ಅ ಪೊಲಿಟಿಕಲ್

ಕಾಲೇಜು ದಿನಗಳ ಕತೆಯಿದು. (2001-2)
ನನ್ನ ಸ್ನೇಹಿತೆ ಎಬಿವಿಪಿ ಸಂಘಟನೆಯಲ್ಲಿ ಮೊದಲಿನಿಂದಲೂ ಸಕ್ರಿಯಳು. ಕಾಲೇಜಿನಿಂದ ಒಂದು ಕಾರ್ಯಕ್ರಮಕ್ಕೆ ಅಂತ ನಾನು ಅವಳು ಓಡಾಡ್ತಾ ಇರಬೇಕಾದರೆ, ಅವಳಿಗೆ ಆ ದಿನ ಸಂಘಟನೆಯ ಕಚೇರಿಗೆ ಹೋಗಬೇಕಿತ್ತು. ಹಾಗಾಗಿ ಜೊತೆಗೆ ನಾನು ಹೋದೆ. ಅಲ್ಲಿ ಆ ವಲಯವನ್ನು ನೋಡಿಕೊಳ್ಳುತ್ತಿದ್ದ ಸಂಯೋಜಕರು ಇದ್ದರು. ಅವಳಿಗೆ ಚೆನ್ನಾಗಿ ಪರಿಚಯ ಇದ್ದ ಕಾರಣ ನಾನೂ ಅವರ ಜೊತೆ ಮಾತನಾಡುವಂತಾಯಿತು. ಆಮೇಲೆ ಕಾಲೇಜು ಮುಗಿದ ಮೇಲೆ ಅವಳೇ ಜೊತೆಗೆ ಅಲ್ಲಿ ಕರೆದು ಕೊಂಡು ಹೋಗ್ತಾ ಇದ್ದಳು.

ಆ ಹೊತ್ತಲ್ಲಿ ಅವರ ಕಡೆಯಿಂದ ಒಂದು ಕಾರ್ಯಕ್ರಮ ಮಾಡುತ್ತ ಇದ್ದು ಈ ಸಲ ನೀನು ನಿರೂಪಣೆ ಮಾಡ್ತೀಯ ಅಂತ ಕೇಳಿದರು. ಈ ಮೊದಲೇ ಕಾಲೇಜಿನಲ್ಲಿ ನಿರೂಪಣೆ ಮಾಡ್ತಾ ಶ್ರೀ, ಶ್ರೀಮತಿ ಉಪಯೋಗಿಸದೆ ಸಂಬೋಧನೆ ಮಾಡಿ ಪ್ರಿನ್ಸಿ ಯಿಂದ ಹೇಳಿಸಿ ಕೊಂಡಿದ್ದ ನಾನು ಸ್ವಲ್ಪ ಹಿಂಜರಿಕೆಯಿಂದಲೇ ಒಪ್ಪಿದೆ. ನಾನು ಜೊತೆಗೆ ಇರ್ತೀನಿ, ಚೆನ್ನಾಗಿ ಆಗುತ್ತೆ ಅಂತ ಅವರು. ಕೊನೆಗೆ ಮಾಡಿಯೂ ಆಯಿತು. ಶಿರಸಿಯ ಮಾರಿಕಾಂಬಾ ಸಭಾ ಭವನದಲ್ಲಿ ಇತ್ತು ಎಂಬ ನೆನಪು ಮಾತ್ರ ಇದೆ. ಹೇಗಾಯಿತು ಅಂತ ಗೊತ್ತಿಲ್ಲ. ಚೆನ್ನಾಗಿಯೇ ಆಗಿತ್ತು ಅಂದುಕೊಂಡಿದ್ದೆ. ಆದರೆ ಅದು ಕಾಲೇಜು ಬಿಟ್ಟು ಹೊರಗಡೆ ಮೊದಲ ಬಾರಿ ಮತ್ತು ಕೊನೆಯ ಬಾರಿ ಮಾಡಿದ ನಿರೂಪಣೆ.

