ಚಿಕ್ಕಿ-ಕಾಕರನ್ನು ಭೇಟಿಯಾಗಲು ಶಿರಸಿಗೆ ಹೋದಾಗ ಹೊಸದಾದ ʼಲೋಕ ಧ್ವನಿʼಯನ್ನು ಕೈಯಲ್ಲಿ ಹಿಡಿದು ಓದಬಹುದು. ಮತ್ತೆ ಇನ್ನೂ ಹಳೆಯ ನೆನಪುಗಳು ಹೊರ ಬರಬಹುದು.
ನಿಮ್ಮದೊಂದು ಉತ್ತರ