ಹತ್ತಿರದೆಲ್ಲೊ ಬಿದ್ದ ಮಿಂಚಿನ ಸದ್ದಿನೊಂದಿಗೆ ನನ್ನ ನಿದ್ದೆ ಹಾರಿಹೋಯಿತು. ಕಣ್ತೆರೆದಾಗ ಎದುರಿಗೆ ಕಂಡ ಕಪ್ಪು ಆಕೃತಿ ಇನ್ನಷ್ಟು ಬೆಚ್ಚಿ ಬೀಳಿಸಿತು. ಹಣತೆಯ ಬೆಳಕು ಸ್ವಲ್ಪ ಪ್ರಖರವಾದಾಗ, ಅರೆ! ಇದೆನಿದು? ಅಭಿಸಾರಿಕೆ. ಅದೂ ಹೊತ್ತಲ್ಲದ ಹೊತ್ತಲ್ಲಿ. ಮಂಚದ ಆ ತುದಿಯಲ್ಲಿ ಕಂಭಕ್ಕೊರಗಿ ಮುದುರಿ ಕುಳಿತಿದ್ದಾಳೆ. ನಿಧಾನವಾಗಿ ಹೆಗಲ ಮೇಲೆ ಕೈಯನ್ನಿಟ್ಟೆ. ತಿರುಗಿ ನೋಡಿದವಳೇ ನನ್ನ ಎದೆಯಲ್ಲಿ ಮುಖವಿಟ್ಟು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಕಣ್ಣಿನಿಂದ ಒಂದೇ ಸಮನೆ ಅಶ್ರುಧಾರೆ. ಹೊರಗಿನ ಮಳೆಯೊಡನೆ ಸ್ಪರ್ಧಿಸುವಂತಿದೆ. ಓಹ್! ನಿಧಾನವಾಗಿ ಅಕೆಯನ್ನು ಬಳಸಿಕೊಂಡು ದಿಂಬಿಗೆ ಒರಗಿದೆ. ಮಳೆ ಇನ್ನೆನು ನಿಲ್ಲುತ್ತೆ ಅಂದುಕೊಳ್ಳುತ್ತಿರುವಾಗ ಈಕೆ ಅತ್ತು ಅತ್ತು ಕೆಂಪಾಗಿ ಸೋತಿದ್ದಳು. ಗಾಳಿಗೆ ಹಾರುತ್ತಿದ್ದ ಮುಂದಲೆಗಳನ್ನು ಹಾಗೆ ಹಿಂದೆ ತಳ್ಳಿ ಹರಡಿ ಹೋಗಿದ್ದ ಮೇಲು ವಸ್ತ್ರವನ್ನು ಸರಿಪಡಿಸಿದೆ. ಅಷ್ಟರಲ್ಲಿ ಜೋರಾಗಿ ಬೀಸಿದ ಗಾಳಿಗೆ ಎದುರಿಗಿನ ದೀಪ ನಂದಿಹೋಯಿತು.
ಕೆರೆಯ ಪಕ್ಕದ ಆ ಕಲ್ಲು ಬಂಡೆಯನ್ನು ಏರಿ ಕುಳಿತಿರುವ ಆಕೆ ಚಂದ್ರಿಕೆ. ಆ ಕಾಲದ ಪ್ರಖ್ಯಾತ ವೈಶ್ಯೆ. ಅರವತ್ತನಾಲ್ಕು ವಿದ್ಯೆಗಳಲ್ಲಿ ಅಗ್ರಪ್ರವೀಣೆ. ಆಕೆಯ ಒಂದು ದರ್ಶನಕ್ಕಾಗಿ ದೂರದ ಪ್ರಾಂತ್ಯಗಳಿಂದ ಬರುವ ಜನರಿದ್ದರು. ಆದರೆ ಆಕೆಯೋ ಅದೇ ಊರಿನ ಮೋಹನಾಂಗನಿಗೆ ಮನಸೋತಿದ್ದಳು. ವಸಂತ ಹಬ್ಬದಲ್ಲಿ ಊರ ಪ್ರಮುಖನೇ ಅಂಗದನನ್ನು ಪರಿಚಯಿಸಿದ್ದ. ಅದಕ್ಕೂ ಮುಂದಿನ ಮಿಲನೋತ್ಸವದಲ್ಲಿ ಅಂಗದನೇ ಈಕೆಯನ್ನು ಕಾಡಿ, ಬೇಡಿ ಒಲಿಸಿಕೊಂಡಿದ್ದ. ಅಷ್ಟು ಸುಲಭವಾಗಿ ಒಲಿಯದ ಈಕೆ ಇವನಲ್ಲಿ ಅನುರಕ್ತಳಾಗಿದ್ದು ಉಳಿದ ರಸಿಕೋತ್ತಮರ ಹುಬ್ಬೇರಿಸಿತ್ತು. ದಿನಕಳೆದಂತೆ ಏರುತ್ತಿರುವ ಇವರಿಬ್ಬರ ಪ್ರೇಮ ನೋಡಿ ಚಕೋರವೇ ತಲೆ ಬಾಗಿ ನಾಚಿತು. ಬೆಳದಿಂಗಳೇ ಬೆಳಗಾಯಿತು. ಸೂರ್ಯನೂ ಚಂದ್ರನಾದ. ಆ ಒಂದು ದುರಳ ದಿನ ಆಸ್ಥಾನದಿಂದ ಕರೆ ಬಂತು. ಮಗದೊಂದು ದೇಶದ ಪಂಡಿತನ ಎದುರು ಈಕೆಯ ವಿದ್ವತ್ತನ್ನು ಒರೆ ಹಚ್ಚುವ ಶುಭ ಘಳಿಗೆ. ಅಲ್ಲಿಂದ ಮರಳಿ ವಿಜಯೋತ್ಸವದಿಂದ ಬಂದವಳನ್ನು ಎದುರುಗೊಂಡವರಲ್ಲಿ ಅಂಗದನಿರಲಿಲ್ಲ. ಕರೆ ಕಳಿಸಿದ್ದಕ್ಕೆ ಪ್ರತ್ತ್ಯುತ್ತರವಾಗಿ ಮದುವೆಯ ಕರೆಯೋಲೆ ಬಂತು. ತನ್ನವನು ಎನ್ನುವ ಅಭಿಮಾನಕ್ಕೆ ಕಡಿವಾಣ ಬಿತ್ತು. ಅತ್ತೂ ಕರೆದು ಎಲ್ಲವೂ ಮುಗಿದು ಎಲ್ಲರೊಟ್ಟಿಗೆ ಈಕೆಯೂ ಆತನ ವಿವಾಹಕ್ಕೆ ತೆರಳಿದಳು. ಎಲ್ಲರಿಗಿಂತ ಜಾಸ್ತಿ ನರ್ತಿಸಿದಳು. ಕೊನೆಗೆ ಸುಸ್ತಾಗಿ ಮಂಟಪದ ಪಕ್ಕದಲ್ಲಿದ್ದ ಕೆರೆಬಂಡೆ ಏರಿ ಕುಳಿತಳು. ಬೆಳದಿಂಗಳ ಉತ್ಕಟ ಪ್ರೇಮರಾತ್ರಿಯೊಂದರಲ್ಲಿ ಆತ ತೊಡಿಸಿದ್ದ ಕೆಂಪು ಹವಳದ ಬಳೆ ಬಿಸಿಲಿಗೆ ಇನ್ನೂ ಕೆಂಪಾಗಿ ಹೊಳೆಯುತ್ತಿತ್ತು. ನಿಧಾನಕ್ಕೆ ಕಳಚಿ ಕೈಯಲ್ಲಿ ಹಿಡಿದಳು. ಅದನ್ನು ನೋಡುತ್ತ ತಡೆಯಲಾಗದೇ ಎದ್ದು ಕೆರೆಯ ಒಂದೊಂದೆ ಮೆಟ್ಟಳಿಳಿಯತೊಡಗಿದಳು.
ಆ ಕೆರೆಯ ಇನ್ನೊಂದು ಬದಿ ಬಟ್ಟೆ ಒಗೆಯುತ್ತಿದ್ದ ಅಗಸ ರಾವೂತನ ಮರಿ ಮಿಮ್ಮಗನ ಪ್ರಕಾರ ಚಂದ್ರಿಕೆ ನೀರಿನಿಂದ ಎದ್ದು ಬರುತ್ತಿದ್ದನ್ನು ಮುತ್ತಾತ ನೋಡಿದ್ದನಂತೆ, ಆ ಊರಿನಲ್ಲೇ ಆಗ ಪೂಜೆ ಮಾಡುತ್ತಿದ್ದ ಅರ್ಚಕ ಕೇಶವಾಚಾರ್ಯನ ಮಿಮ್ಮಗನ ಪ್ರಕಾರ ದೇವಿಕೆರೆ(ಈಗಿನ ಹೆಸರು) ಸ್ವಚ್ಛಗೊಳಿಸಿದಾಗ ಸಿಕ್ಕ ಅಸ್ಥಿ ಪಂಜರದ ಕೈಯಲ್ಲಿ ಕೆಂಪು ಹವಳದ ಬಳೆ ಹಾಗೆ ಇತ್ತಂತೆ, ಈಗ ಮೋಟಾರ್ ಇಟ್ಟುಕೊಂಡಿರುವ ಪಲನ ಮಿಮ್ಮಗನ ಪ್ರಕಾರ ಆಕೆ ಹಾಗೇ ಈಚೆ ದಡದಿಂದ ಎದ್ದು ಬಂದವಲೇ ಅವಳ ಮೈ ಮೇಲಿದ್ದ ಎಲ್ಲ ಆಭರಣಗಳನ್ನು ಪಲನಿಗೆ ವಹಿಸಿ ಹೆಳಹೆಸರಿಲ್ಲದ ಊರಿಗೆ ಹೊರಟು ಹೋದಳಂತೆ, ಆ ಕೆಂಪು ಬಳೆ ಇನ್ನೂ ಆತನ ತಾತನ ತಿಜೋರಿಯಲ್ಲಿದೆಯಂತೆ,
ಸೆಪ್ಟೆಂಬರ್ 9, 2009 ರಲ್ಲಿ 4:50 ಅಪರಾಹ್ನ |
Wonderful!
LikeLike
ನವೆಂಬರ್ 9, 2009 ರಲ್ಲಿ 11:16 ಅಪರಾಹ್ನ |
ನಿಮ್ಮ ಬ್ಲಾಗ್ ನೋಡಿರಲಿಲ್ಲ. ಸಿರಿ ಫೋನ್ ಮಾಡಿ ಅದ್ಬುತವಾಗಿದೆ ಅಂದಳು. ಮೊದಲ ಸಾಲೇ ಸೆಳೆಯಿತು. ಸಿಡಿಲನ್ನು ಮಿಂಚಿನ ಸದ್ದು ಎಂದು ಕರೆಯಬಹುದು ಅಂತ ಗೊತ್ತೇ ಇರಲಿಲ್ಲ. ಲವ್ಲೀ
LikeLike
ನವೆಂಬರ್ 10, 2009 ರಲ್ಲಿ 4:52 ಅಪರಾಹ್ನ |
wonderful sopu …………no words to explain amazing, greatjob!!!!!!!
LikeLike
ನವೆಂಬರ್ 26, 2009 ರಲ್ಲಿ 2:31 ಅಪರಾಹ್ನ |
ವಾಹ್…ಬಹಳ ಚೆನ್ನಾಗಿದೆ.
LikeLike
ಜನವರಿ 3, 2010 ರಲ್ಲಿ 5:22 ಅಪರಾಹ್ನ |
ಸುನಾಥ, ಸವಿತಾ,ಚಂದಿನ,ಜೋಗಿ – ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ಜೋಗಿ-ಮೊದಲು ಸಿರಿಯ ಹೊಗಳಿಕೆಗೆ ಥ್ಯಾಂಕ್ಸ್ ಹೇಳಬೇಕು.( ಓವರ್ ಕಾಂಪ್ಲಿಮೆಂಟ್ ಆದರೂ ಸಹಿತ)
ನನಗೆ ನಾ ಹೇಳ ಹೊರಟಿದ್ದು ಸಿಡಿಲಾಗಿತ್ತು ಅಂತ ನೀವು ಹೇಳಿದ ಮೇಲೆ ಗೊತ್ತಾಗಿದ್ದು. ನಾನು ಮಾತಾಡುವಾಗ ಸಿಡಿಲಿಗೂ ಸಹ ಮಿಂಚು ಎಂದು ಹೇಳುವುದರಿಂದ ಇಲ್ಲಿ ಹೀಗೆ ಬಳಸಿದ್ದು. ನೀವು ಗುರುತಿಸಿದ ಮೇಲೆ ಓಹ್! ಇದು ಹೀಗೂ ಅರ್ಥ ಕೊಡಬಲ್ಲದು ಎಂದು ಗೊತ್ತಾಗಿದ್ದು 😀
LikeLike