ಯಾಕೆ ಅಂದ್ರೆ ಅಲ್ಲಿ ಒಂದು ಯಡವಟ್ಟು ಆಯಿತು. ಅದೂ ಕಾರ್ಯಕ್ರಮ ಮುಗಿದ ಮೇಲೆ, ಸ್ನೇಹಿತನೊಬ್ಬ ಹೇಳಿದ ಮೇಲೆ ಗೊತ್ತಾಗಿದ್ದು.  ಪ್ರತಿ ಸಲ ಕಾರ್ಯಕ್ರಮ ನಿರೂಪಣೆ ನನ್ನ ಸ್ನೇಹಿತೆ ಮಾಡ್ತಾ ಇದ್ದು, ಈ ಸಲ ನನಗೆ ಸಿಕ್ಕಿದ್ದಕ್ಕೆ ಅವಳಿಗೆ ಕೋಪ ಬಂದಿದೆ ಅಂತ. ಅದೂ ಮೊನ್ನೆ ಮೊನ್ನೆ ಪರಿಚಯ ಆದ ನನಗೆ. ನಾನು ಆ ನಿಟ್ಟಿನಲ್ಲಿ ಯೋಚನೆ ಮಾಡಿರಲಿಲ್ಲ. ನಾ ಅಲ್ಲಿ ಹೋದೆ, ಅವರು ಮಾಡಿ ಅಂದರು, ನನ್ನ ಸ್ನೇಹಿತೆ ಕರೆದು ಕೊಂಡು ಹೋಗಿದ್ದಕ್ಕೆ ಅವಳಿಗೆ ಸಹ ಒಪ್ಪಿಗೆ ಇದೆ ಅಂತಲೇ ಅಂದು ಕೊಂಡಿದ್ದೆ.

ಆಮೇಲೆ ನಾನೂ ಅವರ ಆಫೀಸಿನ ಕಡೆ ತಲೆ ಹಾಕೋಕೆ ಹೋಗಿಲ್ಲ. ಆಗ ಎಬಿವಿಪಿ, ಎಸ್ ಎಫ್ ಐ ಅಂತ ಗೊತ್ತಿತ್ತೇ ಹೊರತು, ಇವತ್ತಿನ ತರಹ ಅದಕ್ಕೂ ರಾಜಕಾರಣಕ್ಕೆ ಏನೂ ಸಂಬಂಧ ಅನ್ನೋದು ಗೊತ್ತಿರಲಿಲ್ಲ .

ಆಮೇಲೆ ಒಂದು ದಿನ ಅವರೆಲ್ಲ ಸೇರಿ ಟೂರ್ ಹೋಗ್ತಾ ಇದ್ದಿದ್ದಕ್ಕೆ, ನನ್ನ ಸ್ನೇಹಿತೆ ಜೊತೆಗೆ ಬರೋಕೆ ಕೇಳಿದಳು. ಈಗಾಗಲೇ ನಾನು ಅಲ್ಲಿ ಹೋಗುವುದನ್ನು ಕಡಿಮೆ ಮಾಡಿರುವುದರಿಂದ ಅವಳೂ ಸಹ ಮೊದಲಿನಂತೆ ನನ್ನ ಜೊತೆ ಖುಷಿಯಲ್ಲಿ ಇದ್ದಳು. ಆದರೆ ನಾನೂ ಟೂರ್ ಗೆ ಹೋಗಲಿಲ್ಲ. ಮತ್ತು ಅಲ್ಪ ಸ್ವಲ್ಪ ಇದ್ದ ಕನೆಕ್ಷನ್ ಸಹ ಬ್ರೇಕ್ ಆಯಿತು.

