ಸುಶೀಲಾ ರಮಣಾಕಾಂತ ಅಯ್ಯರ್ ಹೆಸರು ಪರಿಚಿತರ, ನೆಂಟಸ್ಥರ ಸಮೂಹದಲ್ಲಿ ಬಹಳ ಪ್ರಸಿದ್ಧಿಯನ್ನು ಪಡೆದಿತ್ತು. ಆಕೆಯ ಹೆಸರು ನೆನಸದೇ ಹರಟೆಕಟ್ಟೆಗಳಲ್ಲಿ, ಕಾರ್ಯದ ಮನೆಗಳಲ್ಲಿ ಮಾತುಗಳೇ ಮುಂದುವರೆಯುತ್ತಿರಲಿಲ್ಲ. ಕಾರಣವಿಷ್ಟೇ. ಆಕೆಯನ್ನು ಸತತವಾಗಿ ಕಾಡುತಿದ್ದ ವಾಯುಭಾಧೆ. ಏನೇ ಮದ್ದು ಮಾಡಿದರೂ ನಾಟಿರಲಿಲ್ಲ. ಮೊನ್ನೆ ಹೇಳಿದ ಆಚಾರ್ಯರ ಚೂರ್ಣವನ್ನು ದಿನವೂ ನೆಕ್ಕಿ, ನುಂಗಿ ನೀರು ಕುಡಿದರೂ ವಾಯು ಕರಗಲಿಲ್ಲ. ಬೇಕಲ್ಲದ ಹೊತ್ತಲ್ಲಿ ಸ್ವತಂತ್ರವಾಗಿ ಸದ್ದಿಲ್ಲದೆ ಹೊರಬಂದು ತನ್ನ ಶಕ್ತಿ ಸಾಮರ್ಥ್ಯವನ್ನು ಮೆರೆಯುತಿತ್ತು. ಆಕೆಗೆ ಗೊತ್ತಿದ್ದೂ ಗೊತ್ತಿಲ್ಲದವಳಂತೆ ನಟಿಸಿ ಬೇಸರ ಮೂಡಿ ಈಗ ತನ್ನದೇನೂ ತಪ್ಪಿಲ್ಲವೆಂಬ ಮನಭಾವ ಮೂಡಿ ನಿರುಮ್ಮಳವಾಗಿರುತ್ತಿದ್ದಳು. ಈಕೆ ಕೂರುತಿದ್ದ ಆಫೀಸಿನ ಜಾಗದ ಆಸುಪಾಸಿನಲ್ಲಿ ಆಫೀಸ್ ಬಾಯ್ ಜಾಸ್ತಿ ರೂಮ್ ಫ್ರೆಶನರ್ ಸ್ಪ್ರೇ ಮಾಡಿದರೂ ಅದು ತನಗಲ್ಲವೆಂಬಂತೆ ಇರುತ್ತಿದ್ದಳು.
ಹಾಗಂತ ಇದು ಈಕೆಗೆ ಈಗೀಗ ಪ್ರಾರಂಭವಾಗಿದ್ದಲ್ಲ. ಬಾಲ್ಯದಿಂದಲೂ ಇದೇ. ಡಿಡಿಯಲ್ಲಿ ಚೆಂದದ ಸಿನೆಮಾ ಬರುವಾಗ, ಮಹಾಭಾರತದಲ್ಲಿ ಭೀಮ ಗಧೆ ಎತ್ತುವಾಗ ಈಕೆಯ ಗಂಧ ಗಾಳಿಯಲ್ಲಿ ಬೆರೆತು ನಾತವಾಗಿ ಎಲ್ಲರ ಮೂಗ ಅರಳಿಸುತಿತ್ತು. ಕೊನೆ ಕೊನೆಗೆ ಯಾರು ಹೂಸು ಬಿಟ್ಟರೂ ಎಲ್ಲರೂ ಈಕೆಯ ಕಡೆಗೆ ಬೆಟ್ಟು ಮಾಡುತ್ತಿದ್ದರಿಂದ ಜಾಣರೂ, ಕಳ್ಳರೂ ಆದವರು ಮೆತ್ತಗೆ ಹುಳ್ಳನಗೆ ಬೀರುತಿದ್ದರು. ಕಾಲೇಜಿನ ಫೈನಲ್ ಎಕ್ಸಾಮಿನಲ್ಲಿ ಈಕೆಯ ಹಿಂದೆ ಕೂತಿದ್ದ ಗಟ್ಟಿಗಿತ್ತಿ ಪಾರೂ ಒತ್ತಿ ಹಿಡಿದಿದ್ದ ಕರ್ಚೀಫಿನಲ್ಲೇ ಗಳಗಳನೇ ಕಾರಿಕೊಂಡಿದ್ದಳು. ಮದುವೆಯಾದ ಮೇಲೆ ಊದುಬತ್ತಿ ಹಚ್ಚಿಟ್ಟಿದ್ದರೂ ಮಿಲನದ ಹೊತ್ತಲ್ಲೇ ಕಷ್ಟಪಟ್ಟರೂ ತಡೆಯಲಾಗದೇ ಸುಗಂಧ ಹರಿಸಿ, ಗಂಡನೆಂಬವನು ಕೂಗಾಡಿ ಪಕ್ಕದಲ್ಲಿ ಆಪತ್ಕಾಲಕ್ಕೆಂದು ಇಟ್ಟುಕೊಂಡಿದ್ದ ಅರ್ಧ ಡಬ್ಬಿ ವಿಕ್ಸ್ ಮೂಗಿಗೆ ಬಳಿದು ತಿರುವಿ ಮಲಗಿಕೊಂಡಿದ್ದ.
ಇಂತಿಪ್ಪ ಇವಳು ಆ ರಾತ್ರಿ ಯಥಾಪ್ರಕಾರ ಲಾಗ್ ಔಟ್ ಆಗಿ ಐಟಿ ಪಾರ್ಕಿನ ಇಳಿದಾರಿಯಲ್ಲಿ ಒಬ್ಬಳೇ ಬರುತ್ತಿದ್ದಳು. ಆವತ್ತು ಅಲ್ಲಿನ ಜಾಸ್ತಿ ಕಂಪನಿಗಳಿಗೆ ವಿಕೆಂಡ್ ಇದ್ದುದರಿಂದ ಜನಸಂಚಾರ ಖಾಲಿಯಿದ್ದು, ಐಟಿ ಪಾರ್ಕಿನ ಎರಡೂ ಕಡೆಯಲ್ಲಿದ್ದ ನ್ಯಾಶನಲ್ ಪಾರ್ಕಿನಿಂದ ಗಾಳಿ ರೊಯ್ಯನೇ ಬೀಸುತಿತ್ತು. ಇನ್ನೇನು ಮುಖ್ಯ ಕಮಾನು ಬಂದು ಅದನ್ನು ದಾಟಿ ಆಟೋ ಸ್ಟಾಂಡಿಗೆ ಹೋಗಬೇಕು ಅಂದುಕೊಳ್ಳುವುದಕ್ಕಿಂತ ಮೊದಲೇ ದುತ್ ಎಂದು ನೆಗೆದು ನಿಂತಿತ್ತು ಅದು. ಈಕೆಗೆ ಆ ಚಳಿಗೂ ಮೈ ಬೆವರಿ, ಗಂಟಲೊಣಗಿ ಡೆಸ್ಕಿನಲ್ಲಿ ಹೊಸ ವಾಟರ್ ಬಾಟಲ್ ಮರೆತದ್ದು ನೆನಪಾಗಿ… ಗಡಗಡನೇ ನಡುಗಲಾರಂಭಿಸಿದಳು.
ಹಲವು ದಿನಗಳಿಂದ ಈ ದಿಂಡೋಶಿಯ ಪಾರ್ಕಿನ ಹೊರವಲಯಗಳಲ್ಲಿನ ಬೀದಿನಾಯಿಗಳನ್ನು ತಿಂದು ಸೊಂಪಾಗಿ, ಅಲ್ಲಿನ ಬೀದಿಗಳ ಸ್ವಘೋಷಿತ ಸಂಜೆ ಕರ್ಫ್ಯೂಗೆ ಕಾರಣಕರ್ತನಾಗಿದ್ದ ಅದು ತನ್ನೆದುರು ದೈನೇಶಿ ಸ್ಥಿತಿಯಲ್ಲಿ ನಿಂತಿದ್ದ ಬಡುಕಲು ಶರೀರವನ್ನು ಗುರಾಯಿಸುತ್ತಿದ್ದಾಗ, ಆಗಿನಿಂದ ಉಸಿರು ಬಿಗಿಹಿಡಿದು ನಿಂತಿದ್ದ ಸುಶೀಲೆ ಒಮ್ಮೇಲೆ ಜೋರಾಗಿ ಉಸಿರು ಬಿಟ್ಟಳು. ಜೊತೆಗೆ ಸಣ್ಣದಾಗಿ ನಾದವೂ ಹೊರಹೊಮ್ಮಿ, ಕೆಲಹೊತ್ತಿನ ನಂತರ ಆ ಸುಗಂಧ ಇನ್ನೇನು ಎರಗುವಂತಿದ್ದ ಆ ಚಿರತೆಯ ನಾಸಿಕವನ್ನು ಹೊಕ್ಕಿತು. ಅದು ಒಮ್ಮೇಲೆ ಹೊರಚಾಚಿದ್ದ ಕೊರೆಹೊಲ್ಲಿನ ಜೊತೆ ನಾಲಿಗೆಯನ್ನು ಹೊರಹಾಕಿ ಆಕೆಯ ಮುಖದ ಎದುರಿಗೆ ಪ್ರದರ್ಶಿಸಿ ತಲೆ ಹೊರಳಿಸಿ ಓಡಿಹೋಯಿತು. ಈಕೆ ಬದುಕಿದೆಯಾ ಬಡಜೀವವೇ ಎಂದು ಒಂದೇ ಉಸಿರಿಗೆ ಕಮಾನಿನ ಹೊರ ಓಡಿದಳು.
ಆ ದಿನದ ನಂತ ಕೆಲದಿನಗಳವರೆಗೆ ದಿಂಡೋಶಿಯ ಅಳಿದುಳಿದ ನಾಯಿಗಳು ರಾತ್ರಿಯಿಂದ ಬೆಳಗಿನವರೆಗೆ ಸುಖವಾಗಿ ಕೂಗಿಕೊಂಡಿದ್ದವು. ಸ್ವಲ್ಪದಿನ ಕಳೆದ ಮೇಲೆ ಪೇಪರಿನ ಒಳಪೇಜಿನಲ್ಲಿ ಸುದ್ದಿಯೊಂದು ಪ್ರಕಟವಾಗಿತ್ತು. ಅರಣ್ಯ ಇಲಾಖೆಗೆ ಪಾರ್ಕಿನ ಬಳಿ ಚಿರತೆಯ ಹೆಣವೊಂದು ಸಿಕ್ಕಿದೆಯೆಂದು, ಅದರ ಸಾವಿಗೆ ಕಾರಣವಿನ್ನೂ ದೃಡವಾಗಿಲ್ಲವೆಂದು.
ಸೆಪ್ಟೆಂಬರ್ ೨೫, ೨೦೧೦
(ಕೆಂಡಸಂಪಿಗೆಗೆ ಕಳಿಸಿದ್ದೆ. ಅದರಲ್ಲಿ ಬರಲಿಲ್ಲ
ಅದಕ್ಕೆ ನಂದೇ ಜಾಗದಲ್ಲಿ/ಬ್ಲಾಗಿನಲ್ಲಿ ಹಾಕಿಕೊಳ್ತಾ ಇದ್ದೇನೆ
December 19, 2010 at 1:10 pm |
ಹಹಾ! ಕನ್ನಡ ಪ್ರಭದ ಸಾಪ್ತಾಹಿಕದಲ್ಲಿ ಈಗೊಂದು ಹದಿನೈದು ದಿನದ ಹಿಂದೆ, “ಕನ್ನಡ ಸಾಹಿತ್ಯದಲ್ಲಿ ಇತ್ತೀಚೆಗೆ ಜಾಸ್ತಿಯಾಗುತ್ತಿರುವ ‘ಹೂಸು’ವಾಸನೆ” ಅಂತ ಒಂದು ರಿಸರ್ಚ್ ಆರ್ಟಿಕಲ್ ಮಾಡಿದಿದ್ರು. ಮುಂಚೇನೇ ಸಿಕ್ಕಿದಿದ್ರೆ ನಿಮ್ದೂ ಒಂದು ಸೇರ್ಕೋತಿತ್ತೇನೋ ಆ ಕಂಪೈಲೇಶನ್ನಿನಲ್ಲಿ!
ಆಕೆ ಹಿಂದಿನ ಜನ್ಮದಲ್ಲಿ ನರಿ ಆಗಿದ್ಲೇನೋ.. ನರಿ ತನ್ನ ಶತ್ರುಗಳಿಂದ ಪಾರಾಗೋಕೆ ಇದೇ ಟ್ರಿಕ್ಕು ಬಳಸತ್ತೆ ಅಂತ ಎಲ್ಲೋ ಓದಿದಂಗಿತ್ತು..
December 19, 2010 at 7:54 pm |
December 20, 2010 at 9:35 am |
ayyabba..hechchaaytu.. vaasane..
November 14, 2011 at 12:54 am |
ಚೆನ್ನಾಗಿದ್ದು..ಒಳ್ಳೇ ಹಾಸ್ಯ..:-) ಕೆಂಡಸಂಪಿಗೆಗೆ ನಾನೂ ಒಮ್ಮೆ ಕಳ್ಸಿದ್ದಿ. ಆದ್ರೆ ಅದು ಬರ್ಲೆ.. ಆಮೇಲೆ ಕಳ್ಸದನ್ನ ಬಿಟ್ಟು ಟೈಮಾದಾಗ ಬ್ಲಾಗಲ್ಲೇ ಬರೀತಿರ್ತಿ