ಆ ಹೊತ್ತಲ್ಲಿ ಅಮ್ಮ ಹೇಳಿದ ಮಾತು ನೆನಪಿದೆ. ನಾವು ಬ್ಯುಸಿನೆಸ್ ನಲ್ಲಿ ಇದ್ದವರು. ನಮ್ಮ ಪ್ರೆಸಿಗೆ ಬಿಜೆಪಿ ಯವರೂ ಬರುತ್ತಾರೆ, ಕಾಂಗ್ರೆಸ್ ನವರು ಬರುತ್ತಾರೆ. ಈಗ ನೀನು ಜಾಸ್ತಿ ಎಬಿವಿಪಿ ಜೊತೆ ಗುರುತಿಸಿ ಕೊಂಡರೆ ಮುಂದೆ ಕಾಂಗ್ರೆಸ್ ನವರೂ ನಮ್ಮಲ್ಲಿ ಬರಲ್ಲ. ಹಾಗಂತ ಇದನ್ನು ಯಾರೂ ಸಹ ಪಬ್ಲಿಕ್ ಆಗಿ ಹೇಳಲ್ಲ. ಸಮಾಜದ ಸೂಕ್ಷ್ಮಗಳು ಇವು. ನಮ್ಮ ಅಜ್ಜ ಹೇಗೆ ರಾಜಕೀಯ ಬಣಗಳಿಂದ ತೊಂದರೆಗೆ ಒಳಗಾಗ ಬೇಕಾಯಿತು ಅನ್ನುವುದನ್ನು ವಿವರಿಸಿದರು. 

ಆದರೆ ನಾನು ಆಗ ಅಮ್ಮನ ಮಾತನ್ನು ಕೇಳದೇ ಎಬಿವಿಪಿಯಲ್ಲಿ ಇದ್ದಿದ್ದರೆ ಏನಾಗ್ತಾ ಇತ್ತು ಗೊತ್ತಿಲ್ಲ. ಆದರೆ ಅದನ್ನು ಬಿಟ್ಟು ಬಂದಿದ್ದಕ್ಕೆ ನನ್ನ ಗೆಳತಿ ನನಗೆ ವಾಪಾಸ್ಸು ಸಿಕ್ಕಿದಳು. ಕೊನೆಗೆ ಅಷ್ಟೇ ಬೇಕಾಗಿದ್ದು.

ಅದೂ ಇವತ್ತಿಗೂ ನಿಜ ಕೂಡ. ನಾವು ಒಂದು ಪಕ್ಷ, ಪಂಥ ಅಂತ ಗುರುತಿಸಿ ಕೊಂಡರೆ ಉಳಿದವರು ನಾವು ಏಷ್ಟೋ ಒಳ್ಳೆಯದೇ ಮಾಡಿರಲಿ, ಸಾಧಿಸಿರಲಿ ಅದನ್ನೆಲ್ಲ ಪ್ರತಿ ಪಕ್ಷ, ಪ್ರತಿ ಪಂಥ ಅಂತ ಒಂದೇ ಕ್ಷಣದಲ್ಲಿ ನಿರ್ನಾಮ ಮಾಡಿ ಹಾಕುತ್ತಾರೆ. ಇದು ರಾಜಕೀಯ ಪಕ್ಷ ಮತ್ತು ಸಿದ್ದಾಂತ ಅನ್ನೋದೇ ಆಗ ಬೇಕಿಲ್ಲ. ಎರಡೂ ಗುಂಪುಗಳ ಮಧ್ಯೆ ಯಾರದ್ದು ಬಲ ಇರುತ್ತೋ ಅವನೇ ಮೇಲುಗೈ.

ಹಾಗಂತ ಸುಮ್ಮನಿರುವುದು  ಇವತ್ತಿನ ದಿನಗಳಲ್ಲಿ ಸಾಧ್ಯವಿಲ್ಲ. ಆದರೆ ಏನೇ ಹೇಳಿದರೂ ಅದನ್ನು ಯಾವ ಬಣಕ್ಕೆ ಸೇರಿದವರು ಅನ್ನುವುದರ ಮೇಲೆ ಆ ಮಾತಿಗೆ ಪ್ರಾಮುಖ್ಯತೆ ಬರುವುದನ್ನು ತಡೆಯುವುದು ಸಹ ಸಾಧ್ಯವಿಲ್ಲ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: